ಮಂಗಳೂರು: ಸಚಿವ ಆಂಜನೇಯ ರಾಜೀನಾಮೆಗೆ ಬಿಜೆಪಿ ಆಗ್ರಹ

Spread the love

ಮಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಕರೆಯುವ ವಿಷಯದಲ್ಲಿ ನೇರವಾಗಿ ತಮ್ಮ ಪತ್ನಿ ಹಾಗೂ ತಮ್ಮ ಇಲಾಖೆಯ ಅಧಿಕಾರಿಯೇ ಸಿಕ್ಕಿಬಿದ್ದಿರುವುದರಿಂದ ಸಚಿವ ಆಂಜನೇಯ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಬಿಜೆಪಿ ಆಗ್ರಹಿಸುತ್ತದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ‘ಭಾಗ್ಯ’ಗಳ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದ್ದ   ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಿಜವಾದ ಬಣ್ಣ ಬಯಲಾಗಿದೆ. ಮಂತ್ರಿಗಳ ಮನೆಯೇ ಭ್ರಷ್ಟಾಚಾರದ ಕೇಂದ್ರವಾಗಿರುವುದೂ ಹಾಗೂ ಮಂತ್ರಿಗಳ ಕುಟುಂಬವೇ ಪ್ರಕರಣದಲ್ಲಿ ಪಾಲ್ಗೊಂಡಿರುವುದು, ಇಲಾಖೆಯ ಅಧಿಕಾರಿಯೇ ಹಗರಣದಲ್ಲಿ ಸಿಲುಕಿರುವುದು ರಾಜ್ಯ ಸರಕಾರದ ನೆರಳಿನಡಿಯಲ್ಲಿಯೇ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ಸ್ಪಷ್ಟ ಸಾಕ್ಷಿಯಾಗಿದೆ.

ಅದರಲ್ಲೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಕಲ್ಯಾಣಕ್ಕೆಂದು ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು   ಸಿದ್ದರಾಮಯ್ಯನವರ ಸರಕಾರ ‘ತಾನು ಬಡವರ ಪರವಾದ ಸರಕಾರ ‘ಎಂದು ಹೇಳುತ್ತಿದ್ದ ಸಂಗತಿ ಸುಳ್ಳು ಎಂಬುದು ಈ ಪ್ರಕರಣದಿಂದ ಸಾಬೀತಾಗಿದೆ. ಈ ಇಲಾಖೆಯಲ್ಲಿ ಈ ಮೊದಲೇ ಹಾಸಿಗೆ ದಿಂಬು ಖರೀದಿ ಹಗರಣ ಬೆಳಕಿಗೆ ಬಂದಿತ್ತು. ಆಗಲೇ ಇಲಾಖೆಯ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಈ ರೀತಿ ಎಚ್ಚೆತ್ತುಕೊಳ್ಳುವ ಬದಲು ಇಲಾಖೆಯ ಮಂತ್ರಿಗಳ ಕುಟುಂಬವೇ ಹಗರಣಗಳಲ್ಲಿ ಭಾಗಿಯಾಗಿದೆ. ಮಂತ್ರಿಗಳ ಸರಕಾರಿ ನಿವಾಸವೇ ಹಗರಣದ ಕೇಂದ್ರವಾಗಿದೆ. ಆದ್ದರಿಂದ ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರದÀ ಮೂಲ ಈ ಮಂತ್ರಿಗಳು ಮತ್ತು ಮಂತ್ರಿಗಳ ನಿವಾಸಗಳು ಎಂಬುದು ಸಾಬೀತಾಗಿದೆ.

ತಮ್ಮ ಸರಕಾರ ಪಾರದರ್ಶಕ ಎಂದು ಕೊಚಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರ ಸರಕಾರದಲ್ಲಿ ಲಂಚ ಪಡೆಯುವುದೂ ಪಾರದರ್ಶಕವಾಗಿದೆ. ತಾನು ಸತ್ಯಹರಿಶ್ಚಂದ್ರ ಎಂದು ಕೊಚ್ಚಿಕೊಳ್ಳುತ್ತಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಪ್ರಕರಣದಿಂದ ನಾಚಿಕೆಯಾಗಬೇಕು. ಬಡ ಮಕ್ಕಳ ಅನ್ನವನ್ನೇ ಕಿತ್ತುಕೊಳ್ಳುವಂತಹ ‘ಕನ್ನ ಭಾಗ್ಯ’ದ ನೈತಿಕ ಹೊಣೆಯನ್ನು ಅವರು ಹೊರಬೇಕು, ಕೂಡಲೇ   ಆಂಜನೇಯರವರು ರಾಜೀನಾಮೆ ನೀಡುವಂತೆ ಸೂಚನೆ ನೀಡಬೇಕು, ಅವರು ರಾಜೀನಾಮೆ ನೀಡದಿದ್ದಲ್ಲಿ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಮಾಡಬೇಕು ಮತ್ತು ಇಡೀ ಪ್ರಕರಣದ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು ದ.ಕ.ಜಿಲ್ಲಾ ಬಿಜೆಪಿ ಆಗ್ರಹಿಸಿದೆ.


Spread the love