ಮಲೆಕುಡಿಯ ಆದಿವಾಸಿಗಳ ಮೇಲೆ ದೌರ್ಜನ್ಯ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲೆಕುಡಿಯ ಆದಿವಾಸಿಗಳ ಮೇಲೆ ನಿತ್ಯ ನಿರಂತರ ದೌರ್ಜನ್ಯ ನಡೆಸುತ್ತಿರುವ ಭೂಮಾಲಕ ಗೋಪಾಲ ಗೌಡನು ಇತ್ತಿಚ್ಚೆಗೆ ಸುಂದರ ಮಲೆಕುಡಿಯನ ಎರಡೂ ಕೈಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪ್ರಗತಿಪರ ಸಾಹಿತಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬೆಂಗಳೂರಿನ ಟೌನ್ ಹಾಲ್ ಎದುರು ನಾಳೆ (ಮಂಗಳವಾರ, ಅಗಸ್ಟ್ 4ರಂದು)  ಸಂಜೆ 05 ಗಂಟೆಗೆ ಪ್ರತಿಭಟನೆ ನಡೆಸಲಿದ್ದಾರೆ.

ಕಳೆದ  25 ವರ್ಷಗಳಿಂದ ಅಕ್ರಮವಾಗಿ ನೂರಾರು ಎಕರೆ ಭೂಮಿಯನ್ನು ಹೊಂದಿರುವ ಭೂಮಾಲಕ ಬೆಳ್ತಂಗಡಿಯ ಗೋಪಾಲ ಗೌಡನು ಈಗಲೂ ತನ್ನ ಜಮೀನನ್ನು ವಿಸ್ತರಿಸುವ ಕಾಯಕದಲ್ಲಿ ತೊಡಗಿದ್ದಾನೆ. ಭೂಮಾಲಕ ಗೋಪಾಲಗೌಡನ ಕುಟುಂಬ ಬ್ರಿಟೀಷರ ಆಡಳಿತಾವಧಿ ಕಾಲದಲ್ಲಿ ಬ್ರಿಟೀಷರಿಗಾಗಿ ಕರವಸೂಲಿ ಮಾಡುವ ಶೇಣವರಾಗಿ ಕೆಲಸ ನಿರ್ವಹಿಸುತ್ತಿದ್ದು, ಕ್ರಮೇಣ ಜಮೀನ್ದಾರರಾಗಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಭೂಮಾಲಕ ಪ್ರವೃತ್ತಿಯನ್ನು ಮುಂದುವರಿಸಿದ್ದು, ಈಗಲೂ ಆದಿವಾಸಿಗಳು, ದಲಿತರ ಮೇಲೆ ನಿರಂತರ ಹಲ್ಲೆಗಳನ್ನು ನಡೆಸುತ್ತಲೇ ಬಂದಿದ್ದಾನೆ.

ಸುಂದರ ಮಲೆಕುಡಿಯರು ಗೋಪಾಲ ಗೌಡನ ಜಮೀನಿನ ಪಕ್ಕದಲ್ಲಿ ಜಮೀನನ್ನು ಹೊಂದಿದ್ದು, ಸುಂದರ ಮಲೆಕುಡಿಯನು ಅಲ್ಲಿ ಕೃಷಿ ಮಾಡಬಾರದೆಂದು ಸುಮಾರು 25 ವರ್ಷಗಳ ಹಿಂದೆ ಆದೇಶ ಹೊರಡಿಸಿದ್ದ. ಆದರೆ  ಸುಂದರ ಮಲೆಕುಡಿಯ ಕೃಷಿ ಚಟುವಟಿಕೆ ಮುಂದುವರೆಸಿದಾಗ ಗೋಪಾಲಗೌಡನ ಸಹಚರರು ಸುಂದರ ಮಲೆಕುಡಿಯನ ಮನೆಗೆ ನುಗ್ಗಿ ಮಗು ಪೂರ್ಣೇಶ ಮಲಗಿದ್ದ ತೊಟ್ಟಿಲನ್ನು ಕಡಿದ್ದರು. ಆಗ ಅಡ್ಡ ಬಂದ ಸುಂದರ ಮಲೆಕುಡಿಯನ ಪತ್ನಿಯ ಕೈ ಬೆರಳುಗಳನ್ನು ಗೋಪಾಲಗೌಡನ ಸಹಚರರು ತುಂಡರಿಸಿದ್ದರು. ಈಗಲೂ ಸುಂದರ ಮಲೆಕುಡಿಯನ ಪತ್ನಿಯ ಕೈಗಳಿಗೆ ಬೆರಳುಗಳಿಲ್ಲ. ಇಂತಹ ಹಲವಾರು ಘಟನೆಗಳು ಆ ಸಂಧರ್ಭದಲ್ಲಿ ನಡೆದಿತ್ತು.  25 ವರ್ಷಗಳ ಹಿಂದೆ ಮುಖ್ಯವಾಹಿನಿಯಲ್ಲಿ ನಡೆಯುತ್ತಿರೋ ಹೋರಾಟಗಳ ಸಂಪರ್ಕ ಇಲ್ಲದಿದ್ದ ಮಲೆಕುಡಿಯರು ಬೆರಳು, ಕೈಗಳನ್ನು ಕಳೆದುಕೊಂಡು ಸುಮ್ಮನಿದ್ದರು.

ಇತ್ತಿಚ್ಚೆಗೆ ಮತ್ತೆ ಸುಂದರ ಮಲೆಕುಡಿಯನ ಜಮೀನಿಗೆ ನುಗ್ಗಿದ ಗೋಪಾಲಗೌಡ ಮತ್ತು ಸಹಚರರು ಮರಗಳನ್ನು ಮೆಷಿನ್ ಮೂಲಕ ಕಡಿಯಲಾರಂಭಿಸಿದ್ದರು. ಅದನ್ನು ವಿರೋಧಿಸಿದ್ದ ಸುಂದರ ಮಲೆಕುಡಿಯ ಮತ್ತು ಪತ್ನಿ, ಮಗ ಪೂರ್ಣೇಶನಿಗೆ ಮೆಣಸಿನ ಹುಡಿ ಎರಚಿದ್ದಾರೆ. ನಂತರ ಸುಂದರ ಮಲೆಕುಡಿಯ ಕೈಗಳನ್ನು ಪ್ರಜ್ಙಾಪೂರ್ವಕವಾಗಿ ಹಿಡಿದು ಎರಡೂ ಕೈಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮೆಷಿನಿನಿಂದ ತುಂಡರಿಸಿದ್ದಾರೆ.

ಪೊಲೀಸರು ಭೂಮಾಲಕ ಗೋಪಾಲಗೌಡನನ್ನು ಇನ್ನೂ ಬಂಧಿಸಿಲ್ಲ. ಗೋಪಾಲಗೌಡನ ಬಂಧನ ಮಾಡಬೇಕು ಎಂಬುದು ಮಾತ್ರ ನಮ್ಮ ಆಗ್ರಹವಲ್ಲ. ಭೂಮಾಲಕನಿಂದ ಕೈಗಳನ್ನು ಕಳೆದುಕೊಂಡಿರುವ ಸುಂದರ ಮಲೆಕುಡಿಯನಿಗೆ 25 ಲಕ್ಷ ಪರಿಹಾರ ನೀಡಬೇಕು. ಸುಂದರ ಮಲೆಕುಡಿಯನ ಪುತ್ರ ಪೂರ್ಣೇಶನಿಗೆ ಸರಕಾರಿ ಉದ್ಯೋಗ ನೀಡಬೇಕು. ಇನ್ನೂ ಅಸ್ತಿತ್ವದಲ್ಲಿ ಇರುವ ಭೂಮಾಲಕ ಪದ್ದತಿಯನ್ನು ಹತ್ತಿಕ್ಕಲು ಸರಕಾರ ನಿರ್ಧಾರ ಕೈಗೊಳ್ಳಬೇಕು. ಭೂಮಾಲಕರು ಅಥವಾ ಜಮೀನ್ದಾರರನ್ನು ಗುರುತಿಸಿ ಅವರ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಗ್ರಾಮದ ಭೂ ರಹಿತರಿಗೆ ವಿತರಿಸಬೇಕು. ಭೂಸುಧಾರಣಾ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿ ಗ್ರಾಮದಲ್ಲಿ ಪ್ರತ್ಯೇಕ ಸರಕಾರವನ್ನು ಹೊಂದಿರುವ ಭೂಮಾಲಕರ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಮಾನ ಮನಸ್ಕ ಬಳಗ ಬೆಂಗಳೂರಿನ ಟೌನ್ ಹಾಲ್ ಎದುರು ನಾಳೆ (ಮಂಗಳವಾರ, ಅಗಸ್ಟ್ 04 ರಂದು) ಪ್ರತಿಭಟನೆ ನಡೆಸಲಿದೆ.

ರಾಜ್ಯದ ಹಲವು ಪ್ರಮುಖ ಸಾಹಿತಿಗಳು, ಹೋರಾಟಗಾರರು ಭಾಗವಹಿಸುವ ಈ ಪ್ರತಿಭಟನಾ ಕಾರ್ಯಕ್ರಮದ ಪೂರ್ವಭಾವಿ ವರದಿ(ನಗರದಲ್ಲಿ ಇಂದು) ಜೊತೆಗೆ ಪ್ರತಿಭಟನೆ ನಡೆಯವ ದಿನವಾದ ಮಂಗಳವಾರ ಅಗಸ್ಟ್ 04 ರಂದು  5 ಗಂಟೆಗೆ ತಾವು ತಮ್ಮ ಪ್ರತಿಷ್ಟಿತ ಮಾದ್ಯಮ ಸಂಸ್ಥೆಯಿಂದ ವರದಿಗಾರರು, ಕ್ಯಾಮರಾಮೆನ್/ಛಾಯಾಗ್ರಾಹಕರನ್ನು ಕಳುಹಿಸಿ ಸುದ್ದಿಯನ್ನು ಪ್ರಕಟಿಸಬೇಕಾಗಿ ಮನವಿ.


Spread the love