ಮಾಜಿ ಸಿಎಂ ಸಿದ್ದರಾಮಯ್ಯ ರಿಂದ ಮಹಿಳೆಗೆ ಅವಮಾನ; ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಆಕ್ರೋಶ

Spread the love

ಮಾಜಿ ಸಿಎಂ ಸಿದ್ದರಾಮಯ್ಯ ರಿಂದ ಮಹಿಳೆಗೆ ಅವಮಾನ; ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಆಕ್ರೋಶ

ಉಡುಪಿ: ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯೋರ್ವರ ಮೇಲೆ ದಬ್ಬಾಳಿಕೆ ತೋರಿಸುವ ಮೂಲಕ ಜಗತ್ತಿನ ಮುಂದೆ ಕರ್ನಾಟಕವೇ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ್ದಾರೆ. ಇಂತಹ ದುರಹಂಕಾರಿಯನ್ನು ಪಕ್ಷದಲ್ಲಿರಿಸಿಕೊಂಡಿರುವ ಕಾಂಗ್ರೇಸಿಗರಿಗೆ ಕೀಚಕ,ದುಶ್ಯಾಸನರಿಗೆ ಆದ ಗತಿಯೇ ಆಗಲಿದೆ ಎಂದು ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಘಟನೆಯಿಂದಾಗಿ ಮಹಿಳೆಯರು ಕಾಂಗ್ರೆಸ್ ನಾಯಕರ ಬಳಿ ಹೋಗುವ ಮೊದಲು ನೂರು ಬಾರಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿರುವುದು ಇದೇ ಮೊದಲಲ್ಲ ಈ ಹಿಂದೆ ಉಡುಪಿ ನಗರಸಭೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು ಮಹಿಳೆಯೋರ್ವರನ್ನುಎಳೆದಾಡಿ ವಿಕೃತಿ ಮೆರೆದಿದ್ದರು. ಇವರ ಗೂಂಡಾಗಿರಿಗೆ ತಕ್ಕ ಪಾಠ ಕಲಿಸಿದ ಉಡುಪಿಯ ಜನತೆ ಕಾಂಗ್ರೆಸನ್ನು ನಗರಸಭೆಯ ಪಕ್ಷದಲ್ಲಿ ವಿಪಕ್ಷದಲ್ಲಿ ವಿರೋಧ ಪಕ್ಷದಲ್ಲಿಯೂ ಕೂರಲು ಲಾಯಕ್ಕಿಲ್ಲದಂತೆ ಮಾಡಿದರು.

ತನ್ನ ದುರಾಡಳಿತದಿಂದ ಅಧಿಕಾರ ಕಳೆದುಕೊಂಡು ಮೂಲೆಗುಂಪಾದರೂ ಸಿದ್ದರಾಮಯ್ಯ ಅವರ ದುರ್ವರ್ತನೆಗಳು ಇನ್ನೂ ನಿಂತಿಲ್ಲ. ಸಮಸ್ಯೆ ಹೇಳಿ ಅಹವಾಲು ಒಪ್ಪಿಸಲು ಬಂದ ಮಹಿಳೆಯ ಜೊತೆ ಓರ್ವ ಹಿರಿಯ ರಾಜಕಾರಣಿ ಇಷ್ಟು ಹೀನಾಯವಾಗಿ ವರ್ತಿಸಿರುವುದು ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಉಳಿದವರಿಗೆಲ್ಲಾ ಮಹಿಳಾ ಹಕ್ಕುಗಳು,ಮಾನವೀಯತೆ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಮುಖಂಡರು ಮೊದಲು ತಮ್ಮ ಮಾಜಿ ಮುಖ್ಯಮಂತ್ರಿಗೆ ಸಭ್ಯತೆ ಕಲಿಸಬೇಕಾಗಿದೆ. ಇಲ್ಲವಾದರೆ ಚರಿತ್ರೆಯಲ್ಲಿ ಹೆಣ್ಣಿನ ಸೆರಗಿಗೆ ಕೈಹಾಕಿ ಅಳಿದುಹೋದ ದುಶ್ಯಾಸನ ಕೀಚಕರ ಸಾಲಿಗೆ ಸಿದ್ದರಾಮಯ್ಯ ಅವರೂ ಸೇರಬಹುದು. ಸಾರ್ವಜನಿಕರ ಎದುರೇ ಮಹಿಳೆಗೆ ಅವಮಾನ ಮಾಡಿದ ಸಿದ್ದರಾಮಯ್ಯರ ಪಕ್ಷದವರು ಮುಂದಿನ ಚುನಾವಣೆಯ ವೇಳೆ ಮತ ಕೇಳಲು ಮನೆ ಮುಂದೆ ಬಂದರೆ ತಾಯಂದಿರು ತಕ್ಕ ಪಾಠ ಕಲಿಸಬೇಕು ಎಂದು ಯಶಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love