‘ಮಾನಸಿಕ ಆರೋಗ್ಯ ಜಾಗೃತಿ ಇಂದಿನ ಅಗತ್ಯ’ – ಕಾಡ್ಲೂರು ಸತ್ಯನಾರಾಯಣಾಚಾರ್ಯ

Spread the love

‘ಮಾನಸಿಕ ಆರೋಗ್ಯ ಜಾಗೃತಿ ಇಂದಿನ ಅಗತ್ಯ’ – ಕಾಡ್ಲೂರು ಸತ್ಯನಾರಾಯಣಾಚಾರ್ಯ

ಮಂಗಳೂರು:ಮಾಹಿತಿ ತಂತ್ರಜ್ಞಾನಗಳ ವಿನೂತನ ಆವಿಷ್ಕಾರದಿಂದಾಗಿ ಯುವ ಜನಾಂಗ ವ್ಯಸನ ಹಾಗೂ ಖಿನ್ನತೆಗೆ ಒಳಗಾಗುತ್ತಿದ್ದು, ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವು ಅತಿ ಅಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಮಾನಸಿಕ ಆರೋಗ್ಯ ವಿಭಾಗ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಮತ್ತು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಇವರ ಸಹಯೋಗದೊಂದಿಗೆ ಆಯೋಜಿಸಲಾದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2018’ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾನವ ಸಂಪನ್ಮೂಲದ ಸದ್ಬಳಕೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಗತ್ಯವಿದೆ. ‘ಒತ್ತಡ’ ನಿವಾರಣೆ ಪ್ರಸಕ್ತ ದಿನಗಳಲ್ಲಿ ನಮಗೆ ಸವಾಲಾಗಿದ್ದು, ಎಲ್ಲ ಶಾಲಾ ಕಾಲೇಜುಗಳಲ್ಲಿ ಇಂದು ಕೌನ್ಸಿಲರ್‍ಗಳನ್ನು ಕಾಣುತ್ತಿದ್ದೇವೆ. ಮೊಬೈಲ್‍ನಿಂದ ಹಿಡಿದು ವಿವಿಧ ರೀತಿಯ ವ್ಯಸನಗಳಿಗೆ ಯುವಜನಾಂಗ ಇಂದು ಬಲಿಯಾಗುತ್ತಿದ್ದು, ಜಾಗೃತಿ ಕಾರ್ಯಕ್ರಮಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನ್ಯಾಯಾಧೀಶರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ ಎಂ. ರಾಮಕೃಷ್ಣ ರಾವ್ ಪ್ರಾಸ್ತಾವಿಕ ಮಾತನ್ನಾಡಿದರು. ಅತಿಥಿಗಳಾದ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಡಾ ಶ್ರೀನಿವಾಸ ಭಟ್ ಮಾನಸಿಕ ರೋಗ ತಜ್ಞ, ಕೆ ಎಸ್ ಹೆಗ್ಡೆ ಆಸ್ಪತ್ರೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಡಾ ಪಿ ಎಸ್ ಐತಾಳ್ ಪ್ರಾಂಶುಪಾಲರು ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಮಲ್ಲನಗೌಡ ಪಾಟೀಲ್, ವೆನ್ಲಾಕ್ ಆಸ್ಪತ್ರೆಯ ಡಾ ದಮಯಂತಿ ಕೃಷ್ಣಮೋಹನ್, ಡಾ ಸುನಿಲ್, ಡಾ ರತ್ನಾಕರ್ ಪಾಲ್ಗೊಂಡರು. ಡಾ ಜಯಂತ್ ಸ್ವಾಗತಿಸಿದರು. ಶ್ರೀನಿವಾಸ ಕಾಲೇಜಿನ ಎಂಎಸ್‍ಡಬ್ಲ್ಯು ವಿಭಾಗ ಮುಖ್ಯಸ್ಥರಾದ ಡಾ ಲವೀನ ಡಿಮೆಲ್ಲೋ ವಂದಿಸಿದರು.


Spread the love