ಮಂಗಳೂರು : ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ಯುವ ದಿನ

Spread the love

ಮಂಗಳೂರು : ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ತತ್ತ್ವಗಳು ಭಾರತೀಯ ಯುವಜನತೆಗೆ ಸ್ಫೂರ್ತಿಯ ಚಿಲುಮೆಯಾಗಿರುವುದರಿಂದ ಭಾರತ ಸರ್ಕಾರವು 1984ರಲ್ಲಿ ಅವರ ಜನ್ಮ ದಿನವಾದ ‘ಜನವರಿ 12’ನ್ನು ‘ರಾಷ್ಟ್ರೀಯ ಯುವ ದಿನಾಚರಣೆ’ಯನ್ನಾಗಿ ಘೋಷಿಸಿದೆ. ರಾಷ್ಟ್ರನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾದ್ದರಿಂದ ಅವರ ಆದರ್ಶ ಮತ್ತು ಕರ್ತವ್ಯಗಳನ್ನು ಯುವ ಮನಗಳಲ್ಲಿ ಪುನಃ ಪ್ರತಿಷ್ಠಾಪಿಸಲು ಮಂಗಳೂರಿನ ರಾಮಕೃಷ್ಣ ಮಿಷನ್ ಪ್ರತಿ ವರ್ಷದಂತೆ ಈ ಸಲವೂ ಯುವಕರಿಗಾಗಿ ಜನವರಿ 12 ಮತ್ತು 13ರಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ರಾಷ್ಟ್ರೀಯ ಯುವ ದಿನ:

ಜನವರಿ 12ರಂದು ರಾಷ್ಟ್ರೀಯ ಯುವ ದಿನಾಚರಣೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮಂತ್ರಿಗಳಾದ ಯು.ಟಿ.ಖಾದರ್ ರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾನ್ಯ ಶಾಸಕರಾದ ಜೆ.ಆರ್.ಲೋಬೋರವರು ಆಗಮಿಸಲಿದ್ದಾರೆ. ಬೆಳಗ್ಗೆ 9ರಿಂದ ಅಪರಾಹ್ನ 2ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ವಿವಿಧ ವಿಷಯಗಳನ್ನು ಕುರಿತು ಮಾತನಾಡಲಿದ್ದಾರೆ.

ವಿಶೇಷ ವಿಚಾರಗೋಷ್ಠಿ:

ಜನವರಿ 13ರಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಪರಿಣಾಮಕಾರಿ ಜೀವನ ನಿರ್ವಹಣೆ’ ಎಂಬ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎನ್.ವಿನಯ್ ಹೆಗಡೆಯವರು ಉದ್ಘಾಟಿಸಲಿದ್ದಾರೆ. ಎಮ್.ಚಂದ್ರಶೇಖರ್ (ಮುಖ್ಯ ಪೋಲೀಸ್ ಆಯುಕ್ತರು, ಮಂಗಳೂರು ನಗರ)ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಂಜುನಾಥ ಭಂಡಾರಿ (ಛೇರ್ಮನ್, ಭಂಡಾರಿ ಫೌಂಡೇಷನ್, ಮಂಗಳೂರು)ರವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಈ ಎಲ್ಲ ಕಾರ್ಯಕ್ರಮಗಳು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜರುಗಲಿವೆ. ಪೂಜ್ಯ ಸ್ವಾಮಿ ಶುದ್ಧಿದಾನಂದಜೀ ಮಹಾರಾಜ್‍ರವರು (ಅದ್ವೈತ ಆಶ್ರಮ, ಕೋಲ್ಕತ್ತ), ಡಾ. ವಿವೇಕ್ ಮೋದಿ ಹಾಗೂ ಪ್ರೊ. ಕೆ.ರಘೋತ್ತಮ ರಾವ್‍ರವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.


Spread the love