ಪೆನ್ಸಿಲ್ ತಯಾರಿಕಾ ಘಟಕದಿಂದ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಲು ಡಿವೈಎಫ್ಐ ಒತ್ತಾಯ

Spread the love

ಪೆನ್ಸಿಲ್ ತಯಾರಿಕಾ ಘಟಕದಿಂದ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಲು ಡಿವೈಎಫ್ಐ ಒತ್ತಾಯ

ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ 10 ತಿಂಗಳ ಹಿಂದೆ ಪ್ರಾರಂಭಗೊಂಡ ಬದ್ರಿನಾಥ್ ಎಂಟರ್ ಪ್ರೈಸಸ್ ಎಂಬ ಪೆನ್ಸಿಲ್ ತಯಾರಿಕ ಸಂಸ್ಥೆಯು ಜನರಿಗೆ ಸ್ವ ಉದ್ಯೋಗ ಸೃಷ್ಟಿಸುವ ಹೆಸರಿನಲ್ಲಿ ಜಿಲ್ಲೆಯ ನೂರಾರು ಜನರಿಂದ ತಲಾ ರೂ 80000/- ದಂತೆ ಪಡೆದು ವೆಲ್ವೆಟ್ ಪೆನ್ಸಿಲ್ ಮೆಷಿನ್ ನೀಡುವ ಮೂಲಕ ಕೋಟ್ಯಾಂತರ ರೂಪಾಯಿ ವಂಚಿಸಿದ ಮನುಚಂದ್ರ ಹಾಗೂ ಪ್ರಕರಣದಲ್ಲಿ ಶಾಮೀಲಾಗಿರುವವರ ಮೇಲೆ ಜಿಲ್ಲಾಡಳಿತವು ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.

ಸಂಸ್ಥೆಯ ಮಾಲಕ ಮನುಚಂದ್ರ ಎಂಬವನು ಕಳೆದ ಒಂದು ವರುಷಗಳಿಂದ ಸ್ಥಳೀಯ ಕೆಲವೊಂದು ಪ್ರಭಾವಿಗಳ ಮೂಲಕ ಸ್ಥಳೀಯ ಜನರ ವಿಶ್ವಾಸಗಳಿಸಿ ಆ ಮೂಲಕ ಜನರಿಗೆ ಸ್ವಂತ ಸ್ಥಳದಲ್ಲೇ ಸ್ವ ಉದ್ಯೋಗ ಮಾಡಿ ತಿಂಗಳಿಗೆ 20000/- ದಷ್ಟು ಆದಾಯ ಗಳಿಸಬಹುದೆಂಬ ಆಸೆ ಹುಟ್ಟಿಸಿದರು. ಇದನ್ನು ನಂಬಿದ ಜನ ಸಾಲಸೋಲ ಮಾಡಿ ಹಾಗೂ ಕೆಲವು ಆಸ್ತಿ ಪಾಸ್ತಿ ಅಡವಿಟ್ಟು ಮೆಷಿನ್ ಖರೀದಿಸಿರುತ್ತಾರೆ. ಇದರಲ್ಲಿ ಬಹುತೇಕರು ಸರಿಯಾದ ಉದ್ಯೋಗವಿಲ್ಲದೆ , ವಿದೇಶಗಳಿಂದ ಉದ್ಯೋಗ ಕಳಕೊಂಡು ಮರಳಿ ಬಂದಿರುವವರೇ ವಂಚನೆಗೊಳಗಾಗಿರುತ್ತಾರೆ. ಈ ಮೆಷಿನ್ ನಿಜವಾದ ಮುಖಬೆಲೆ ಅಂದಾಜು 15000/ – ಆದರೆ ಕಂಪೆನಿ 4 ಪಟ್ಟು ಹೆಚ್ಚಿನ ಹಣವನ್ನು ವಸೂಲಿ ಮಾಡಿ ವಂಚಿಸಿದೆ. ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ವಂಚಕ ಮದುಚಂದ್ರ ಜಾಮೀನು ಮೇಲೆ ಹೊರ ಬಂದು ತಲೆಮರೆಸಿಕೊಂಡಿದ್ದಾನೆ. ಆದರೆ ವಂಚನೆಗೊಳಗಾದ ಅಮಾಯಕರಿಗೆ ಹಣ ಸಿಗುವ ಯಾವುದೇ ಲಕ್ಷಣಗಳಿಲ್ಲ. ಅದಲ್ಲದೇ ಇತನ ವಂಚನೆಗೆ ಸಹಕಾರ ನೀಡಿದವರನ್ನು ಪೋಲೀಸರು ಯಾವುದೇ ತನಿಖೆಗೊಳಪಡಿಸಲು ಇಲ್ಲ. ಒಟ್ಟು ಮೆಷಿನ್ ಖರೀದಿಸಿದ ಜನ ಒಂದು ಕಡೆ ಉದ್ಯೋಗವೂ ಇಲ್ಲದೇ ಹೂಡಿದ ಹಣವೂ ಇಲ್ಲದೇ ಕಂಗಾಲಾಗಿರುತ್ತಾರೆ. ಈಗಾಗಲೇ ಈ ರೀತಿಯಲ್ಲಿಯೇ ಬೇರೆ ಬೇರೆ ಯೋಜನೆಗಳ ಮೂಲಕ ಬಹುತೇಕ ಬ್ಲೇಡ್ ಕಂಪೆನಿಗಳು ಜಿಲ್ಲೆಯಲ್ಲಿ ಬಹಳಷ್ಟು ಜನರ ಹಣವನ್ನು ಊಟಿಮಾಡುವ ಮೂಲಕ ವಂಚಿಸಿ ಬೀದಿಪಾಲು ಮಾಡಿ ಹೋಗಿವೆ. ಈ ರೀತಿಯ ಕಂಪೆನಿಗಳು ಜನರನ್ನು ಮೋಸ ಮಾಡುವ ಮೊದಲೇ ಇಂತಹ ಕಂಪೆನಿಗಳು ಬರದ ಹಾಗೇ ಜಿಲ್ಲಾಡಳಿತ ಈವರೆಗೂ ಮುಂಜಾಗ್ರತೆ ವಹಿಸದಿರುವುದು ದುರಂತ.

ಈ ಎಲ್ಲಾ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಈ ಕೂಡಲೇ ಪ್ರಕರಣವನ್ನು ಕೈಗೆತ್ತಿಕೊಂಡು ಹಣ ವಂಚನೆ ಪ್ರಕರಣದ ರುವಾರಿ ಮನುಚಂದ್ರ ಹಾಗು ಶಾಮೀಲಾಗಿರುವ ಎಲ್ಲರನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಕಠಿಣಕಾನೂನಿಗೆ ಒಳಪಡಿಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಅದ್ಯಕ್ಷರಾದ ಬಿಕೆ ಇಮ್ತಿಯಾಜ್ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love