ಪ್ರಾಕೃತಿಕ ವಿಕೋಪ:- ಪ್ರತೀ ತಾಲೂಕಿಗೆ 30 ಲಕ್ಷ ಬಿಡುಗಡೆ : ಡಾ. ಕೆ.ಜಿ. ಜಗದೀಶ್

Spread the love

ಪ್ರಾಕೃತಿಕ ವಿಕೋಪ:- ಪ್ರತೀ ತಾಲೂಕಿಗೆ 30 ಲಕ್ಷ ಬಿಡುಗಡೆ : ಡಾ. ಕೆ.ಜಿ. ಜಗದೀಶ್

ಮ0ಗಳೂರು: ಮುಂಬರುವ ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ದುರಂತ, ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲೆಯ ಪ್ರತೀ ತಾಲೂಕಿಗೆ ರೂ.30 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮುಂಬರುವ ಮಳೆಗಾಲ ಸಿದ್ಧತಾ ಕಾರ್ಯಗಳ ಬಗ್ಗೆ ಅಧಿಕಾರಿಗಳ ಸಬೆ ನಡೆಸಿ ಮಾತನಾಡಿದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಹಾರ ನೀಡಲು ರೂ. 20 ಲಕ್ಷ ಹಾಗೂ ತುರ್ತು ಕಾಮಗಾರಿಗಳಿಗಾಗಿ 10 ಲಕ್ಷ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು ಜಿಲ್ಲೆಗೆ ಪ್ರಾಕೃತಿಕ ವಿಕೋಪದಡಿ ರೂ. 2 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಆಗಿಂದಾಗ್ಗೆ ಸಬೆ ನಡೆಸಿ ಪ್ರಾಕೃತಿಕ ಹಾನಿಗಳ ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ. ನೆರೆ, ನೀರು ನುಗ್ಗುವ ಪ್ರದೇಶಗಳನ್ನು ಮೊದಲೇ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈಜುಗಾರರ, ಬೋಟ್‍ಗಳ ಸಿದ್ಧತೆ ಮಾಡಿಕೊಳ್ಳಬೇಕು. ಮರ ಬಿದ್ದು ರಸ್ತೆ ತಡೆಯ ಪ್ರಕರಣಗಳನ್ನು ಕೂಡಲೇ ತೆರವುಗೊಳಿಸಲು ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯಚರಿಸುವ ಕಂಟ್ರೋಲ್ ರೂಂ ನಿರಂತರವಾಗಿ ಕಾರ್ಯಚರಿಸುತ್ತಿದ್ದು, ದೂರವಾಣಿ 1077ಗೆ ಸಾರ್ವಜನಿಕರು ಕರೆ ಮಾಡಬಹುದು. ಇದೇ ರೀತಿ ತಾಲೂಕು ಕಚೇರಿಯಲ್ಲೂ ಕಂಟ್ರೋಲ್ ರೂಂ. ತೆರೆಯಲಾಗುವುದು. ನಿರ್ಮಾಣ ಕಟ್ಟಡಗಳಲ್ಲಿ ನೀರು ನಿಲ್ಲದಂತೆ ಮುಂಜಾಗರೂಕತೆ ವಹಿಸಬೇಕು. ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ವಹಿಸುವಂತೆ ಡಾ.ಜಗದೀಶ್ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕಳೆದ 20 ವರ್ಷಗಳಿಂದ ನೆರೆ ಉಂಟಾಗಿರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ನದೀ ಪಾತ್ರದ ನಿವಾಸಿಗಳಿಗೆ ಅಗತ್ಯ ಮುಂಜಾಗರೂಕತೆ ನೀಡಬೇಕು. ಮೆಸ್ಕಾಂ, ಅರಣ್ಯ ಹಾಗೂ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತು, ತಾಲೂಕು ಪಂಚಾಯತ್ ಮತ್ತು ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂ. ತೆರೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ತೀವ್ರ ಮಳೆ ಇದ್ದ ಸಂದರ್ಭದಲ್ಲಿ ಆಯ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಚರ್ಚಿಸಿ, ಆಯಾ ತಾಲೂಕಿನ ಶಾಲೆಗಳಿಗೆ ರಜೆ ನೀಡಬಹುದು ಎಂದು ಅವರು ತಿಳಿಸಿದರು.

ಸಬೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಡಾ. ರಘುನಂದನ ಮೂರ್ತಿ, ಮಹಾನಗರಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಮತ್ತಿತರರು ಇದ್ದರು.


Spread the love