ಮನಪಾ : ನೀರಿನ ದರ ಏರಿಕೆ ವಾಪಾಸ್ ಪಡೆಯಲು ಡಿವೈಎಫ್ಐ ಆಗ್ರಹ

Spread the love

ಮನಪಾ : ನೀರಿನ ದರ ಏರಿಕೆ ವಾಪಾಸ್ ಪಡೆಯಲು ಡಿವೈಎಫ್ಐ ಆಗ್ರಹ

ಮಂಗಳೂರು ಪಾಲಿಕೆಯು ಯಾವುದೇ ಮುನ್ಸೂಚನೆ ಇಲ್ಲದೆ 2019 ಎಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ದರ ವನ್ನು ಐದಾರು ಪಟ್ಟು ಏರಿಕೆ ಮಾಡಿದೆ. ಈ ರೀತಿಯ ವಿಪರೀತವಾದ ದರ ಏರಿಕೆ ನಗರದ ಜನಸಾಮಾನ್ಯರ ಪಾಲಿಗೆ ದೊಡ್ಡ ಹೊರೆಯಾಗಿದೆ. ಈ ರೀತಿಯ ಪೂರ್ವ ಸೂಚನೆಯಿಲ್ಲದ ವಿಪರೀತ ದರ ಏರಿಕೆಯನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ದರ ಏರಿಕೆಯನ್ನು ವಾಪಾಸ್ ಪಡೆಯುವಂತೆ ಮಂಗಳೂರು ನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದೆ.

ಹನ್ನೊಂದು ವರ್ಷಗಳ ಹಿಂದೆ ಪ್ರಥಮ‌ ಬಾರಿಗೆ ಬಿಜೆಪಿ ಮಂಗಳೂರು ಪಾಲಿಕೆಯಲ್ಲಿ‌ ಆಡಳಿತಕ್ಕೆ ಬಂದಾಗ ನೀರಿನ ದರವನ್ನು ದೊಡ್ಡ ಮಟ್ಟದಲ್ಲಿ‌ ಏರಿಕೆ ಮಾಡಿ ಖಾಸಾಗೀಕರಣಕ್ಕೆ ಮುಂದಾಗಿತ್ತು. ಆ ಸಂದರ್ಭ ಡಿವೈಎಫ್ಐ, ಸಿಪಿಐಎಂ ನೇತೃತ್ವದಲ್ಲಿ ನಡೆದ ನಗರದ ಜನತೆಯ ತೀವ್ರತರದ ಪ್ರತಿಭಟನೆಯಿಂದಾಗಿ ದರ ಏರಿಕೆ, ಖಾಸಾಗೀಕರಣವನ್ನು ಪಾಲಿಕೆ ಹಿಂದಕ್ಕೆ ಪಡೆದಿತ್ತು. ಆ ನಂತರ ಈ ವರಗೆ ದರ ಏರಿಕೆ ಆಗಿರಲಿಲ್ಲ. ಆದರೆ ಈಗ ದರವನ್ನು ನಾಲ್ಕರಿಂದ ಐದು ಪಟ್ಟು ಏರಿಕೆ ಮಾಡಲಾಗಿದೆ. ಈ ದರ ಏರಿಕೆಯನ್ನು ಎಡಿಬಿ ಮುಂತಾದ ವಿದೇಶಿ ಬ್ಯಾಂಕ್ ಗಳ ನಿರ್ದೇಶನದ ಪ್ರಕಾರ ಮಾಡಲಾಗಿದೆ ಎಂದು ಡಿವೈಎಫ್ಐ ಆಪಾದಿಸಿದೆ. ಈ ಹಿಂದೆ ತಿಂಗಳಿಗೆ 65 ರೂಪಾಯಿ ಕನಿಷ್ಟ ದರ ನಿಗದಿ ಮಾಡಿ 25,000 ಲೀಟರ್ ನೀರು ನೀಡಲಾಗಿತ್ತು. ಆ ನಂತರದ ನೀರಿನ ಬಳಕೆಗೆ ಒಂದು ಸಾವಿರ ಲೀಟರ್ ನೀರಿಗೆ ಕೇವಲ 3 ರೂಪಾಯಿ ದರ ವಿಧಿಸಲಾಗುತ್ತಿತ್ತು. ಆದರೆ ಈಗ ಕನಿಷ್ಟ ನೀರಿನ ಪ್ರಮಾಣವನ್ನು 25,000 ಸಾವಿರ ಲೀಟರ್ ನಿಂದ 8,000 ಲೀಟರ್ ಗೆ ಇಳಿಸಲಾಗಿದೆ. ನಂತರದ ಬಳಕೆಗೆ ಲೀಟರ್ ಗೆ 3 ರೂಪಾಯಿಯಿಂದ 9 ರೂಪಾಯಿ 12 ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಏರಿಕೆ ಏಕಮುಖ ಹಾಗೂ ತೀರಾ ಜನವಿರೋಧಿಯಾಗಿದೆ. ಈ ಏರಿಕೆಯಿಂದ ಕುಡಿಯುವ ನೀರಿಗೂ ತಿಂಗಳಿಗೆ ನೂರಾರು ರೂಪಾಯಿಯಿಂದ ಸಾವಿರ ರೂಪಾಯಿ ಗಿಂತಲೂ ಹೆಚ್ಚಿನ ದರ ಪ್ರತಿ ತಿಂಗಳು ಜನತೆ ಭರಿಸುಂತಾಗುತ್ತದೆ. ವಿದೇಶಿ ಬ್ಯಾಂಕ್ ಗಳ ಕರಾರುಗಳಿಗೆ ಕಣ್ಣುಮುಚ್ಚಿ ಸಹಿ ಹಾಕಿ ಬಡ ಜನತೆಯನ್ನು ಕುಡಿಯುವ ನೀರಿನಿಂದಲೂ ವಂಚಿಸುವುದನ್ನು ಯಾವ ಕಾರಣಕ್ಕೂ ಒಪ್ಪಲಾಗದು.

ಜಿಲ್ಲಾಧಿಕಾರಿಗಳು ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಳ್ವಿಕೆ ಇಲ್ಲದ ಸಂದರ್ಭವನ್ನು ಬಳಸಿ, ಶಾಸಕರುಗಳ ಗಮನಕ್ಕೆ ತರದೆ ಏರಿಕೆ ಮಾಡಿರುವುದು ಯಾವ ಕಾರಣಕ್ಕೂ ಒಪ್ಪಲಾಗದು. ಜಿಲ್ಲಾಡಳಿತ ತಕ್ಷಣ ದರ ಏರಿಕೆ ವಾಪಾಸ್ ಪಡೆಯಬೇಕು, ಶಾಸಕರುಗಳು ಮಧ್ಯಪ್ರವೇಶ ಮಾಡಬೇಕು‌ ಎಂದು‌ ಡಿವೈಎಫ್ಐ ದ ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.


Spread the love