ಬರ ಪೀಡಿತ ತಾಲ್ಲೂಕುಗಳಲ್ಲಿ ಗೋಶಾಲೆ ಆರಂಭ

Spread the love

ಬರ ಪೀಡಿತ ತಾಲ್ಲೂಕುಗಳಲ್ಲಿ ಗೋಶಾಲೆ ಆರಂಭ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಈ ಬರಪೀಡಿತ ತಾಲ್ಲೂಕುಗಳಲ್ಲಿ ಗೋಶಾಲೆ ತೆರೆಯುವಂತೆ ಮಾನ್ಯ ಉಚ್ಚ ನ್ಯಾಯಾಲಯ, ಕರ್ನಾಟಕ ಆದೇಶಿಸಿರುತ್ತದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಗೋಶಾಲೆಯನ್ನು ತೆರೆಯಲಾಗಿರುತ್ತದೆ. ಈ ಗೋಶಾಲೆಗಳಿಗೆ ಬರುವಂತಹ ಜಾನುವಾರುಗಳಿಗೆ ಪ್ರತಿ ದಿನ 5 ಕೆ.ಜಿ ಒಣ ಮೇವು ಅಥವಾ 18 ಕೆ.ಜಿ ಹಸಿರು ಮೇವು ಮತ್ತು 1 ಕೆ.ಜಿ. ಪಶು ಆಹಾರವನ್ನು ನೀಡಲಾಗುವುದು.

ಗೋಶಾಲೆ ತೆರೆದಿರುವ ಸ್ಥಳಗಳು ಇಂತಿವೆ: ಗೋವನಿತಾಶ್ರಯ ಟ್ರಸ್ಟ್(ರಿ) ಗೋಶಾಲೆ, ಬೀಜಗುರಿ, ಪಜೀರು ಬಂಟ್ವಾಳ ತಾಲ್ಲೂಕು, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಗೋಶಾಲೆ, ಕೊಕ್ಕಡ, ಬೆಳ್ತಂಗಡಿ ತಾಲೂಕು, ಶ್ರೀ ಪರಾಶಕ್ತಿ ಟ್ರಸ್ಟ್ ಶ್ರೀ ಪರಾಶಕ್ತಿ ದೇಗುಲ ಸಮುಚ್ಛಯ, ಮಡ್ಯಾರ್, ಕೋಟೆಕಾರ್, ಮಂಗಳೂರು ತಾಲ್ಲೂಕು, ಪಾಣೆಮಜಲು, ಸವಣೂರು, ಪುತ್ತೂರು ತಾಲ್ಲೂಕು, ಪಂಚಲಿಂಗೇಶ್ವರ ದೇವಸ್ಥಾನ, ಪಂಜ, ಸುಳ್ಯ ತಾಲೂಕು ಸಂತ್ರಸ್ತ ರೈತರು ಗೋಶಾಲೆಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದೆಂದು ಉಪ ನಿರ್ದೇಶಕರು (ಆಡಳಿತ), ಪಶುಪಾಲನಾ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love