ಬ್ರಹ್ಮಾವರ: ಗಂಗಾಧರ ಹಿರೇಗುತ್ತಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ

Spread the love

ಬ್ರಹ್ಮಾವರ: ಗಂಗಾಧರ ಹಿರೇಗುತ್ತಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ

ಬ್ರಹ್ಮಾವರ :ಮಾಧ್ಯಮಗಳು ಅರಳಿಸುವ ಕೆಲಸ ಮಾಡಬೇಕೇ ಹೊರತು ಕೆರಳಿಸುವ ಕೆಲಸ ಮಾಡಬಾರದು ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.

ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪ್ರೀತಿ ವಿಶ್ವಾಸ ಏಕತೆ ಪತ್ರಿಕೋದ್ಯಮದಲ್ಲಿ ಅಗತ್ಯ ಎಂದ ಅವರು ಜನಜಾಗೃತಿ ಬಲಗೊಳ್ಳಬೇಕಾದರೆ ಪತ್ರಿಕೆ ಅತೀ ಅಗತ್ಯ ಎಂದು ತಿಳಿಸಿದರು.

ವಕೀಲ ಹಾಗೂ ಸಾಮಾಜಿಕ ಹೋರಾಗಾರ ಸುಧೀರ್ ಕುಮಾರ್ ಮುರೊಳ್ಳಿ ದಿಕ್ಸೂಚಿ ಭಾಷಣ ಮಾಡಿ ಮನುಷ್ಯನನ್ನು ಪರಿವರ್ತನೆ ಮಾಡುವ ಕೆಲಸ ಪತ್ರಿಕೆಗಳಿಂದಾಗಬೇಕು. ಸಾಹಿತ್ಯದ ನಂಟು ಸ್ವಲ್ಪಮಟ್ಟಿಗಾದರೂ ಪತ್ರಕರ್ತರಿಗೆ ಇರಬೇಕು. ಖಾಸಗಿ ಬದುಕಿನೊಂದಿಗೆ ಸಮಾಜಸೇವೆಯನ್ನು ಮಾಡಿದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದರು.

ಇದೇ ಸಂದರ್ಭ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಸಮಾರಂಭದಲ್ಲಿ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಂಗಾಧರ ಹಿರೇಗುತ್ತಿ ನನ್ನ ಗುರುಗಳಾದ ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಸ್ವೀಕರಿಸುತ್ತಿರುವ ಪ್ರಶಸ್ತಿ ನನಗೆ ಅತ್ಯಂತ ಖುಷಿ ತಂದಿದೆ. ನಾನು ಒಂದು ಪತ್ರಿಕೆಯನ್ನು ಹೇಗೆ ನಡೆಸಬೇಕು ಎನ್ನುವುದನ್ನು ಜೀವನದಿಂದ ಕಲಿತುಕೊಂಡಿದ್ದೇನೆ ಎಂದರು.

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ದ.ಕ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ಸಂಚಾಲಕ ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ತಾರು ನಾಗರಾಜ್ ವಂದಿಸಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಕಲಾಚಿಗುರು ತಂಡದ ಹಳಿ ಹಂಬ್ಲ್ ಖ್ಯಾತಿಯ ತಂಡದವರಿಂದ ಹ್ವಾಯ್ ಬನಿ ನೆಗ್ಯಾಡ್ವ ಮತ್ತು ಗಾನ ರಸಧಾರೆ ಕಾರ್ಯಕ್ರಮ ನಡೆಯಿತು.


Spread the love