ಪ್ರಮೋದ್ ಮಧ್ವರಾಜರ ಪರ ಕ್ಷೇತ್ರದಲ್ಲಿ ಪರಿವರ್ತನಾ ಗಾಳಿ – ಪಿ.ಸಿ ವಿಷ್ಣುನಾದ್

Spread the love

ಪ್ರಮೋದ್ ಮಧ್ವರಾಜರ ಪರ ಕ್ಷೇತ್ರದಲ್ಲಿ ಪರಿವರ್ತನಾ ಗಾಳಿ – ಪಿ.ಸಿ ವಿಷ್ಣುನಾದ್

ಉಡುಪಿ: ಚಿಕ್ಕಮಗಳೂರು ಕ್ಷೇತ್ರದಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳಾದ ಪ್ರಮೋದ್ ಮಧ್ವರಾಜರಿಗೆ ಈಗಾಗಲೇ ಪೂರಕ ವಾತಾವರಣ ಕಂಡು ಬಂದಿದ್ದು, ಅದನ್ನು ನಾವು ಉಡುಪಿ ಕ್ಷೇತ್ರದಲ್ಲಿಯೂ ನಿರೀಕ್ಷಿಸುತ್ತೇವೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳು ತೊಡಗಿಸಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಬ್ಲಾಕ್ ಹಾಗೂ ವಿವಿಧ ಘಟಕಗಳ ಚುನಾವಣಾ ಸಮಾಲೊಚನಾ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ್ ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆಯವರು ತಮ್ಮ ಕಾಲಾವಧಿಯಲ್ಲಿ ಕ್ಷೇತ್ರಕ್ಕೆ ಯಾವುದೇ ಯೋಜನೆಗಳನ್ನು ರೂಪಿಸದೆ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಸಂಪೂರ್ಣ ವಿಫಲತೆ ಹೊಂದಿದ್ದಾರೆ. ಇದನ್ನೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಮೋದ್ ಮಧ್ವರಾಜ್‍ರ ಪರವಾಗಿ ಮತ ಪರಿವರ್ತನೆಯಾಗುವಂತೆ ಕಾರ್ಯಯೋಜನೆ ರೂಪಿಸಬೇಕಾಗಿದೆ. ಕೇರಳದ ಗಡಿ ಪ್ರದೇಶವಾದ ವಯನಾಡು ಕ್ಷೇತ್ರದಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ರಾಹುಲ್ ಗಾಂಧಿಯವರು ಸ್ಪರ್ಧಿಸುತ್ತಿರುವುದರಿಂದ ಕರ್ನಾಟಕ ರಾಜ್ಯಕ್ಕೂ ಅದರ ಪ್ರಭಾವ ಬೀರುವುದರಲ್ಲಿ ಸಂಶಯವಿಲ್ಲ ಎಂದರು.

ಸುಳ್ಳು ಅಪಪ್ರಚಾರಗಳಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್‍ರಂತಹ ಕ್ರಿಯಾಶೀಲ ವ್ಯಕ್ತಿಗೆ ಸೋಲಾಗಿದೆ. ಆದರೆ ಈ ಬಾರಿ ಅದಾಗದಂತೆ ನಾವು ಎಚ್ಚರವಹಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ| ಜಯಮಾಲರವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಗಫೂರ್ ಹಾಗೂ ಜಿ.ಎ. ಬಾವ, ಪಕ್ಷದ ಮುಖಂಡರುಗಳಾದ ದಿನೇಶ್ ಪುತ್ರನ್, ವೆರೋನಿಕ ಕರ್ನೇಲಿಯೋ, ನವೀನ್ ಡಿ’ಸೋಜಾ ಮಂಗಳೂರು, ಭಾಸ್ಕರ್ ರಾವ್ ಕಿದಿಯೂರು, ದಿವಾಕರ್ ಕುಂದರ್, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಗೀತಾ ವಾಗ್ಳೆ, ಕ್ರಿಸ್ಟನ್ ಅಲ್ಮೇಡ, ವಿವಿಧ ಬ್ಲಾಕ್‍ಗಳ ಅಧ್ಯಕ್ಷರಾದ ಶೇಖರ್ ಮಡಿವಾಳ, ಮಂಜುನಾಥ ಪೂಜಾರಿ, ನವೀನ್‍ಚಂದ್ರ ಸುವರ್ಣ, ಸತೀಶ್ ಅಮೀನ್ ಪಡುಕೆರೆ, ಮಲ್ಯಾಡಿ ಶಿವರಾಮ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಶಶಿಧರ ಶೆಟ್ಟಿ ಎಲ್ಲೂರು, ಸುರೇಶ್ ನಾಯ್ಕ್, ರೋಶನಿ ಒಲಿವರ್, ಡಾ| ಸುನಿತಾ ಶೆಟ್ಟಿ, ಕೀರ್ತಿ ಶೆಟ್ಟಿ, ಜನಾರ್ದನ ಭಂಡಾರ್ಕಾರ್, ಸತೀಶ್ ಪೂಜಾರಿ, ಹಬೀಬ್ ಅಲಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.


Spread the love