ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ನಡುವಿನ ರೈಲ್ವೆ ಹಳಿ ವಿದ್ಯುದೀಕರಣ ಪೂರ್ಣ
ಮಂಗಳೂರು: ರೈಲ್ವೆ ಪ್ರಯಾಣಿಕರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದ್ದು. ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಸಂಪೂರ್ಣಗೊಂಡಿದ್ದು, ಸೆಪ್ಟೆಂಬರ್ 15ರಿಂದ ರೈಲುಗಳು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ. ಇದರೊಂದಿಗೆ ಬೆಂಗಳೂರು ಮಂಗಳೂರು ನಡುವೆ ವಂದೇಭಾರತ್ ರೈಲು ಸಂಚಾರಕ್ಕೆ ಅವಕಾಶ ಸಿಕ್ಕಂತಾಗಿದೆ.
ಕಳೆದ ಜೂನ್ನಿಂದ ಸುಬ್ರಹ್ಮಣ್ಯ ರೋಡ್- ಎಡಕುಮೇರಿ- ಹಾಸನ ನಡುವಿನ ಹಳಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಮಂಗಳೂರು- ಬೆಂಗಳೂರು ರೈಲುಗಳು ಕೂಡಾ ವಿದ್ಯುತ್ ಚಾಲಿತಗೊಳ್ಳಲಿವೆ. ಭವಿಷ್ಯದಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಗೊಳ್ಳಲು ಇದು ಅವಕಾಶ ಮಾಡಿಕೊಡಲಿದೆ. ಬುಧವಾರ ವಿದ್ಯುತ್ ಚಾಲಿತ ಎಂಜಿನ್ ಮಂಗಳೂರು- ಸುಬ್ರಹ್ಮಣ್ಯ ರೋಡ್ ನಡುವೆ ಯಶಸ್ವಿ ಸಂಚಾರ ನಡೆಸಿತು.
ಮುಂಜಾನೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಸುಬ್ರಹ್ಮಣ್ಯ ರೋಡ್ ತಲುಪುವ ಪ್ಯಾಸೆಂಜರ್ ರೈಲು ಅಲ್ಲಿಂದ ಮರಳಿ ಮಂಗಳೂರು ತಲುಪುತ್ತಿದೆ. ಇದೇ ರೈಲು ಸಂಜೆಯೂ ಇದೇ ರೀತಿ ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಬಂದು ರಾತ್ರಿ ಮಂಗಳೂರಿಗೆ ನಿರ್ಗಮಿಸುತ್ತದೆ.ಮಂಗಳೂರಿನ ಹೋಟೆಲ್ಗಳು
ಇವೆರಡು ಸೇವೆಗಳಲ್ಲದೆ ಮಧ್ಯಾಹ್ನವೂ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಸೇವೆಯಿದೆ. ಈ ಮೂರು ಹೊತ್ತಿನ ರೈಲುಗಳು ಸೆ.15ರಿಂದ ವಿದ್ಯುತ್ ಚಾಲಿತ ಧಿಎಂಜಿನ್ ಮೂಲಕ ಸಂಚರಿಸಲಿವೆ.