ಮಂಗಳೂರು: ಸಚಿವ ರೈ ಹಾಗೂ ಖಾದರ್ ಬ್ಯಾನರಿಗೆ ಮಸಿ ಬಳಿದ ಕಿಡಿಗೇಡಿಗಳು

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರ ಭಾವಚಿತ್ರ ಇರುವ ಬ್ಯಾನರಿಗೆ ಮಸಿ ಬಳಿದ ಘಟನೆ ನಗರದ ವಾಲೆನ್ಸಿಯಾ ಬಳಿ ಶನಿವಾರ ಸಂಭವಿಸಿದೆ.

ramanath-rai-hoarding-defaced-19032016 (2)

ವಾಲೆನ್ಸಿಯ ಫಾ ಮುಲ್ಲರ್ ಆಸ್ಪತ್ರೆಯ ಬಳಿ ರಸ್ತೆ ಕಾಮಾಗಾರಿ ನಡೆಸಿದ್ದಕ್ಕೆ ಅಭಿನಂದಿಸಿ ಮುಖ್ಯಮಂತ್ರಿ, ಸಚಿವರಾದ ರಮಾನಾಥ ರೈ, ಯು ಟಿ ಖಾಧರ್, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಹಾಗೂ ಮಾಜಿ ಮೇಯರ್ ಜಸಿಂತಾ ಆಲ್ಪ್ರೇಡ್ ಅವರ ಭಾವಚಿತ್ರವನ್ನು ಹಾಕಿ ಬ್ಯಾನರ್ ಹಾಕಿದ್ದು ಅದರಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರ ಭಾವಚಿತ್ರಗಳಿಗೆ ಮಸಿ ಬಳಿದು ಜೈ ನೇತ್ರಾವತಿ ಎಂದು ಬರೆಯಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಯು ಟಿ ಖಾದರ್ ಅವರು ನಮ್ಮ ಭಾವಚಿತ್ರಕ್ಕೆ ಮಸಿ ಬಳಿದವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬ್ಯಾನರಿಗೆ ಮಸಿ ಬಳಿದ ಕೂಡಲೇ ಸಮಸ್ಯೆ ಪರಿಹಾರವಾಗಲ್ಲ. ಇಂತಹ ಕೃತ್ಯವೆಸಗುವರಿಗೆ ಇದರಿಂದ ಆನಂದ ಸಿಗುವುದಾದರೆ ಅವರಿಗೆ ಮುಂದೆಯೂ ಮಾಡಲು ಅವಕಾಶ ನೀಡೋಣ. ಆ ದೇವರು ಇಂತಹ ಕೃತ್ಯ ಎಸಗಿದವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಬೇಡುತ್ತೇನೆ ಎಂದರು.
ಘಟನೆ ಕುರಿತು ಪೋಲಿಸ್ ಠಾಣೆಗೆ ದೂರು ನೀಡುವಿರಾ ಎಂದು ಕೇಳಿದ ಪ್ರಶ್ನೆಗೆ ನಾನು ಪೋಲಿಸರಿಗೆ ಯಾವುದೇ ರೀತಿ ಮಾಹಿತಿ ನೀಡುವುದಿಲ್ಲ. ಅವರು ಬೇರೆ ಕಡೆಯಲ್ಲೂ ಇಂತಹ ಬ್ಯಾನರುಗಳಿಗೆ ಮಸಿ ಬಳಿದರೂ ಕೂಡ ಯಾವುದೇ ದೂರ ದಾಕಲಿಸುವುದಿಲ್ಲ ದೇವರೆ ಅವರಿಗೆ ಒಳ್ಳೆಯ ಬುದ್ದಿಯನ್ನು ನೀಡುತ್ತಾರೆ ಎಂದರು.
ಬ್ಯಾನರ್ ಹಾಕಿದ ಯುವ ಕಾಂಗ್ರೆಸ್ ಅಧ್ಯಕ್ಷ ಮರಿಲ್ ರೇಗೊ ಪ್ರತಿಕ್ರಿಯಿಸಿ ನಾನು ಈಗಾಗಲೇ ಸ್ಥಳೀಯ ಕಾರ್ಪೋರೇಟರಿಗೆ ಮಾಹಿತಿಯನ್ನು ನೀಡಿದ್ದು, ಕೂಡಲೇ ಬ್ಯಾನರನ್ನು ತೆಗೆಯಲು ಸೂಚಿಸಲಾಗಿದೆ ಎಂದರು.


Spread the love