ಮಂಗಳೂರು: ಕೊಲೆಗೆ ಸಂಚು – ಸಿಸಿಬಿ ಪೋಲಿಸರಿಂದ ಆರೋಪಿ ಬಂಧನ

Spread the love

ಮಂಗಳೂರು: ನಗರದ ಬಜಾಲ್ ಗ್ರಾಮದ ಫೈಸಲ್ ನಗರದ ಬಳಿ ವ್ಯಕ್ತಿಯೋರ್ವರ ಕೊಲೆಗೆ ಸಂಚು ರೂಪಿಸಿದ್ದ ಹಾಗೂ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಫೈಸಲ್ ನಗರದ ಬಜಾಲ್ ನಿವಾಸಿ ತಲ್ಲತ್ (28) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮಾರ್ಚ್ 4 ರಂದು ಈ ಹಿಂದೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಕೋಮು ಗಲಭೆ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ 4-5 ವ್ಯಕ್ತಿಗಳು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದ ಫೈಸಲ್ ನಗರದಲ್ಲಿ ಯಾವುದೋ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸ್ ನಿರೀಕ್ಷಕರಾದ ವೆಲೆಂಟೈನ್ ಡಿ ಸೋಜಾ ಮತ್ತು ಸಿಬ್ಬಂದಿಯವರು ಸದ್ರಿ ಸ್ಥಳಕ್ಕೆ ದಾಳಿಮಾಡಿ ಸ್ಥಳದಲ್ಲಿದ್ದ ತಲ್ಲತ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ ಒಂದು ಡ್ರಾಗನ್ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈತನು ಈ ಹಿಂದೆ 2004 ನೇ ಇಸವಿಯಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫೈಸಲ್ ನಗರದಲ್ಲಿ ಆಗಾಗ್ಯೆ ಹಲವು ಸಮಾಜಘಾತುಕ ಹಾಗೂ ಮತೀಯ ಗಲಭೆಯನ್ನು ನಡೆಸಿದ್ದು, ಈತನ ವಿರುದ್ಧ ಒಟ್ಟು 15 ಪ್ರಕರಣ ದಾಖಲಾಗಿತ್ತು. ಮಂಗಳೂರು ಬಜಾಲ್ ಗ್ರಾಮದ ಫೈಸಲ್ ನಗರದಲ್ಲಿ ತನ್ನದೇ ತಂಡವನ್ನು ಸೇರಿಸಿಕೊಂಡು ಮತೀಯ ಗಲಭೆಯನ್ನು ಮಾಡುವ ಉದ್ದೇಶದಿಂದ ಕ್ಷುಲಕ ಕಾರಣಕ್ಕಾಗಿ ಹಲ್ಲೆ, ಸಾರ್ವಜನಿಕ ಆಸ್ತಿಗೆ ನಾಶವುಂಟು ಮಾಡುತ್ತಿದ್ದ ಈತನ ವಿರುದ್ಧ 2004 ನೇ ಇಸವಿಯಿಂದ ಸುಮಾರು 12 ಪ್ರಕರಣಗಳು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೇ ದಾಖಲಾಗಿತ್ತು. ಈ ಪ್ರಕರಣಗಳ ಪೈಕಿ ಸುಮಾರು 8 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಈತನು ಸುಮಾರು 2 ವರ್ಷದಿಂದ ಈ ಪ್ರಕರಣಗಳಲ್ಲಿ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈತನು ಈ ಹಿಂದೆ 2011 ನೇ ಇಸವಿಯಲ್ಲಿ ಕಣ್ಣೂರಿನ ಅಬ್ದುಲ್ ರಹಿಮಾನ್ @ ಸಣ್ಣ ಪುತ್ತ ಎಂಬಾತನನ್ನು ಇತರ ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿರುವುದಲ್ಲದೇ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕಾಂಚನ ಟೆಕ್ಸ್ ಟೈಲ್ಸ್ ನ ಮೇನೆಜರ್ ನ ಕೊಲೆ ಪ್ರಕರಣದಲ್ಲಿಯೂ ಈತನು ಭಾಗಿಯಾಗಿದ್ದನು. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ -ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love