ಭಟ್ಕಳಕ್ಕೆ ಸಂಚಾರಿ ರೈಲ್ವೇ ಆಸ್ಪತ್ರೆ “ಲೈಫ್ ಲೈನ್ ಎಕ್ಸಪ್ರೆಸ್

Spread the love

ಭಟ್ಕಳಕ್ಕೆ ಸಂಚಾರಿ ರೈಲ್ವೇ ಆಸ್ಪತ್ರೆ “ಲೈಫ್ ಲೈನ್ ಎಕ್ಸಪ್ರೆಸ್
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಆರೋಗ್ಯ ಭಾಗ್ಯ ಕರುಣಿಸಲು ಸಂಚಾರಿ ರೈಲ್ವೇ ಆಸ್ಪತ್ರೆ “ಲೈಫ್ ಲೈನ್ ಎಕ್ಸಪ್ರೆಸ್” ಭಟ್ಕಳ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದು ಅಗಸ್ಟ್ 1ರಿಂದ ಜನತೆಗೆ ವಿವಿಧ ರೀತಿಯ ಚಿಕಿತ್ಸೆ ಹಾಗೂ ಔಷಧಿಯನ್ನು ಉಚಿತವಾಗಿ ನೀಡುವುದರೊಂದಿಗೆ ಚಿಕಿತ್ಸೆಗಾಗಿ ಬರುವವರಿಗೆ ಹಾಗೂ ಅವರ ಸಹಾಯಕರಿಗೆ ಉಚಿತವಾಗಿ ವಸತಿ ಮತ್ತು ಊಟೋಪಚಾರವನ್ನು ಸಹ ನೀಡಲಿದೆ.

29-4 life line

ದೇಶದ ಪ್ರಸಿದ್ಧ ವೈದ್ಯರ ತಂಡವೇ ಆಸ್ಪತ್ರೆಯಲ್ಲಿರಲಿದ್ದು ಆರೋತ್ಯ ತಪಾಸಣೆ, ಸಲಹೆ, ಚಿಕಿತ್ಸೆಯಲ್ಲದೇ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಿದ್ದಾರೆ. ಲೈಫ್ ಲೈನ್ ಎಕ್ಸಪ್ರೆಸ್‍ನಲ್ಲಿ ಆರೋಗ್ಯ ಸೇವೆಯನ್ನು ಅತೀ ಹೆಚ್ಚು ಜನರು ಪಡೆಯಲು ಸಹಕಾರಿಯಾಗುವಂತೆ ಈಗಾಗಲೇ ಎಲ್ಲಾ ತಹಸೀಲ್ದಾರ್ ಕಚೇರಿಗಳಲ್ಲಿ ಸಭೆಗಳನ್ನು ನಡೆಸಿ ವ್ಯಾಪಕ ಪ್ರಚಾರ ನೀಡಲಾಗಿದ್ದು ಪ್ರತಿಯೋರ್ವರೂ ಕೂಡಾ ಅಗತ್ಯವಿದ್ದಲ್ಲಿ ಇದರ ಸದುಪಯೋಗ ಪಡೆಯಬಹುದು ಎಂದೂ ತಿಳಿಸಲಾಗಿದೆ.
ಭಟ್ಕಳದ ರೈಲ್ವೇ ನಿಲ್ದಾಣಕ್ಕೆ ಈಗಾಗಲೇ ಬಂದು ನಿಂತಿರುವ ಲೈಫ್‍ಲೈನ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಸುಸಜ್ಜಿತವಾದ ಎರಡು ಆಪರೇಶನ್ ಥಿಯೇಟರ್‍ಗಳಿದ್ದು, ಐದು ಅಪರೇಶನ್ ಟೇಬಲ್‍ಗಳನ್ನು ಅಳವಡಿಸಲಾಗಿದೆ. ಪ್ರತಿ ರೋಗಿಯನ್ನೂ ಸಹ ತಜ್ಞ ವೈದ್ಯರು ತಪಾಸಣೆ ಮಾಡಲಿದ್ದು ಸೂಕ್ತ ಸಲಹೆ, ಮಾರ್ಗದರ್ಶನದೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ. ಭಟ್ಕಳ ತಾಲೂಕಿನಲ್ಲಿ ಚಿಕಿತ್ಸೆಯನ್ನು ಅ.1ರಿಂದ ಆರಂಭಿಸಲಾಗುವುದಿದ್ದು ಚಿಕಿತ್ಸೆಗೆ ಪೂರ್ವಭಾವಿಯಾಗಿ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣಾ ಕಾರ್ಯ ನಡೆಯಲಿದ್ದು ಅ.2ರಿಂದ 4ರ ತನಕ ಕಣ್ಣಿನ ಚಿಕಿತ್ಸೆಗಾಗಿ ತಪಾಸಣೆ, ಅ.2 ರಿಂದ 9ರ ತನಕ ಅಗತ್ಯವಿದ್ದವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಅ.10 ರಿಂದ 11ರ ತನಕ ಸೀಳು ತುಟಿ ತಪಾಸಣೆ ಹಾಗೂ ಅ.11 ರಿಂದ 13ರ ತನಕ ಸೀಳು ತುಟಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಅ.10 ಮತ್ತು 11 ರಂದು ಮೂಳೆಗೆ ಸಂಬಂಧ ಪಟ್ಟಂತೆ ತಪಾಸಣೆ ಹಾಗೂ ಅ.11 ರಿಂದ 13ರ ತನಕ ಅಗತ್ಯವಿದ್ದವರಿಗೆ ಆರ್ಥೋಪೆಡಿಕ್ ಶಸ್ತ್ರ ಕ್ರಿಯೆ ನಡೆಯಲಿದೆ. ಕಿವಿ, ಗಂಟಲು ಮತ್ತು ಮೂಗು ತಪಾಸಣೆ ಅ.14 ರಿಂದ 16ರ ತನಕ ನಡೆಯಲಿದ್ದು ಅ.15 ರಿಂದ 21ರ ತನಕ ಅಗತ್ಯವಿದ್ದವರಿಗೆ ಶಸ್ತ್ರಕ್ರಿಯೆ ನಡೆಯಲಿದೆ. ಅ.8 ರಿಂದ 14ರ ತನಕ ದಂತ ಚಿಕಿತ್ಸೆಗಾಗಿ ತಪಾಸಣೆ ನಡೆಯಲಿದೆ ಹಾಗೂ ಅ.19 ರಿಂದ 21ರ ತನಕ ಮೂರ್ಚೆ ರೋಗಿಗಳ ತಪಾಸಣೆ ನಡೆಯಲಿದೆ.
ಒಟ್ಟಾರೆ ಲೈಫ್‍ಲೈನ್ ಎಕ್ಸ್‍ಪ್ರೆಸ್ ಆಸ್ಪತ್ರೆಯಲ್ಲಿ ನುರಿತ ವೈದ್ಯರುಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರು ತಮ್ಮ ಹಿಂದಿನ ಚಿಕಿತ್ಸಾ ವಿವರಗಳಿದ್ದಲ್ಲಿ ಅವುಗಳನ್ನು ತರಬೇಕು. ತಪಾಸಣೆ ಮತ್ತು ಚಿಕಿತ್ಸೆ, ಔಷಧಿ, ಊಟ, ತಿಂಡಿ, ವಸತಿ ಸಂಪೂರ್ಣ ಉಚಿತವಾಗಿದ್ದು ಜಿಲ್ಲೆಯ ನಾಗರೀಕರು ಇದರ ಸದುಪಯೋಗ ಪಡೆಯುವಂತೆ ಸಂಘಟಕರು ಕೋರಿದ್ದಾರೆ.


Spread the love