ಮಕ್ಕಳ ಭಿಕ್ಷಾಟನೆ ನಿಯಂತ್ರಣಕ್ಕೆ ಕ್ರಮ: ತಹಶೀಲ್ದಾರ್ ಗುರುಪ್ರಸಾದ್ 

Spread the love

ಮಕ್ಕಳ ಭಿಕ್ಷಾಟನೆ ನಿಯಂತ್ರಣಕ್ಕೆ ಕ್ರಮ: ತಹಶೀಲ್ದಾರ್ ಗುರುಪ್ರಸಾದ್ 

ಮಂಗಳೂರು : ಕೆಲವೊಂದು ಕಡೆ ಗೂಡಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದೆ. ಇಂತಹ ಸಂದರ್ಭದಲ್ಲಿ ನೇರವಾಗಿ ಪೋಲಿಸ್ ಇಲಾಖೆಗೆ ದೂರನ್ನು ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸೂಚಿಸಿದ್ದಾರೆ.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಯೋಜನೆಗಳ ಅನುಷ್ಠಾನ ಬಗ್ಗೆ ತಾಲೂಕು ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಮಕ್ಕಳ ಭಿಕ್ಷಾಟನೆ ಸಮಸ್ಯೆ ಜಾಸ್ತಿ ಆಗಿದೆ. ತಮಿಳುನಾಡು,ಆಂಧ್ರ ಪ್ರದೇಶ ಮತ್ತು ಕೇರಳಗಳಿಂದ ಹೆಚ್ಚಾಗಿ ಮಕ್ಕಳು ಬಂದು ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಶೇಕಡಾ 80% – 90% ರಿಂದ ಭಿಕ್ಷಾಟನೆಯಲ್ಲಿ ಮಕ್ಕಳು ಹೆತ್ತವರ ಜೊತೆ ಸಂಪರ್ಕದಲ್ಲಿರಿರುತ್ತಾರೆ. ಈ ನಿಟ್ಟಿನಲ್ಲಿ ಮಹಾನಗರಪಾಲಿಕೆಯೊಂದಿಗೆ ಸಭೆ ನಡೆಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯತ್‍ಗಳಲ್ಲಿ ತ್ರೈಮಾಸಿಕ ಮಕ್ಕಳ ಗ್ರಾಮ ಸಭೆ ಮಾಡಬೇಕು. ಮಕ್ಕಳೇ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಪರಿಹಾರ ಮಾಡುವಂತಹ ಕಾರ್ಯ ಮಾಡಬಹುದು. ಮುಂದಿನ ದಿನಗಳಲ್ಲಿ ಶಿಬಿರಗಳನ್ನು ಮಾಡುವುದಾಗಿ ತಹಶೀಲ್ದಾರ್ ಹೇಳಿದರು.

ಬಾಲ್ಯವಿವಾಹಕ್ಕೆ ಸಂಬದಿಸಿದಂತೆ ಅಲೆಮಾರಿ ಕಾರ್ಮಿಕರು ಸವಾಲಾಗಿದ್ದಾರೆ. ಉತ್ತರ ಕರ್ನಾಟಕದಿಂದ ಕೆಲಸಕ್ಕಾಗಿ ಬರುವರ ಬಗ್ಗೆ ಮಾಹಿತಿ ಕಲೆ ಹಾಕುವುದು ಸಮಸ್ಯೆಯಾಗಿದೆ. ಸಾಮೂಹಿಕ ವಿವಾಹಗಳ ಮೇಲೆ ನಿಗಾ ವಹಿಸಲಾಗಿದ್ದು, ಗ್ರಾಮಕರಣಿಕರಿಗೆ ಈಗಾಗಲೇ ವಿವಾಹ ನೋದಣಿಯ ಕುರಿತು ಸುತ್ತೋಲೆಯನ್ನು ಕಳುಹಿಸಿ, ಸೂಕ್ತ ತರಬೇತಿ ನೀಡಲಾಗಿದೆ ಎಂದು ಹೇಳಿದರು.


Spread the love