ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ; 2019-20 ನೇ ಸಾಲಿನಲ್ಲಿ 5.26 ಕೋಟಿ ಲಾಭ : ಯಶ್ಪಾಲ್ ಸುವರ್ಣ

Spread the love

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ; 2019-20 ನೇ ಸಾಲಿನಲ್ಲಿ 5.26 ಕೋಟಿ ಲಾಭ : ಯಶ್ಪಾಲ್ ಸುವರ್ಣ

ಉಡುಪಿ: ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2019-20ನೇ ಸಾಲಿನಲ್ಲಿ ರೂ. 1,400 ಕೋಟಿ ವ್ಯವಹಾರ ನಡೆಸಿ ರೂ.5.26 ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ 2019-20ನೇ ಸಾಲಿನಲ್ಲಿ 157 ಕೋಟಿ ಠೇವಣಿ ಸಂಗ್ರಹ ಹಾಗೂ 131 ಕೋಟಿ ಸಾಲ ಮತ್ತು ಮುಂಗಡದೊಂದಿಗೆ, ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲದ ಪ್ರಮಾಣವು ಶೂನ್ಯವಾಗಿದ್ದು, ಹಣಕಾಸು ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ 30.78%, ಸಾಲ ಮತ್ತು ಮುಂಗಡ 46.42%, ಪಾಲು ಬಂಡವಾಳ 13.66% ಪ್ರಗತಿ ಸಾಧಿಸಿರುವುದಾಗಿ ತಿಳಿಸಿದ್ದಾರೆ.

ಕಳೆದ 11 ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ 18% ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ.

ಬ್ಯಾಂಕ್ ಪ್ರಸ್ತುತ 172 ಕೋಟಿ ಠೇವಣಿ ಹಾಗೂ 140 ಕೋಟಿ ಸಾಲ ಮತ್ತು ಮುಂಗಡದೊಂದಿಗೆ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ದಾಖಲಿಸಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದನ್ವಯ 100 ಕೋಟಿಗೂ ಮಿಕ್ಕಿ ಠೇವಣಿ ಹೊಂದಿರುವ ಎಲ್ಲಾ ಪಟ್ಟಣ ಸಹಕಾರಿ ಬ್ಯಾಂಕ್ ಕಡ್ಡಾಯವಾಗಿ “ಬೋರ್ಡ್ ಆಫ್ ಮ್ಯಾನೇಜ್ಮೆಂಟ್” ಹೊಂದಿರಬೇಕಾಗಿದ್ದು, ರಚನೆಯ ಪ್ರಕ್ರಿಯೆಗೆ ಕಾರ್ಯ ಪ್ರವೃತ್ತರಾಗಿರುತ್ತೇವೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಉತ್ತರ ಕನ್ನಡ ಹಾಗೂ ರಾಜಧಾನಿ ಬೆಂಗಳೂರಿನಲ್ಲಿಯೂ ಶಾಖೆಗಳನ್ನು ಆರಂಭಿಸಿ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವ ಯೋಜನೆ ಆಡಳಿತ ಮಂಡಳಿಯ ಮುಂದಿರುವುದಾಗಿ ತಿಳಿಸಿದ್ದಾರೆ.

ಬ್ಯಾಂಕಿನ ಮಲ್ಪೆ, ಕುಂದಾಪುರ, ಮಂಗಳೂರು, ಸುರತ್ಕಲ್ ಶಾಖೆ ಹಾಗೂ ಆಡಳಿತ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಆರ್.ಟಿ.ಜಿ.ಎಸ್., ನೆಫ್ಟ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಸೇಫ್ ಡೆಪಾಸಿಟ್ ಲಾಕರ್, ಇ-ಸ್ಟ್ಯಾಂಪಿಂಗ್, ಎಸ್ಎಮ್ಎಸ್ ಬ್ಯಾಂಕಿಂಗ್, ಎಬಿಕ್ಸ್ ಕ್ಯಾಶ್ (ವೆಸ್ಟರ್ನ್ ಯೂನಿಯನ್), ಎಚ್ಡಿಎಫ್ಸಿ ಬ್ಯಾಂಕಿನ ಒಡಂಬಡಿಕೆಯೊಂದಿಗೆ ಎಟಿಎಂ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಅಳವಡಿಕೊಳ್ಳಲಾಗಿದೆ. ಈಗಾಗಲೇ ನ್ಯೂ ಇಂಡಿಯಾ ಇನ್ಶ್ಯೂರೆನ್ಸ್ ಕಂಪೆನಿ ಕಾರ್ಪೋರೇಟ್ ಏಜೆಂಟ್ ಮೂಲಕ ವಿಮಾ ಸೌಲಭ್ಯವನ್ನು ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲ ಆರೋಗ್ಯ ಕಾರ್ಡಿನ ಒಡಂಬಡಿಕೆಯಂತೆ ಗ್ರಾಹಕರಿಗೆ ಆರೋಗ್ಯ ಕಾರ್ಡ್ ಒದಗಿಸುತ್ತಿದೆ. ಮಲ್ಪೆ ಶಾಖೆಯ ಗ್ರಾಹಕರ ಹೆಚ್ಚಿನ ಸೇವೆಗಾಗಿ ವ್ಯವಹಾರ ಸಮಯವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿಸ್ತರಿಸಲಾಗಿದೆ. ಬ್ಯಾಂಕಿನ ಅಧಿಕೃತ ವೆಬ್ಸೈಟಿಗೆ ಚಾಲನೆ ನೀಡಲಾಗಿದ್ದು ಗ್ರಾಹಕರು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಮಹಿಳಾ ಮೀನುಗಾರರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ಪ್ರಸಕ್ತ ಹಣಕಾಸು ವರ್ಷದಲ್ಲಿ ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳನ್ನು ರಚಿಸಿ ಶೂನ್ಯ ಬಡ್ಡಿದರದ ಸಾಲ ಯೋಜನೆಯ ಮೂಲಕ 237 ಸ್ವಸಹಾಯ ಗುಂಪುಗಳ 1713 ಫಲಾನುಭವಿಗಳಿಗೆ 8.57 ಕೋಟಿ ಸಾಲ ವಿತರಿಸಲಾಗಿದೆ. ಪ್ರಸ್ತುತ ಕೋವಿಡ್-19ನ ಸಂದರ್ಭದಲ್ಲಿ ನಮ್ಮ ಗ್ರಾಹಕರ ಹಿತದೃಷ್ಟಿಯಿಂದ ಸಾಲದ ಕಂತನ್ನು ಮರು ಪಾವತಿಸಿದ್ದಲ್ಲಿ 2% ಬಡ್ಡಿ ದರದಲ್ಲಿ ವಿನಾಯಿತಿ ಘೋಷಿಸಿದ್ದು, ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ಮಹಿಳಾ ಮೀನು ಮಾರಾಟಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಶೂನ್ಯ ಬಡ್ಡಿದರದಲ್ಲಿ ರೂ. 10,000/- ಕಿರು ಸಾಲ ಯೋಜನೆ ರೂಪಿಸಲಾಗಿದೆ.

ಪ್ರತಿವರ್ಷ ಬ್ಯಾಂಕಿನ ಅರ್ಹ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದ್ದು, ಅಜ್ಜರಕಾಡು ಡಾ ಜಿ ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಧ್ಯಕ್ಷರ ವೈಯುಕ್ತಿಕ ನೆಲೆಯಲ್ಲಿ ಬ್ಯಾಂಕಿನ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಗಿದೆ.

1978ರಲ್ಲಿ ಆರಂಭಗೊಂಡಿರುವ ಬ್ಯಾಂಕ್ 42 ವರ್ಷಗಳನ್ನು ಪೂರೈಸಿದ್ದು, 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ 1 ಲಕ್ಷ ಸದಸ್ಯರನ್ನೊಳಗೊಂಡು, 1 ಸಾವಿರ ಕೋಟಿ ಠೇವಣಿ ಹಾಗೂ 10 ಸಾವಿರ ಕೋಟಿ ವಾರ್ಷಿಕ ವ್ಯವಹಾರದ ಗುರಿಯನ್ನು ಹೊಂದಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಮತ್ಸ್ಯಕ್ಷಾಮ ಹಾಗೂ ಕೋವಿಡ್-19 ಸಂದರ್ಭದಲ್ಲಿಯೂ ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಯಶ್ಪಾಲ್ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love