ಮಂಗಳೂರು :  ಸಮರ್ಥ ಭಾರತದ ವತಿಯಿಂದ  `ವಿವೇಕ್ ಬ್ಯಾಂಡ್’ನ್ನು ಲೋಕಾರ್ಪಣೆ ಮಾಡಿದರು

Spread the love

ಮಂಗಳೂರು : ಕ್ಷೆಬೆ ಮತ್ತು ಅಸಹಿಷ್ಣು ಮನೋಸ್ಥಿತಿಯ ಸಮಾಜವನ್ನು ಸ್ನೇಹಪರವಾಗಿ ಒಮ್ಮುಖವಾಗಿ ಮುನ್ನಡೆಸುವ ಗುರಿ ಹೊಂದಲು ಸಮಷ್ಠಿ ಚಿಂತನೆಯ ಕಾರ್ಯವಾಗಬೇಕು ಎಂದು ಚಿತ್ರ ನಟ ಹಾಗೂ ನಿರ್ದೇಶಕ ಟಿ. ಎಸ್. ನಾಗಾಭರಣ ನುಡಿದರು.

ಸಮರ್ಥ ಭಾರತದ ವತಿಯಿಂದ ಬುಧವಾರ ನಗರದ ಎಸ್‌ಡಿಎಂ ಕಾಲೇಜಿನಲ್ಲಿ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  `ವಿವೇಕ್ ಬ್ಯಾಂಡ್’ನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

1-vivek-band-20160106-003

ಇಂದು ಸಂಸ್ಕಾರದಿಂದಲೇ ಭಾರತ ಗಟ್ಟಿಯಾಗಿ ನಿಂತಿದೆ. ಇಲ್ಲದಿದ್ದರೆ  ವಿಚ್ಚೇದನಗಳಿಂದಲೇ ಭಾರತ ಛಿದ್ರವಾಗುತ್ತಿತ್ತು. ಭಾರತದಲ್ಲಿ ದ್ವೇಷ ಇಲ್ಲ. ಸಹಿಷ್ಣು ಇದೆ. ಯಾಕೆಂದರೆ ನಾವು ಸರಳವಾದ, ಸ್ನೇಹವಾದವನ್ನೇ ಹಿಂದಿನಿಂದಲು ಅನುಸರಿಸಿಕೊಂಡು ಬಂದಿದ್ದೆವು. ಸ್ನೇಹದ ಹಸ್ತ ಸಮಾಜದಲ್ಲಿ ಹಾಗೂ ಇತರೇ ರಾಷ್ಟ್ರಗಳೊಂದಿಗೆ ಇಂದಿಗೂ ಮುಂದುವರಿದಿದೆ.  ಬಸವಣ್ಣನವರ `ದಾಸೋಹ’ ಇದಕ್ಕೊಂದು ಉದಾಹರಣೆ ಎಂದರು.

 ನಾವು ಏನಾಗಿದ್ದೆವು ಎಂಬುದನ್ನು ನಮ್ಮ ಇತಿಹಾಸ ತಿಳಿಸುತ್ತದೆ. ಆದರೆ, ನಾವು ಮುಂದೇನಾಗಬೇಕೆಂಬುದನ್ನು ತಮ್ಮನ್ನು ತಾವು ನಿರ್ಧರಿಸಿಕೊಂಡು ಸಮಾಜಮುಖಿಯಾಗಿ ಬೆಳೆಯಬೇಕು.  ಇನ್ನೊಬ್ಬರನ್ನು ಗೌರವಿಸದ ಸ್ವಾರ್ಥಪರ ಚಿಂತನೆಗಳಿಂದಾಗಿ  ಸಮಾಜದಲ್ಲಿ  ಕ್ಷೋಭೆ, ಅಸಹಿಷ್ಣು ಮನೋಸ್ಥಿತಿಗಳು ಹೆಚ್ಚಿವೆ.  ಪ್ರತಿಯೊಬ್ಬರು ವಿವೇಕ್ ಬ್ಯಾಂಡ್‌ನಂತಹ ಸಾಂಘಿಕ ಕಾರ್ಯದೊಂದಿಗೆ   ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು.

ಇದು ನಮ್ಮತನ ಗುರುತಿಸಿಕೊಳ್ಳಲು ಎಂದರು.

ಮಾಧ್ಯಮಗಳು ನಮ್ಮ ತುಡಿತಗಳಿಗೆ ಪೂರಕವಾಗಿರಬೇಕು. ಸಮಾಜಕ್ಕೆ, ಜನಸಾಮಾನ್ಯರಿಗೆ ಬೇಕಾದವನ್ನು ಅವು ನೀಡಬೇಕು.ನಾವು ಮಾಧ್ಯಮಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಮಂಗಳೂರು ವಿ.ವಿ. ಕುಲಸಚಿವ ಟಿ.ಡಿ. ಕೆಂಪರಾಜು ಮಾತನಾಡಿ, ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದಲ್ಲಿ ಮಾನವ ಸಂಪನ್ಮೂಲ ಹಾಗೂ ಯುವ ಶಕ್ತಿ ಅಧಿಕವಾಗಿದೆ.  ದೇಶ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಸಾಮಾಜಿಕ,ಸಾಂಸ್ಕೃತಿಕ, ರಾಜಕೀಯ ಹಾಗೂ  ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿವೆ. ರೈತರು, ಅಶಿಕ್ಷಿತರು, ನಿರುದ್ಯೋಗಿಗಳಿಂದ ದೇಶಕ್ಕೆ ಅಪಾಯವಾಗುತ್ತಿಲ್ಲ. ಆದರೆ  ವಿದ್ಯಾವಂತರಿಂದಲೇ ಸಮಸ್ಯೆಯಾಗಿರುವುದು ವಿಪರ್ಯಾಸ. ಇದು ಶಿಕ್ಷಣ ಪದ್ಧತಿ ಅರ್ಥಪೂರ್ಣವಾಗಿಲ್ಲ ಎಂದು ಸೂಚಿಸುವುದರೊಂದಿಗೆ ಶಿಕ್ಷಣ ವ್ಯವಸ್ಥೆ ಬದಲಾಯಿಸಬೇಕಾದ ಅಗತ್ಯೆಯೂ ಕಂಡುಬರುತ್ತಿದೆ ಎಂದು ನುಡಿದರು.

ವೇದಿಕೆಯಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ವಿವೇಕ್ ಹೆಗ್ಡೆ, ಎಸ್‌ಡಿಎಂ ಕಾಲೇಜು ನಿರ್ದೇಶಕ ಡಾ| ದೇವರಾಜ್ ಉಪಸ್ಥಿತರಿದ್ದರು. ವಿದುಷಿ ಲತಾ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನಾತನಾ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು. ಜಿ ಮುರಳೀಧರ ಶೆಣೈ ಪ್ರಾರ್ಥಿಸಿದರು.


Spread the love