ಮಂಗಳೂರು: ಜೂನ್ ಅಂತ್ಯಕ್ಕೆ ಪಡೀಲ್-ಬಜಾಲ್ ರೈಲ್ವೆ ಕೆಳ ಸೇತುವೆ ಜನ ಸಂಚಾರಕ್ಕೆ ಲಭ್ಯ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ

Spread the love

ಮಂಗಳೂರು: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಪಡೀಲ್-ಬಜಾಲ್ ರೈಲ್ವೆ ಕೆಳ ಸೇತುವೆ ಕಾಮಗಾರಿ ವೀಕ್ಷಿಸಿ ಬಳಿಕ ಅವರು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು ಪಡೀಲ್ ಮತ್ತು ಬಜಾಲ್ ನಡುವಿನಲ್ಲಿ ನಿರ್ಮಿಸಲಾದ ರೈಲ್ವೇ ಕೆಳ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ನಿರ್ಮಾಣ ಕಾರ್ಯ ಜೂನ್ ಅಂತ್ಯಕ್ಕೆ ಪೂರ್ಣಗೊಳಿಸಿ ಜನಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ವಿನ್ಯಾಸ ಹಾಗೂ ಅಂತರ್ಜಲ ಸಮಸ್ಯೆಯಿಂದಾಗಿ ಕಾಮಗಾರಿ ಸ್ವಲ್ಪ ಹಿನ್ನಡೆಯಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ಹಾಗೂ ರೈಲ್ವೆ ಇಲಾಖೆ ಜಂಟಿಯಾಗಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಿದೆ ಎಂದು ಅವರು ತಿಳಿಸಿದರು.

DVS_padil_Bajal_20150509

ಕೆಳಸೇತುವೆಯಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆ ಕುರಿತು ಈ ಬಾರಿಯ ಮಳೆಗಾಲದಲ್ಲಿ ಪ್ರಾಯೋಗಿಕವಾಗಿ ಅರಿತುಕೊಂಡು ತಾತ್ಕಾಲಿಕ ಕ್ರಮ ರೂಪಿಸಿ ಮುಂದಿನ ಹಂತದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದರು.
ರಸ್ತೆ ನಿರ್ಮಾಣ ಸಂದರ್ಭ ಅತ್ಯಂತ ಹೆಚ್ಚು ಇಳಿಜಾರು ಆಗಲಿರುವ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಸ್ಥಳೀಯ ತಜ್ಞರ ಜತೆ ಮಾತುಕತೆ ನಡೆಸಿ ಸೂಕ್ತ ವಿನ್ಯಾಸದಲ್ಲಿ ರಸ್ತೆ ನಿರ್ಮಿಸುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಶಿರಾಡಿ ರಸ್ತೆ 13 ಕಿ.ಮೀ. ಅಭಿವೃದ್ಧಿ ಕಾಮಗಾರಿ ಪೈಕಿ 10 ಕಿ.ಮೀ. ಪೂರ್ಣಗೊಂಡಿದ್ದು . ಬಿ.ಸಿ.ರೋಡ್- ಮಾಣಿ ರಸ್ತೆ 7 ಕೋಟಿ ರೂ.ವಿನಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದರು.  ತಾನು ರೈಲ್ವೆ ಸಚಿವನಾಗಿದ್ದ ಸಂದರ್ಭ ಘೋಷಣೆಯಾದ 21 ರೈಲುಗಳ ಪೈಕಿ 16 ರೈಲುಗಳನ್ನು ಕರ್ನಾಟಕದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಬೆಂಗಳೂರು- ಮೈಸೂರು ರೈಲ್ವೆ, ಹಾಸನ- ಮಂಗಳೂರು ರೈಲ್ವೆ ಕಾಮಗಾರಿ, ಹಾಸನ-ಸಕಲೇಶಪುರ ರೈಲ್ವೆ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಕಾರ್ಪೊರೇಟರ್‌ಗಳಾದ ವಿಜಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತೆ ಹೆಫ್ಸಿಬಾರಾಣಿ, ರೈಲ್ವೇ ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್ ಶ್ರೀಕುಮಾರ್ ಉಪಸ್ಥಿತರಿದ್ದರು.


Spread the love