ಭೂಗತ ಕೇಬಲ್ ಅಳವಡಿಸಿದ ಮೇಲೆ ರಸ್ತೆಯನ್ನು ರೆಸ್ಟೋರ್ ಮಾಡಿ: ಶಾಸಕ ಜೆ.ಆರ್.ಲೋಬೊ

Spread the love

ಭೂಗತ ಕೇಬಲ್ ಅಳವಡಿಸಿದ ಮೇಲೆ ರಸ್ತೆಯನ್ನು ರೆಸ್ಟೋರ್ ಮಾಡಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಿನಲ್ಲಿರುವ ಕಾಂಕ್ರೀಟ್ ರಸ್ತೆಗಳನ್ನು ಭೂಗತ ಕೇಬಲ್ ಹಾಕುವ ಭರದಲ್ಲಿ ಹಾಳುಮಾಡಿ ಬಿಡುವುದು ಬೇಡ. ಕಾಮಗಾರಿ ಮುಗಿದ ಲಕ್ಷಣವೇ ರಸ್ತೆಯನ್ನು ರೆಸ್ಟೋರ್ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಅವರು ತಮ್ಮ ಕಚೇರಿಯಲ್ಲಿ ಮೆಸ್ಕಾಂ ಇಲಾಖೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮೆಸ್ಕಾಂ ಇಲಾಖೆ ಭೂಗತ ಕೇಬಲ್ ಅಳವಡಿಸುವುದು ಪ್ರಸಂಶೆಯ ಕೆಲಸ. ಆದರೆ ಮಂಗಳೂರಿನ ರಸ್ತೆಗಳನ್ನು ಕೂಡಾ ಹಾಳುಗೆಡವುದು ಸರಿಯಲ್ಲ. ಈ ಕೆಲಸವನ್ನು ಮಾಡುವುದರ ಜೊತೆಗೆ ರಸ್ತೆಗಳ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದರು.

ದಾರಿ ದೀಪಗಳ ಸ್ವಿಚ್ ಹಾಕುವ ಬಗ್ಗೆ ಪ್ರಸ್ತಾಪಿಸಿ ಜನರು ಸ್ವಯಂ ಪ್ರೇರಣೆಯಿಂದ ದಾರಿ ದೀಪಗಳ ಸ್ವಿಚ್ ಹಾಕುತ್ತಾರೆ. ಆದರೆ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು. ಜನರು ಬರದಿರುವುದರಿಂದ ಮಹಾನಗರ ಪಾಲಿಕೆಯೇ ಈ ಕೆಲಸವನ್ನು ನಿರ್ವಹಿಸಲು ತಿಂಗಳಿಗೆ 5 ಸಾವಿರ ರೂಪಾಯಿಯಂತೆ ವರ್ಷಕ್ಕೆ 12 ಸಾವಿರವನ್ನು ಖರ್ಚು ಮಾಡುತ್ತಿದೆ. ಈ ಉದ್ದೇಶಕ್ಕಾಗಿಯೇ ಸರಾಸರಿ 40 ಲಕ್ಷ ರೂಪಾಯಿಯನ್ನು ವ್ಯಯಿಸುತ್ತಿದೆ ಎಂದು ನುಡಿದ ಅವರು ಮಂಗಳೂರಲಿ ಒಟ್ಟು 1800 ದಾರಿದೀಪಗಳಿದ್ದು ಈ ಪೈಕಿ 350 ದೀಪಗಳಿಗೆ ಮಾತ್ರ ಸ್ವಿಚ್ ಇರುವುದಾಗಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಆದಷ್ಟು ಬೇಗ ಉಳಿದ ಎಲ್ಲಾ ಸ್ವಿಚ್ ಗಳನ್ನು ಅಳವಡಿಸಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು ಎಂದರು.

ದಾರೀ ದೀಪಗಳ ಬಗ್ಗೆ ಆಧುನಿಕ ಕ್ರಮಗಳನ್ನು ಅಳವಡಿಸಿ ಎಲ್.ಇ.ಡಿ ಸಹಿತ ಬೇರೆ ವಿಧಾನಗಳನ್ನು ಅಳವಡಿಸಿ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆಯೂ ಪರಿಶೀಲಿಸಬೇಕು. ಸೂಕ್ತವಾದ ಅಂದಾಜು ಸಿದ್ಧಪಡಿಸಿ ಎ.ಡಿಬಿ ಎರಡನೇ ಹಂತದ ವೇಳೆ ಅನುಷ್ಠಾನಕ್ಕೆ ತರಬೇಕು ಎಂದರು.

ಬೆಂಗ್ರೆ, ಬಜಾಲ್, ಪಡೀಲ್ ಮುಂತಾದ ಕಡೆಗಳಲ್ಲಿದ್ದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆ.ಎಂ.ಸಿ ತೋಡುಗಳಲ್ಲಿ ಮರಗಳನ್ನು ಕಡಿದು ಹಾಕುತ್ತಾರೆ. ಕೇಳಿದರೆ ಅದನ್ನು ತೆಗೆದುಕೊಂಡು ಹೋಗುವುದು ನಮ್ಮ ಕೆಲಸವಲ್ಲ ಎನ್ನುತ್ತಾರೆ ಎಂಬ ಬಗ್ಗೆ ಪ್ರಸ್ತಾಪಿಸಿದ ಶಾಸಕ ಜೆ.ಆರ್.ಲೋಬೊ ಅವರು ಇನ್ನು ಮುಂದೆ ಮರಗಳನ್ನು ಕಡಿದು ಅದನ್ನು ತೆಗೆಯುವ ಕೆಲಸವನ್ನು ಇಲಾಖೆಯೇ ಮಾಡಬೇಕು ಎಂದರು.

ನೆಹರೂ ಮೈದಾನದಲ್ಲಿ ಇಲಾಖೆಗೆ ಅಗತ್ಯ ಭೂಮಿಯನ್ನು ಒದಗಿಸಿ ಕೊಟ್ಟಲ್ಲಿ ಅಲ್ಲಿ ವಿದ್ಯುತ್ ಕೇಂದ್ರ ನಿರ್ಮಿಸಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ಬೇಡಿಕೆ ಮಾಡಿಸಿದಾಗ ಶಾಸಕರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮೆಸ್ಕಾಂ ಎಕ್ಸಿಕುಟಿವ್ ಇಂಜಿನಿಯರ್ ಮಂಜಪ್ಪ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಕಮಲಾಕ್ಷ ಕುಂದರ್, ಮೋಹನ್ ಮೆಂಡನ್ ಹಾಗೂ ಇಲಾಖೆಯ ಇಂಜಿನಿಯರ್ ಗಳಿದ್ದರು.


Spread the love