ಮಂಗಳೂರು ಚಲೋ: ಸೆ 5-9 ರ ತನಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಹನ ರ್ಯಾಲಿ, ಪ್ರತಿಭಟನೆಗಳಿಗೆ ನಿಷೇಧ

Spread the love

ಮಂಗಳೂರು ಚಲೋ: ಸೆ 5-9 ರ ತನಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಹನ ರ್ಯಾಲಿ, ಪ್ರತಿಭಟನೆಗಳಿಗೆ ನಿಷೇಧ

ಚಿಕ್ಕಮಗಳೂರು: ಎಫ್ಐ, ಕೆ.ಎಫ್.ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಇದೇ ಗುರುವಾರ ಬಿಜೆಪಿ ಯುವ‌ ಮೋರ್ಚಾ ವತಿಯಿಂದ ನಡೆಸಲು ಉದ್ದೇಶಿಸಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿ  ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಪ್ಟೆಂಬರ್ 5 ಬೆಳಿಗ್ಗೆ 6 ರಿಂದ 9 ಬೆಳಿಗ್ಗೆ 6  ಗಂಟೆಯ ತನಕ  ಯಾವುದೇ ರೀತಿಯ ವಾಹನ ರ್ಯಾಲಿ, ಪ್ರತಿಭಟನೆ, ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಆದೇಶ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ಬಿಜೆಪಿ, ಯುವ ಮೋರ್ಚಾ, ಕರ್ನಾಟಕ ಇವರ ವತಿಯಿಂದ ಸಪ್ಟೆಂಬರ್ 5 ರಿಂದ 6 ರಂದು  ರಂದು ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಂದ ಪಕ್ಷದ ಕಾರ್ಯಕರ್ತರು ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮತ್ತು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಬೈಕ್ ರ್ಯಾಲಿ ಮುಖಾಂತರ ತೆರಳಿ ಸಪ್ಟೆಂಬರ್ 7 ರಂದು ಮಂಗಳೂರು ನಗರದ ನೆಹರು ಮೈದಾನದಲ್ಲಿ ಸೇರಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣ ಕರ್ತವಾಗಿರುವ ಪಿ.ಎಫ್.ಐ, ಕೆ.ಎಫ್.ಡಿ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇದಿಸಬೇಕು ಹಾಗೂ ಹಿಂದೂ ಮುಖಂಡರ ಹತ್ಯೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಈ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ರಾಜ್ಯದ ಅರಣ್ಯ ಸಚಿವ ರಮಾನಾಥ ರೈ ರವರ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿರುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತೀಯ ಸೂಕ್ಷ್ಮತೆ, ಸಂಚಾರ ಸಮಸ್ಯೆ, ಸಾರ್ವಜನಿಕ ಹಿತದೃಷ್ಟಿ ಹಾಗೂ ಕಾನೂನು ಸುವ್ಯವಸ್ಥೆ ಕಾರಣಗಳಿಗಾಗಿ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ರವರ ವರದಿಯ ಮೇರೆಗೆ ಸಪ್ಟೆಂಬರ್ 5 ಬೆಳಿಗ್ಗೆ 6 ರಿಂದ 9 ಬೆಳಿಗ್ಗೆ 6  ಗಂಟೆಯ ತನಕ  ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಯಾವುದೇ ಸಂಘಟನೆಗಳ ಆಯೋಜಕರು/ ಕಾರ್ಯಕರ್ತರು/ ಸದಸ್ಯರು ಹಾಗೂ ಯಾವುದೇ ವ್ಯಕ್ತಿಗಳು ಯಾವುದೇ ರೀತಿಯ ದ್ವಿಚಕ್ರ ವಾಹನ, ಬೈಕ್ ಇತ್ಯಾದಿ ಹಾಗೂ ಇತರೆ ಯಾವುದೇ ವಾಹನಗಳ ಮೂಲಕ ರ್ಯಾಲಿ, ಜಾಥಾ ಹಾಗೂ ಪಾದಯಾತ್ರೆ, ಮೆರವಣಿಗೆ, ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದನ್ನು ಕಲಂ 35(3) ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾದಂಡಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ ರವರು ಆದೇಶಿಸಿರುತ್ತಾರೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


Spread the love