ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆ ಕನಸಿನೊಂದಿಗೆ ‘ಬೀಯಿಂಗ್ ಸೋಶೀಯಲ್’ ತಂಡಕ್ಕೆ ಚಾಲನೆ

Spread the love

ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆ ಕನಸಿನೊಂದಿಗೆ ‘ಬೀಯಿಂಗ್ ಸೋಶೀಯಲ್’ ತಂಡಕ್ಕೆ ಚಾಲನೆ

ಉಡುಪಿ: ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ‘ Being Social'(ಬೀಯಿಂಗ್ ಸೋಶಿಯಲ್) ಎನ್ನುವ ಸಮಾನ ಮನಸ್ಕ ವೇದಿಕೆಯ ಉದ್ಘಾಟನೆ ಶನಿವಾರ ಬೀಡಿನಗುಡ್ಡೆ ದೇವಾಡಿಗರ ಸಭಾಭವನದಲ್ಲಿ ಜರುಗಿತು.

ಇದೇ ವೇಳೆ ಸಾಮಾಜಿಕ ಜಾಲತಾಣವಾದ Facebook ಮುಖಾಂತರ ಹಮ್ಮಿಕೊಂಡ ‘ ಬಟ್ಟೆ ಸಂಗ್ರಹ’ ಅಭಿಯಾನದ ಮೂಲಕ ಸಂಗ್ರಹವಾದ ಒಳ್ಳೆ ಬಟ್ಟೆಗಳನ್ನು ಆಯ್ದ ಸಂಸ್ಥೆಯ ಮುಖ್ಯಸ್ಥರಿಗೆ ಸಾಂಕೇತಿಕವಾಗಿ ನೀಡುವ ಮೂಲಕ ವೇದಿಕೆಯ ಚಟುವಟಿಕೆಗಳಿಗೆ ಚಾಲನೆ ದೊರೆಯಿತು . ಉಡುಪಿ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಗೂ ಕೇರಳದ ಹಲವಾರು ಆಶ್ರಮಗಳಿಗೆ ಉಪಯುಕ್ತ ಬಟ್ಟೆಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಧಾರ್ಮಿಕ ಸಮುದಾಯದ ಮುಖಂಡರುಗಳು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಅದರಲ್ಲಿ ಪ್ರಮುಖವಾಗಿ ಸಾಮಾಜಿಕ ಕಾರ್ಯಕರ್ತೆ ವೇರೊನಿಕಾ ಕರ್ನೆಲಿಯೊ, ಬಿಜೆಪಿ ಪಕ್ಷದ ನಾಯಕ ಕುಯಿಲಾಡಿ ಸುರೇಶ್ ನಾಯಕ್, ಬಿಯಿಂಗ್ ಸೋಶಿಯಲ್ ಇದರ ಮುಖ್ಯ ರೂವಾರಿ ಅಮೃತ್ ಶೆಣೈ ಮತ್ತು ಯುವ ಪ್ರತಿಭಾವಂತ ಸಾಮಾಜಿಕ ಸೇವಾಕರ್ತ ಅವಿನಾಶ್ ಕಾಮತ್, ವೈದಿಕರಾದ ಚೇಂಪಿ ರಾಮಚಂದ್ರ ಭಟ್, ಸಾಹಿತಿ ಮುರಳಿಧರ ಉಪಾಧ್ಯ, ಬಾರ್ಕೂರು ಸೈಂಟ್ ಪೀಟರ್ಸ್ ಚರ್ಚ್ ಇದರ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ ವಲೇರಿಯನ್ ಮೆಂಡೊನ್ಸಾ, ಮಲ್ಪೆ ಮಸೀದಿಯ ಮೌಲಾನ ಇಮ್ರಾನುಲ್ಲ ಖಾನ್, ನ್ಯಾಯವಾದಿ ಲಕ್ಷ್ಮಣ್ ಶೇಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಕುಯಿಲಾಡಿ ಸುರೇಶ್ ನಾಯಕ್ ಅವರು ಒಂದು ಒಳ್ಳೆಯ ಕೆಲಸಕ್ಕೆ ಹೊರಟಾಗ ಟೀಕೆಗಳು ಸಹಜ ಆದರೆ ಟೀಕೆಗಳನ್ನು ಮೆಟ್ಟಿನಿಂತು ಸಮಾಜಕ್ಕೆ ನಾವೇನು ನೀಡಬೇಕು ಎಂದು ಕೊಂಡಿದ್ದೇವೆಯೋ ಅದನ್ನು ಮಾಡುತ್ತಾ ಮುಂದೆ ಹೋದರೆ ನಿಜವಾದ ಯಶಸ್ಸು ನಮಗೆ ಲಭಿಸುತ್ತದೆ ಆ ನಿಟ್ಟಿನಲ್ಲಿ ಈ ವೇದಿಕೆಗೆ ಸರ್ವರೀತಿಯಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ವೆರೋನಿಕಾ ಕರ್ನೆಲಿಯೋ ಮಾತನಾಡಿ ಇಂದು ನಮ್ಮ ನಮ್ಮ ಮನೆಗಳಲ್ಲಿ ಬೇಡವಾದ ಹಲವಾರು ನಿರುಪಯುಕ್ತ ವಸ್ತುಗಳು ಸದಾ ಕಾಣುತ್ತೇವೆ ಅದರ ಉಪಯೋಗ ಮಾಡುವವರು ಇಂದಿಗೂ ಇದ್ದಾರೆ ಅಂತಹವರನ್ನು ಹುಡುಕಿ ಅವರಿಗೆ ತಲುಪಿಸುವ ಕೆಲಸ ಮಾಡಲು ಹೊರಟಿರುವ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನಾರ್ಹ. ಇಂದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಹಚ್ಚಿದ ಕಿಡಿ ಸಮಾಜವನ್ನು ಉತ್ತಮಪಡಿಸುವ ದೊಡ್ಡ ಬೆಂಕಿಯಾಗಲಿ ಇದರಿಂದ ಸಮಾಜ ಪರಿವರ್ತನೆಗೊಳ್ಳಲಿ ಎಂದು ಶುಭಹಾರೈಸಿದರು.

ಮೌಲಾನ ಇಮ್ರಾನುಲ್ಲ ಖಾನ್ ಮಾತನಾಡಿ ಒಬ್ಬ ವ್ಯಕ್ತಿ ಸಮಾಜಮುಖಿಯಾಗಿ ಬದುಕುವುದೇ ನಿಜವಾದ ಧರ್ಮ ಎಂದು ಇಸ್ಲಾಂ ಭೋಧಿಸುತ್ತದೆ. ಹಸಿದವನಿಗೆ ಅನ್ನ ನೀಡುವುದು, ನೋವಿನಲ್ಲಿರುವವನ ಕಣ್ಣೀರು ಒರೆಸುವ ಕೆಲಸ ಪ್ರತಿಯೊಬ್ಬ ಮಾಡಿದಾಗ ಮಾತ್ರ ನಮ್ಮ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ನಾವು ಸಮಾಜದಲ್ಲಿ ಮಾನವೀಯತೆಯನ್ನು ಕಾಣಬೇಕಾದರೆ ನಮ್ಮ ನಮ್ಮ ವ್ಯಕ್ತಿತ್ವದಿಂದ ಕಾಣಬೇಕಾಗುತ್ತದೆ ಎಂದರು.

ವಂ|ವಲೇರಿಯನ್ ಮೆಂಡೊನ್ಸಾ ಮಾತನಾಡಿ ತನಗಾಗಿ ಅರಳುವುದು ಹೂವಲ್ಲ,; ತನಗಾಗಿ ಉರಿಯುವುದು ದೀಪವಲ್ಲ,; ತನಗಾಗಿ ಬಾಳುವುದು ಬಾಳಲ್ಲ. ಅದರಂತೆ ಇಂದು ಸಮಾನ ಮನಸ್ಕ ಯುವಜನರು ಇಟ್ಟ ಹೆಜ್ಜೆ ನಿಜಕ್ಕೂ ಶ್ಲಾಘನಾರ್ಹ. ಇಂದು ನಾವೇಲ್ಲಾ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದು, ಸದಾ ಮೊಬೈಲ್, ಇಂಟರ್ ನೆಟ್ ಇವುಗಳಲ್ಲಿಯೇ ತುಂಬಿಕೊಂಡು ಹೋಗಿದ್ದು ಸಮಾಜದಲ್ಲಿನ ನೊಂದವರ, ಅವಕಾಶವಂಚಿತರ ಬಗ್ಗೆ ಯೋಚಿಸಲು ಕೂಡ ನಮಗೆ ಸಮಯವಿಲ್ಲದಂತಾಗಿದೆ. ಇದರ ನಡುವೆ ನಮ್ಮಲ್ಲಿ ಇರುವ ಪ್ರತಿಭೆಗಳು ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಹಂಬಲ ಕಡಿಮೆಯಾಗುತ್ತಿದ್ದು, ಅವಿನಾಶ್ ಕಾಮತ್ ಅವರಂತಹ ಯುವಜನರು ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ, ಸಮಾಜಕ್ಕೆ ನಾವೇನಾದರೂ ಸೇವೆ ನೀಡಬೇಕೆಂಬ ಹಂಬಲದಿಂದ ಮುಂದೆ ಬಂಧಿರುವುದು ಶ್ಲಾಘನಾರ್ಹ ಸಂಗತಿ. ಪ್ರತಿಯೊಂದು ಧರ್ಮವೂ ಕೂಡ ನಮಗೆ ಮಾನವೀಯತೆಯ ಪಾಠವನ್ನು ಕಲಿಸುತ್ತದೆ ಆದರೆ ಅದನ್ನು ಕಾರ್ಯದಲ್ಲಿ ಮಾಡುವಲ್ಲಿ ಮಾತ್ರ ನಾವ್ಯಾರು ಮುಂದೆ ಬರುವುದು ವಿರಳ. ನಮ್ಮಲ್ಲಿನ ಮಾನವೀಯ ಧರ್ಮ ಜಾಗೃತಗೊಂಡಾಗ ಮಾತ್ರ ನಮ್ಮ ಬಾಳಿಗೆ ನಿಜವಾದ ಅರ್ಥ ಬರುತ್ತದೆ ಅಲ್ಲದೆ ಸಮಾವನ್ನು ಕಾಡುತ್ತಿರುವ ಕೋಮುವಾದ, ಭಯೋತ್ಪಾದನೆ, ಕೊಲೆ ಸುಲಿಗೆ ಇಂತಹ ಪಿಡುಗುಗಳು ದೂರವಾಗಲು ಸಾಧ್ಯವಾಗುತ್ತದೆ ಎಂಧರು.

ಇದೇ ವೇಳೆ ವೇದಿಕೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅಮೃತ್ ಶೆಣೈ ಅವರು ಮನೆಯಲ್ಲಿನ ಹಳೆಯ ಉತ್ತಮ ಬಟ್ಟೆಗಳು ಯಾರ ಮುಖಾಂತರವಾದರೂ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ತಲುಪಿಸಬೇಕು ಎಂಬ ಹಂಬಲದೊಂದಗೆ ವೇಳೆ ಸಾಮಾಜಿಕ ಜಾಲತಾಣವಾದ Facebook ಮುಖಾಂತರ ಹಮ್ಮಿಕೊಂಡ ‘ ಬಟ್ಟೆ ಸಂಗ್ರಹ’ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರಕಿತು. ಇದು ಕೇವಲ ಬಟ್ಟೆ ಸಂಗ್ರಹಕ್ಕೆ ಸೀಮಿತವಾಗದೆ ಒಂದು ರಾಜಕೀಯೇತರ, ಧಾರ್ಮಿಕೇತರ ವೇದಿಕೆ ನಿರ್ಮಾಣ ಮಾಡಬೇಕೆಂಬ ಆಸೆಯೊಂಧಿಗೆ ಈ ಬಿಯಿಂಗ್ ಸೋಶಿಯಲ್ ವೇದಿಕೆ ಆರಂಭಿಸಲು ಚಿಂತಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲು ನಿರ್ದರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಲಲಿತ (ನಗರಸಭೆಯಲ್ಲಿ 25 ವರ್ಷಗಳಿಂದ ಕಸ ಗುಡಿಸುವವರು), ಉಪಾಧ್ಯಾಯ ಮೂಡುಬೆಳ್ಳೆ (ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು), ಜೋನ್ ಪ್ರೇಮ್ ಕುಮಾರ್ (ಹೆಸರಾಂತ ಕಾರ್ಯಕ್ರಮ ನಿರ್ವಾಹಕರು), ಗೋಪಾಲಕೃಷ್ಣ ಭಟ್ (ಶಿಕ್ಷಣ ತಜ್ಷರು), ಸೂರಿ ಶೆಟ್ಟಿ (ಸಮಾಜಿಕ ಕಾರ್ಯಕರ್ತರು), ರಘು ಪಾಂಡೇಶ್ವರ್ (ಹಾಸ್ಯ ನಟರು), ವೆಂಕಿ ಪಲಿಮಾರ್ (ಕ್ಲೆ ಆರ್ಟಿಸ್ಟ್), ಮೊಹಮ್ಮದ್ ಇಬ್ರಾಹಿಂ (ಸಾಮಾಜಿಕ ಕಾರ್ಯಕರ್ತರು ಗಂಗೊಳ್ಳಿ), ದಿನೇಶ್ ಭಾಂಧವ್ಯ (ರಕ್ತ ದಾನಿಗಳು), ನಿಖಿಲ್ ನಾಯಕ್ (ರಾಷ್ಟ್ರೀಯ ಪವರ್ ಲಿಫ್ಟರ್), ಜನಾರ್ದನ್ ಭಂಡಾರ್ಕರ್ (ನಗರಸಭಾ ಸದಸ್ಯರು) ಇವರುಗಳನ್ನು ಗೌರವಿಸಲಾಯಿತು.


Spread the love