ಮಂಗಳೂರು ಪ್ರೆಸ್‍ಕ್ಲಬ್ ಮ್ಯಾನೇಜರ್ ಬ್ರಿಜೇಶ್‍ಗೆ ಬೀಳ್ಕೊಡುಗೆ

Spread the love

ಮಂಗಳೂರು: ಮಂಗಳೂರು ಪ್ರೆಸ್‍ಕ್ಲಬ್‍ನ ಮ್ಯಾನೇಜರ್ ಆಗಿ ಕಳೆದು ಮೂರು ವರ್ಷಗಳಿಂದ ಕರ್ತವ್ಯದಲ್ಲಿದ್ದ ಬ್ರಿಜೇಶ್ ಅವರನ್ನು ಗುರುವಾರ ಬೀಳ್ಕೊಡಲಾಯಿತು.

ಬ್ರಿಜೇಶ್ ಅವರಿಗೆ ಶಾಲು ಹೊದಿಸಿ ಫಲಪುಷ್ಪವಿತ್ತು ಗೌರವಿಸಿ ಮಾತನಾಡಿದ ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ, ಡಾ.ಅನಿಲ್ ರೊನಾಲ್ಡ್ ಫೆರ್ನಾಂಡಿಸ್, ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿದ್ದುಕೊಂಡು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಬ್ರಿಜೇಶ್ ಅವರು ಬೇರೆಡೆ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ತೆರಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

7-pressclub-fairwell-20151015-006

ಮಾಜಿ ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಒಳ್ಳೆಯ ಕೆಲಸಕ್ಕೆ ಸಮಾಜದಲ್ಲಿ ಉತ್ತಮ ಸ್ಪಂದನೆ ಇದ್ದೇ ಇರುತ್ತದೆ. ಪತ್ರಕರ್ತರೊಡನೆ ಬೆರೆತು ಕೆಲಸ ನಿರ್ವಹಿಸಿದ ಬ್ರಿಜೇಶ್ ಮುಂದಿನ ವೃತ್ತಿ ಜೀವನದಲ್ಲಿಯೂ ಯಶಸ್ಸು ಕಾಣಲಿ ಎಂದು ಶುಭಕೋರಿದರು.

ಮಂಗಳೂರು ಪತ್ರಿಕಾಭವನ ಟ್ರಸ್ಟ್‍ನ ಅಧ್ಯಕ್ಷ ಕೆ.ಆನಂದ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಪ್ರೆಸ್‍ಕ್ಲಬ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸಹಕಾರ ನೀಡಿದ ಎಲ್ಲರನ್ನು ಬ್ರಿಜೇಶ್ ಸ್ಮರಿಸಿಕೊಂಡರು. ಪತ್ರಕರ್ತರಾದ ಮುಹಮ್ಮದ್ ಆರಿಫ್ ಪಡುಬಿದ್ರೆ, ಹಿಲರಿ ಕ್ರಾಸ್ತ, ಆಗ್ನೆಲ್ ರಾಡ್ರಿಗಸ್, ಜಯದೀಪ್ ಶೆಣೈ ಅನಿಸಿಕೆ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಪ್ರಕಾಶ್ ಬಿ.ಸಾಲ್ಯಾನ್, ಸುರೇಶ್ ಬಲ್ಲಾಳ್, ವಿಶ್ವಾಸ್‍ಕುಮಾರ್‍ದಾಸ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್‍ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ.ಬಾಳೇಪುಣಿ ಕಾರ್ಯಕ್ರಮ ನಿರೂಪಿಸಿದರು.


Spread the love