ಪ್ರೊಟೆಸ್ಟೆಂಟ್ ಸಮುದಾಯದ ಕೊರೋನಾ ಸೋಂಕಿತ ಶವದ ಅಂತ್ಯಕ್ರಿಯೆ ನಡೆಸಿ ಸೌಹಾರ್ದತೆ ಮೆರೆದ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್

Spread the love

ಪ್ರೊಟೆಸ್ಟೆಂಟ್ ಸಮುದಾಯದ ಕೊರೋನಾ ಸೋಂಕಿತ ಶವದ ಅಂತ್ಯಕ್ರಿಯೆ ನಡೆಸಿ ಸೌಹಾರ್ದತೆ ಮೆರೆದ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್

ಉಡುಪಿ: ಪ್ರೊಟೆಸ್ಟೆಂಟ್ ಸಮುದಾಯದ ಕೊರೊನ ಸೋಂಕಿತ ಶವದ ಅಂತ್ಯ ಕ್ರಿಯೆ ನಡೆಸುವುದರ ಮೂಲಕ , ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಮತ್ತು ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಸ್ವಯಂ ಸೇವಕರು ಸೌಹಾರ್ದತೆ ಮೆರೆದಿದ್ದಾರೆ.

ಅಗಸ್ಟ್ 29ರಂದು ಬಳ್ಳಾರಿಯ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಮುದಾಯದ ಮಹಿಳೆಯೋರ್ವರು ಕೊರೊನ ಸೋಂಕಿನಿಂದ ಮೃತಪಟ್ಟಿದ್ದರು. ಕಳೆದ ಹಲವಾರು ದಿನಗಳಿಂದ ತಮ್ಮಲ್ಲಿದ್ದ ಹಣವನ್ನೆಲ್ಲಾ ತಾಯಿಯ ಚಿಕೆತ್ಸೆಗಾಗಿ ಖರ್ಚು ಮಾಡಿದರೂ, ತಾಯಿ ಮೃತ ಪಟ್ಟಿದ್ದರಿಂದ ತಾಯಿಯ ಮೃತ ದೇಹವನ್ನು ತಮ್ಮ ಹುಟ್ಟೂರಿಗೆ ಒಯ್ಯಲು ಅಥವಾ ಇಲ್ಲಿಯೇ ಅಂತ್ಯ ಕ್ರಿಯೆ ನೆರವೇರಿಸಲು ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದ ಮೃತ ಮಹಿಳೆಯ ಮೂರು ಹೆಣ್ಣು ಮಕ್ಕಳು ಕಣ್ಣೀರಿಡುತಿದ್ದರು.

ಪರಿಸ್ಥಿತಿ ಅರಿತ ಜಿ ಶಂಕರ್ ಫ್ರಾಂಟ್ ಲೈನ್ ವಾರಿಯರ್ಸ್ ಉಡುಪಿ ಸಂಚಾಲಕರಾದ ಜಯ ಸಿ ಕೋಟ್ಯಾನ್ ಮತ್ತು ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯದ ಸದಸ್ಯರು ಮುನೀರ್ ಕಲ್ಮಾಡಿಯವರ ನೇತೃತ್ವದಲ್ಲಿ ಕಾರ್ಯ ಪ್ರವೃತ್ತರಾದರು. ಪ್ರೊಟೆಸ್ಟೆಂಟ್ ಸಂಪ್ರದಾಯದಂತೆ ದಫನ ಕಾರ್ಯ ನೆರವೇರಿಸಲು ಉಡುಪಿ ಪರಿಸರದ ಹಲವಾರು ಚರ್ಚ್ ಗಳಲ್ಲಿ ವಿಚಾರಿಸಿದರೂ ಸೂಕ್ತ ಸ್ಪಂದನೆ ದೊರಕದಿದ್ದಾಗ ಉಡುಪಿ ನಗರ ಸಭೆಯ ಆಯುಕ್ತರನ್ನು ಸಂಪರ್ಕಿಸಿ, ಅವರ ಅನುಮತಿಯ ಮೇರೆಗೆ ಮತ್ತು ಮೃತ ಮಹಿಳೆಯ ವಾರೀಸು ದಾರರಿಂದ ಲಿಖಿತ ಒಪ್ಪಿಗೆ ಪಡಕೊಂಡು ಉಡುಪಿಯ ಇಂದ್ರಾಳಿಯ ಹಿಂದೂ ರುದ್ರ ಭೂಮಿಯಲ್ಲಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಹೆಣ್ಣು ಮಕ್ಕಳ ಸಮ್ಮುಖದಲ್ಲಿ ದಫನ ಮಾಡಲಾಯಿತು.

ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾದ ನಾಡೋಜ ಡಾ ಜಿ ಶಂಕರ್ ಮತ್ತು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ ಎಮ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಪುಣ್ಯ ಕಾರ್ಯ ಜಯ ಸಿ ಕೋಟ್ಯಾನ್ ಮತ್ತು ಮುನೀರ್ ಕಲ್ಮಾಡಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರವೀಂದ್ರ ಶ್ರೀಯಾನ್, ಚಂದ್ರೇಶ್ ಪಿತ್ರೋಡಿ, ವಿಠ್ಠಲ್ ಕರ್ಕೇರ ಬೆಳ್ಳಂಪಳ್ಳಿ, ರಫಿಕ್ ದೊಡ್ಡಣ್ಣ ಗುಡ್ಡೆ ಉಪಸ್ಥಿತರಿದ್ದರು. ರುದ್ರ ಭೂಮಿಯ ಮೇಲ್ವಿಚಾರಕರಾದ ನಾಗಾರ್ಜುನ ಪೂಜಾರಿ ಮತ್ತು ಮನೋಹರ್ ಕರ್ಕಡ ಸಂಪೂರ್ಣ ಸಹಕಾರ ನೀಡಿದರು..


Spread the love