ಮಾಜಿ ಸಚಿವ ಬಿ.ಎ.ಮೊಯಿದಿನ್ ನಿಧನ – ಎಸ್ ಐ ಓ, ವೆಲ್ ಫೇರ್ ಪಾರ್ಟಿಯಿಂದ ಸಂತಾಪ

Spread the love

ಶೈಕ್ಷಣಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಮಾಜಿ ಸಚಿವ ಬಿ.ಎ.ಮೊಯಿದಿನ್: ಎಸ್ ಐ ಓ
ಮಂಗಳೂರು: ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ, ಬಿ.ಎ. ಮೊಯಿದಿನ್ ರವರು ಶೈಕ್ಷಣಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟು, ಉತ್ತಮ ಜನನಾಯಕರಾಗಿ ಗುರುತಿಸಿ, ಸದಾ ನೆನೆಯುವಂತಾಯಿತು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್ ಐ ಓ) ದ.ಕ. ಜಿಲ್ಲಾ ಘಟಕವು ಮೊಯಿದಿನ್ ರವರ ನಿಧನಕ್ಕೆ ಸಂತಾಪ ಸೂಚಿಸಿದೆ.
1995 ರಿಂದ 1999 ರವರೆಗೆ ಜೆ.ಎಚ್. ಪಟೇಲ್ ರವರ ಸರಕಾರದ ಆಡಳಿತಾವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿ, ಉತ್ತಮ ಸಚಿವರಾಗಿ ಹೆಸರು ಪಡೆಯುವುದರ ಜೊತೆಗೆ ಇಡೀ ರಾಜ್ಯದ ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿದ್ದ ಹಿರಿಯ ರಾಜಕಾರಣಿಯಾಗಿದ್ದರು. ಅವರ ಅಗಲುವಿಕೆಯು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ ಮುಬೀನ್ ಬೆಂಗ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಹಿರಿಯ ರಾಜಕಾರಣಿ ಬಿ.ಎ. ಮೊಯಿದ್ದೀನ್ ನಿಧನ: ವೆಲ್‍ಫೇರ್ ಪಾರ್ಟಿಯಿಂದ ಸಂತಾಪ

ರಾಜ್ಯ ಕಂಡ ಬೆರಳೆಣಿಕೆಯ ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಹಿರಿಯ ಮುತ್ಸದ್ಧಿ ಬಿ.ಎ. ಮೊಯಿದ್ದೀನ್‍ರ ನಿಧನಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಹಂಗಾಮಿ ಜಿಲ್ಲಾಧ್ಯಕ್ಷ ಎಸ್.ಎಮ್. ಮುತ್ತಲಿಬ್ ಸಂತಾಪ ಸೂಚಿಸಿದ್ದಾರೆ.

“ರಾಜಕೀಯ ಪಕ್ಷಗಳಲ್ಲಿ ನಾಯಕತ್ವ ಸ್ಥಾನದಲ್ಲಿದ್ದಂತಹ ಮೊಯಿದ್ದೀನ್‍ರು ತನ್ನ ಮೇಲೆ ಯಾವುದೇ ರಾಜಕೀಯ ಕಳ್ಮಶವು ಬಾರದಂತೆ ಬಹಳ ಜನತದಿಂದ ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ಅಪರೂಪದ ರಾಜಕಾರಣಿ ನಮ್ಮಿಂದ ಅಗಲಿರುವುದು ತುಂಬಲಾರದ ನಷ್ಟವಾಗಿದೆ. ತಾವು ಸಚಿವ ಸ್ಥಾನವನ್ನು ಹೊಂದಿದ್ದ ಉನ್ನತ ಶಿಕ್ಷಣ ಖಾತೆಯನ್ನು ಬಹಳ ಉತ್ತಮವಾಗಿ ನಿರ್ವಹಿಸಿರುವುದು ರಾಜ್ಯದ ಜನತೆ ಕಂಡ ಸತ್ಯವಾಗಿದೆ. ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ಇಹಲೋಕದ ತ್ಯಜಿಸಿರುವ ಬಿ.ಎ. ಮೊಯಿದ್ದೀನ್‍ರವರು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂದಿನ ಪೀಳಿಗೆಗೆ ಮಾದರೀ ಯೋಗ್ಯರಾಗಿದ್ದಾರೆ. ಸಮುದಾಯದಲ್ಲಿ ಹಿರಿಯ ಮುತ್ಸದ್ಧಿ ಎಂದೇ ಗುರುತಿಸಿಕೊಂಡಿರುವ ಬಿ.ಎ. ಮೊಯಿದ್ದೀನ್‍ರ ಆತ್ಮಕ್ಕೆ ದೇವನು ಮೋಕ್ಷ ಮತ್ತು ಶಾಂತಿಯನ್ನು ದಯಪಾಲಿಸಲಿ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love