ಮಸ್ಕತ್ ನಲ್ಲಿ ಸುಶ್ರಾವ್ಯ ಭಕ್ತಿಪೂರ್ವಕ ಗಾಯನ ಸಂಜೆ

Spread the love

ಮಸ್ಕತ್ ನಲ್ಲಿ ಸುಶ್ರಾವ್ಯ ಭಕ್ತಿಪೂರ್ವಕ ಗಾಯನ ಸಂಜೆ

ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ ಒಮಾನ್ ದೇಶ ಅಪಾರ ಭಾರತೀಯರ ನೆಲೆಯಾಗಿದ್ದು, ಒಮಾನ್ ನಿವಾಸಿ ಭಾರತೀಯರ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಕೂಡ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ,ದಿನಾಂಕ 16 ಡಿಸೆಂಬರ್ 2017 ರಂದು ಒಮಾನಿನ ಸ್ಥಳೀಯ ‘ಇಸ್ಕಾನ್ ಸಂಸ್ಥೆ ‘ ಗಾಯಕಿ ಶ್ರೀಮತಿ ಅಂಜಲಿ ಹಳಿಯಾಳ್ ಅವರಿಂದ ರಾಜಧಾನಿ ನಗರ ಮಸ್ಕತ್ ನಲ್ಲಿ ಒಂದು ಸುಂದರ “ಕೀರ್ತನ ಮೇಳ” ವನ್ನು ಆಯೋಜಿಸಿದ್ದರು.

ಕೀರ್ತನ ಮೇಳದ ಅಂಗವಾಗಿ, ಪ್ರಪ್ರಥಮವಾಗಿ, ಮಕ್ಕಳು ಹಿರಿಯರಾದಿಯಾಗಿ, “ಹರೇರಾಮ ಹರೇಕೃಷ್ಣ” ದ ಜಪನಾಮಾವಳಿಯನ್ನು ವಿವಿಧ ರಾಗಗಳಲ್ಲಿ ಪ್ರಸ್ತುತ ಪಡಿಸಿದರು.

ಕರ್ನಾಟಕದಿಂದ ಆಗಮಿಸಿದ್ದ ಗಾಯಕಿ ಶ್ರೀಮತಿ ಅಂಜಲಿ ಹಳಿಯಾಳ್ ಅವರು, ವಿವಿಧ ಹರಿ ಕೀರ್ತನೆಗಳಿಂದ ಮತ್ತು ಭಜನ್ ಗಳ ಗಾಯನದಿಂದ ಸಭಿಕರನ್ನು ಭಕ್ತಿ ಪರವಶರನ್ನಾಗಿ ಮಾಡಿದರು. ಸಭಿಕರು, ತಾವೂ ಸಹ, ಎಲ್ಲ ಹಾಡುಗಳಿಗೆ ದನಿಗೂಡಿಸಿ, ಕರತಾಲಗಳಿಂದ ಆನಂದಿಸಿದರು.

ಮೀರಾ ಭಜನ್ “ಕೀನು ಸಂಗ್ ಖೇಲು ಹೋಲಿ”, ” ವನಮಾಲಿ ರಾಧಾರಮಣ” , “ಶ್ರೀ ರಾಧೆ ಗೋವಿಂದ ಮನ ಭಜಲೆ ಹರಿಕಾ ಪ್ಯಾರಾ ನಾಮ್ ಹೈ”, “ರಾಧಾ ರಮಣ ಮುಕುಂದ ಮಾಧವ” ಮುಂತಾದ ಭಜನ್ ಗಳನ್ನು ಅಂಜಲಿಯವರು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು .

ಅಂಜಲಿಯವರೊಂದಿಗೆ, ಅನುಪಮಾ ಮಹೇಶ್, ಶೋಭಿತಾ ಮಾತಾಜಿ ಕು. ತನುಶ್ರಿ ಸಹಗಾಯನದಲ್ಲಿ ಇಂಪಾಗಿ ಹಾಡಿದರು. ಶ್ರೀ. ಉತ್ಪಲ ಪ್ರಭು ಅವರು ಢೋಲಕ್ ನಲ್ಲಿ ಉತ್ತಮ ಸಹಕಾರ ನೀಡಿದರು.

“ಕೀರ್ತನ ಮೇಳ”ಕ್ಕೆ ಇಸ್ಕಾನ್ ಅನುಯಾಯಿಗಳಷ್ಟೇ ಅಲ್ಲದೆ, ಮಸ್ಕತ್ ನಗರದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಆಗಮಿಸಿದ್ದು ಕೃಷ್ಣ ಸಂಕೀರ್ತನೆಯಲ್ಲಿ ಭಾಗವಹಿಸಿ ಧನ್ಯತೆಯನ್ನು ಅನುಭವಿಸಿದ್ದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಇಸ್ಕಾನ್ ಮಸ್ಕತ್ ನ ಅಲ್ ಖ್ವೇರ್ ಘಟಕದ ಮುಖ್ಯಸ್ಥರಾದ “ಬಲದಾಯಿನಿ ಮಾತಾಜಿ” ಮತ್ತು ರಾಧಾ ಹರಿಣಿ ಮಾತಾಜಿ ಯವರ ಸಮರ್ಥ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜನಗೊಂಡಿತ್ತು.

ಅಂಜಲಿ ಹಳಿಯಾಳ್ ಸಂಗೀತದ ಹಾದಿಯ ಪಯಣ

ವೃತ್ತಿಯಾಗಿ ಭಾರತ ಸರ್ಕಾರದ ಬಿ ಎಸ್ ಎನ್ ಎಲ್ ನಲ್ಲಿ ಲೇಖಾಧಿಕಾರಿ ಹುದ್ದೆಯನ್ನು ಆರಿಸಿಕೊಂಡು, 25 ವರ್ಷ ಕ್ಕೂ ಹೆಚ್ಚು ಸೇವೆ ಸಲ್ಲಿಸಿ, ತಮ್ಮ ಸಂಗೀತಪ್ರೇಮದಿಂದ ಈಗ ಸ್ವಯಂ ನಿವೃತ್ತಿ ಪಡೆದಿರುವ ಶ್ರೀಮತಿ ಅಂಜಲಿ ದಕ್ಷಿಣ ಭಾರತದ. ಪ್ರಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಯಲ್ಲಿ ಸುಗಮ ಸಂಗೀತ ಕಲಿಯಲು ಪ್ರಾರಂಭಿಸಿದ್ದು ಕೆಲವು ವರ್ಷಗಳ ಹಿಂದೆ 1997 ರಲ್ಲಿ.

2004 ರ ಅನಂತರ ಶ್ರೀಮತಿ ಮಂಗಳಾ ಹೆಗಡೆ, ಮತ್ತು ಶ್ರೀ ಕಾಶಿನಾಥ್ ಪತ್ತಾರ್ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದ ಅಂಜಲಿ ಹಳಿಯಾಳ್ ಅವರು ದೂರದರ್ಶನದ. ಚಂದನ ವಾಹಿನಿಯ “ಮಧುರ ಮಧುರವೀ ಮಂಜುಳ ಗಾನ ” ಎಂಬ ಅತ್ಯಂತ ಜನಪ್ರಿಯ ಕಾರ್ಯಕ್ರಮ ದಲ್ಲಿ ಹಲವಾರು ಗೀತೆಗಳನ್ನು ಪ್ರಸ್ತುತ ಪಡಿಸಿದ್ದಾರೆ

ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ ಎಸ್ ಪಿ ಬಾಲಸುಬ್ರಮಣ್ಯಂ ಜೊತೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಲವಾರು ಯುಗಳ ಗೀತೆ ಹಾಡಿದ ಅಂಜಲಿ ಬೆಂಗಳೂರಿನ ರಾಜಭವನದಲ್ಲಿ ಘನತೆವೆತ್ತ ರಾಜ್ಯಪಾಲರ ಸಮ್ಮುಖದಲ್ಲಿ 2015 ರ ಗಾಂದಿ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಹಾಡಿದ್ದಾರೆ.

ಮೈಸೂರು ಮಲ್ಲಿಗೆಯ ಕವಿ ಶ್ರೀ.ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ. 26 ಜನವರಿ 2015 ರಂದು. ಕೆ.ಎಸ್. ನರಸಿಂಹಸ್ವಾಮಿ ಅವರ ವಿರಳ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿ ತಮ್ಮ ಧ್ವನಿಯಲ್ಲಿ “ಅಂಕುರ ” ಎಂಬ ಧ್ವನಿ ಸುರುಳಿ ಯನ್ನು ಹೊರತಂದಿರುವ ಅಂಜಲಿ ಹಳಿಯಾಳ್ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ ಗಜಲ್ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮ ಹಾಗು ಸಂಯುಕ್ತ ಅರಬ್ ಸಂಸ್ಥಾನದ ದುಬೈಯಲ್ಲಿ ಕನ್ನಡ ಚಿತ್ರಗೀತೆಗಳ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

2014 ರಲ್ಲಿ ಪುಣೆ ಕರ್ನಾಟಕ ಸಂಘದಲ್ಲಿ ಪುರಂದರ ಪುಣ್ಯತಿಥಿಯ ಸಂದರ್ಭದಲ್ಲಿ ಮೂರು ತಾಸು ನಿರಂತರ ಪುರಂದರ ದಾಸರ ರಚನೆಗಳನ್ನು ಹಾಡಿದ ಹೆಗ್ಗಳಿಕೆ ಅಂಜಲಿ ಹಳಿಯಾಳ್ ಅವರದ್ದು.

ವರದಿ: ಮಹೇಶ್ ಕೃಷ್ಣಮೂರ್ತಿ, ಮಸ್ಕತ್


Spread the love