ಬಿಜೆಪಿ ಕೊಲೆಗಡುಕರನ್ನು ಹುಟ್ಟುಹಾಕುವ ಪಕ್ಷ – ಸಿದ್ಧರಾಮಯ್ಯ

Spread the love

ಬಿಜೆಪಿ ಕೊಲೆಗಡುಕರನ್ನು ಹುಟ್ಟುಹಾಕುವ ಪಕ್ಷ – ಸಿದ್ಧರಾಮಯ್ಯ

ಉಡುಪಿ: ಗೋಡ್ಸೆಯಿಂದ ಇಂದಿನವರೆಗೂ ಬರೇ ಕೊಲೆಗಡುಕರನ್ನೇ ಹುಟ್ಟು ಹಾಕಿದ ಪಕ್ಷ ಬಿಜೆಪಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ.

ಅವರು ಭಾನುವಾರ ಕೆಪಿಸಿಸಿ ವತಿಯಿಂದ ಉಡುಪಿಯಲ್ಲಿ ನಡೆದ ಪರಿವರ್ತನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯವರು ಕರಾವಳಿಯಲ್ಲಿ ಬೆಂಕಿ ಹಾಕಿಬಿಟ್ಟಿದ್ದಾರೆ, ತಾವೇ ಸ್ವತಃ ಕೊಲೆಗಳನ್ನು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ನಮ್ಮ ಪಕ್ಷದವರನ್ನೂ ಕೊಲೆ ಮಾಡುತ್ತಾರೆ, ತಮ್ಮದೇ ಪಕ್ಷದವರನ್ನೂ ಕೊಲೆ ಮಾಡಿಸುತ್ತಿದ್ದಾರೆ. ಬಿಜೆಪಿ ಮಾನವೀಯತೇ ಇಲ್ಲದ ರಾಕ್ಷಸಿ ಪ್ರವೃತಿಯ ಪಕ್ಷ. ಅಂತಹ ಪಕ್ಷ ಅಧಿಕಾರಕ್ಕೆ ಬರಬೇಕೋ ಬೇಡವೋ ಎಂಬುದನ್ನು ಜನರು ಆಲೋಚಿಸಬೇಕು ಎಂದವರು ಹೇಳಿದರು.

ಈ ಲೋಕಸಭಾ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಅಥವಾ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ನಡುವೆ ನಡೆಯುತ್ತಿಲ್ಲ, ಈ ಚುನಾವಣೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳನ್ನು ಉಳಿಸುವುದಕ್ಕಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುವುದಾಗಿ ಹೇಳಿ ತಮಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರದ 20 ಮಂದಿ ಶಾಸಕರನ್ನು 500 ಕೋಟಿ ರು. ಕೊಟ್ಟು ಖರೀದಿಸುವುದಕ್ಕೆ ಪ್ರಯತ್ನ ಮಾಡಿ ತಮಗೆ ಪ್ರಜಾಪ್ರಭುತ್ವದಲ್ಲಿಯೂ ನಂಬಿಕೆ ಇಲ್ಲ ಎಂದು ಸಾಬೀತು ಮಾಡಿದ್ದಾರೆ.

ಈ ಬಗ್ಗೆ ಬಿಜೆಪಿಯ ನಾಯಕರೊಂದಿಗೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ, ಬೇಕಿದ್ದರೇ ನರೇಂದ್ರ ಮೋದಿಯೇ ಬರಲಿ ನಾನು ಚರ್ಚೆ ಮಾಡುತ್ತೇನೆ, ಆದರೇ ಚರ್ಚೆ ಮಾಡೋಣ ಬನ್ನಿ ಎಂದರೇ ಯಡಿಯೂರಪ್ಪನೂ ಬರೋದಿಲ್ಲ ಶೋಭಾನೂ ಬರೋದಿಲ್ಲ ಎಂದವರಕು ಲೇವಡಿ ಮಾಡಿದರು.

ಸರಕಾರವೊಂದು ದೇಶ ಕಟ್ಟುವ, ಸಮಾಜ ಕಟ್ಟುವ ಕೆಲಸ ಮಾಡಬೇಕು, ಒಡೆಯುವ ಕೆಲಸ ಮಾಡಬಾರದು. ಆದರೆ ನರೇಂದ್ರ ಮೋದಿ ನೇತೃತ್ವದ ಸಮಿತಿ ಕಳೆದ 55 ತಿಂಗಳಲ್ಲಿ ಮಾಡಿದ್ದೇನು. ದೇಶದ ಜನತೆಯ ಒಂದೇ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ಅವರಿಗಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾನು ನನ್ನ ಐದು ವರ್ಷಗಳ ಮುಖ್ಯಮಂತ್ರಿ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳನ್ನು ಈಡೇರಿಸಿದ್ದೇನೆ. ಈ ಬಗ್ಗೆ ಯಾವುದೇ ವೇದಿಕೆಯಲ್ಲಿ ನಾನು ಬಿಜೆಪಿಯೊಂದಿಗೆ ಬೇಕಿದ್ದರೆ ಚರ್ಚೆಗೆ ಸಿದ್ಧವಿದ್ದೇನೆ. ಮೋದಿ ತನ್ನ ಸರಕಾರದ ಸಾಧನೆಯ ಕುರಿತು ಬಹಿರಂಗ ಚರ್ಚೆಗೆ ಸಿದ್ಧರಿದ್ದಾರಾ ಎಂದೂ ಅವರು ಕೇಳಿದರು.

2014ರಲ್ಲಿ ನರೇಂದ್ರ ಮೋದಿ ಅವರಂತೆ ದೇಶದ ಜನರಲ್ಲಿ ಭ್ರಮಾಲೋಕ ವೊಂದನ್ನು ನಿರ್ಮಾಣ ಮಾಡಿದವರು ಯಾರೂ ಇರಲಿಲ್ಲ. ಅವರು ನೀಡಿದಂಥ ಆಕರ್ಷಕ ಭರವಸೆಗಳನ್ನು ಯಾರೂ ನೀಡಿರಲಿಲ್ಲ. ತಾನು ಪ್ರಧಾನಿಯಲ್ಲ, ನಿಮ್ಮ ಚೌಕಿದಾರ್ (ಕಾವಲುಗಾರ) ಆಗಿರುತ್ತೇನೆ ಎಂದಿದ್ದರು. ಆದರೆ ಐದು ವರ್ಷಗಳ ಬಳಿಕ ‘ಚೌಕಿದಾರ್ ಚೋರ್ ಹೇ’, ‘ಚೌಕಿದಾರ್ ಹೀ ಭಾಗೀದಾರ್ ಹೇ’ ಎಂದು ಜನರೇ ಆಡಿಕೊಳ್ಳುವಂತಾಗಿದೆ

ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೇಶದ ರೈತರ 72,000 ಕೋಟಿ ರೂ.ಗಳ ಸಾಲಮನ್ನಾ ಮಾಡಿದ್ದರು. ನಾನೂ ರಾಜ್ಯದಲ್ಲಿ 22,250 ರೈತರ 8165 ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದೇನೆ. ನರೇಂದ್ರ ಮೋದಿ ತನ್ನ ಐದು ವರ್ಷಗಳ ಅವಧಿಯಲ್ಲಿ ಒಬ್ಬನೇ ಒಬ್ಬನ ಒಂದು ರೂ. ಸಾಲವನ್ನು ಮನ್ನಾ ಮಾಡಿಲ್ಲ. ಮೋದಿ ಅವರು ‘ಅಚ್ಛೇ ದಿನ್’ ಘೋಷಣೆ ಲಾಭವಾಗಿರುವುದು ಅದಾನಿ, ಅಂಬಾನಿ, ನೀರವ್ ಮೋದಿ, ಚಾಸ್ಕಿ, ಮಲ್ಯರಿಗೆ ಹೊರತು ದೇಶದ ರೈತರಿಗಲ್ಲ, ದಲಿತರಿಗಲ್ಲ ಹಾಗೂ ಬಡವರಿಗಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಕಲಬುರ್ಗಿಗೆ ಬಂದ ರಾಹುಲ್ ಗಾಂಧಿ, ದೇಶದ ಪ್ರತಿಯೊಬ್ಬರ ಖಾತೆಗೆ ಹಣ ಹಾಕಿ ಜೀವಭದ್ರತೆಯ ಯೋಜನೆ ಮತ್ತು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಘೋಷಣೆ ಮಾಡಿದ್ದಾರೆ. ಆದರೇ ಮೋದಿ ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ಅನೇಕ ಬಾರಿ ಬಂದಿದ್ದಾರೆ, ಆದರೇ ಯಾವತ್ತೂ ತಾನು ಮಾಡಿರುವ ಅಭಿವೃದ್ಧಿಯ ಬಗ್ಗೆ ನೀಡಿರುವ ಭರವಸೆಗಳ ಬಗ್ಗೆ ಮಾತನಾಡಿಲ್ಲ, ಯಾಕೆಂದರೇ ಅವರಿಂದ ಹೇಳಿಕೊಳ್ಳುವುದಕ್ಕೂ ಒಂದು ಅಭಿವೃದ್ಧಿ ಕೆಲಸವಾಗಿಲ್ಲ ಎಂದರು.

ಶೋಭಾ ಕರಂದ್ಲಾಜೆಯವರೇ ನಿಮ್ಮ ಸಾಧನೇ ಏನು ತಾಯಿ
ತಮ್ಮ ಭಾಷಣದಲ್ಲಿ ಉಡುಪಿ-ಚಿಕ್ಕಮಗಳೂರಿನ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರ ಐದು ವರ್ಷಗಳ ಸಾಧನೆಯನ್ನು ಲೇವಡಿ ಮಾಡಿ, ಪ್ರತಿಪಕ್ಷ ಬಿಡಿ, ಅವರದೇ ಪಕ್ಷದ ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಾ’ ಅಭಿಯಾನ ಆರಂಭಿಸುವಂತಾಗಿದೆ ಎಂದರು.

ತಾನು ದೆಹಲಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಸಂಸದರ ಹಾಗೂ ಬಿಜೆಪಿ ನಾಯಕರ ಸರ್ವ ಪಕ್ಷ ನಿಯೋಗ ಕೊಂಡೊಯ್ದ ವೇಳೆ ನಮ್ಮ ಸಂಸದೆ ಶೋಭಾ ಅವರು ಪ್ರಧಾನಿ ಮುಂದೆ ಒಂದು ಮಾತು ಕೂಡ ಆಡುವ ಪರಿಸ್ಥಿತಿಯಿಲ್ಲ. ಅವರು ಸಂಸದರಾಗಿ ಜಿಲ್ಲೆಗೆ ಯಾವುದೇ ರೀತಿಯ ಅಭಿವೃದ್ಧಿ ಮಾಡುವ ಬದಲು ಕೇವಲ ಪರಸ್ಪರ ದ್ವೇಷ ತುಂಬುವ ಕೆಲಸವನ್ನಷ್ಟೇ ಮಾಡಿದ್ದಾರೆ. ಅವರು ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಡಿದ ಸಾಧನೆ ದೊಡ್ಡ ಸೊನ್ನೆಎನ್ನುವುದನ್ನು ಅವರ ಪಕ್ಷದವರೇ ಗೋ ಬ್ಯಾಕ್ ಶೋಭಾ ಅಭಿಯಾನದ ಮೂಲಕ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪುಲ್ವಾಮ ಘಟನೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದಿಂದ ಸಂಭವಿಸಿದೆ. ಇಲ್ಲದಿದ್ದರೇ ಹಾಡುಹಗಲೇ 300 ಕೆಜಿ ಆರ್ಡಿಎಕ್ಸನ್ನು ಬಳಸಿ ಸೈನಿಕರ ಮೇಲೆ ದಾಳಿ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು. ಈ ವೈಫಲ್ಯವನ್ನು ಮುಚ್ಚಿಟ್ಟು ಬಿಜೆಪಿ ಸೈನಿಕರ ಬಲಿದಾನವನ್ನೇ ಚುನವಣಾ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಮೋದಿ ಮತ್ತು ಅಮಿತ್ ಷಾ ಪುಲ್ವಾಮ ಘಟನೆಯಿಂದ ಬಹಳ ಖುಷಿಯಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಮಾತನಾಡಿ, ದೇಶದ ಮಹಿಳೆ ಕುರಿತಂತೆ ಚಿಂತನೆಯನ್ನೇ ಮೋದಿ ನೇತೃತ್ವದ ಎನ್ಡಿಎ ಸರಕಾರ ನಡೆಸಿಲ್ಲ. ಅವರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಘೋಷಣೆ ಕೇವಲ ಬಾಯಿ ಮಾತಿನಲ್ಲೇ ಉಳಿದುಬಿಟ್ಟಿದೆ ಎಂದರು.

ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ದೇಶಕ್ಕೆ ಅತ್ಯುತ್ತಮ ವಾದ ಸಂವಿಧಾನವನ್ನು ಕೊಟ್ಟು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ್ದು ಈ ದೇಶವನ್ನಾಳಿದ ಕಾಂಗ್ರೆಸ್ ಸರಕಾರ. ಪ್ರತಿ ಐದು ವರ್ಷಗಳಿಗೊಮ್ಮೆ ಹೊಸ ಸರಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿದ್ದು ಕಾಂಗ್ರೆಸ್ ಸರಕಾರ. 70 ವರ್ಷಗಳಿಂದ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ತನ್ನ ಸರಕಾರದ ಸಾಧನೆಯ ಕುರಿತು ಮಾತನಾಡದೇ ಮೋದಿ ಪದೇ ಪದೇ ಪ್ರಶ್ನಿಸುತಿದ್ದಾರೆ. ನಮ್ಮ ಸಾಧನೆ ಕುರಿತು ಹೇಳಲು ವರ್ಷದ 365 ದಿನಗಳೂ ಸಾಲದು ಎಂದರು.

ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಅವರೂ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಎಐಸಿಸಿ ಉಸ್ತುವಾರಿ ವಿಷ್ಣುನಾಧನ್, ಶೃಂಗೇರಿ ಶಾಸಕ ರಾಜುಗೌಡ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಸಂಸದ ಬಿ.ಕೆ.ಹರಿಪ್ರಸಾದ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ನಾಯಕರಾದ ರಾಕೇಶ್ ಮಲ್ಲಿ, ಡಾ.ಆರತಿ ಕೃಷ್ಣ, ಡಾ.ವಿಜಯಕುಮಾರ್, ಮಮತಾ ಗಟ್ಟಿ, ಗೋಪಾಲ ಭಂಡಾರಿ, ಪ್ರಖ್ಯಾತ್ ಶೆಟ್ಟಿ, ವಿಘ್ನೇಶ್ ಕಿಣಿ, ಕ್ರಿಸ್ಟನ್ ಡಿ ಆಲ್ಮೇಡಾ, ಪುಷ್ಪಾ ಅಮರನಾಥ್, ಡಾ.ವಿಜಯಕುಮಾರ್, ವಿಶ್ವಾಸ್ ಅಮೀನ್, ರೋಶನಿ ಒಲಿವೇರಾ, ವೆರೋನಿಕಾ ಕರ್ನೇಲಿಯೊ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಡಾ.ಜಯಮಾಲ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಎಂ.ಎ.ಗಫೂರ್, ಕಾರ್ಯಕ್ರಮ ಸಂಯೋಜಿಸಿದರು. ಜಿ.ಎ.ಬಾವ ವಂದಿಸಿದರು


Spread the love

1 Comment

  1. Mosagararu, Kolegadukaru, janarannu brhamegolapadisuva mayagararu, hechchu kammi ella rajaKaranigalu. adare MODI avarannu bettu. Adhare Cagrase bagge 60 varshada sadane Helasu, Padagale Saladhu, Modalige Namma Deshada vibhajane Murubhaga, idarindali Kashmira samasye, bhangla deshda samasye. idu yarakaladinda Agiddu. I indina 60 vasrsha da ghana SHADANA.

Comments are closed.