ಮಿಥುನ್ ರೈ ಬಜರಂಗದಳ ತಂಟೆಗೆ ಬಂದರೆ ತಲೆ ತೆಗೆಯುತ್ತೇವೆ- ವೈರಲ್ ಆದ ವೀಡಿಯೋ

Spread the love

ಮಿಥುನ್ ರೈ ಬಜರಂಗದಳ ತಂಟೆಗೆ ಬಂದರೆ ತಲೆ ತೆಗೆಯುತ್ತೇವೆ- ವೈರಲ್ ಆದ ವೀಡಿಯೋ

ಮಂಗಳೂರು: ದ.ಕ. ಕ್ಷೇತ್ರದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಹಾಗೂ ಕೊಲೆ ಬೆದರಿಕೆವೊಡ್ಡಲಾಗಿದೆ ಎನ್ನಲಾಗಿರುವ ವೀಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇ 23ರಂದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಡಕಬೈಲ್ ಸಮಿತಿಯ ಬಿಜೆಪಿ ಕಾರ್ಯಕರ್ತರು ಬಡಕಬೈಲ್ ಜಂಕ್ಷನ್ ನಲ್ಲಿ ವೀಜಯೋತ್ಸವ ಆಚರಿಸಿದ್ದರು ಎನ್ನಲಾಗಿದೆ. ಈ ವೇಳೆ ಮಿಥುನ್ ರೈಗೆ ಅವಾಚ್ಯ ಶಬ್ಬಗಳಿಂದ ನಿಂದಿಸಿದಲ್ಲದೆ, ಕೊಲೆ ಬೆದರಿಕೆಯನ್ನು ಒಡ್ಡಲಾಗಿದೆ ಹೇಳಲಾಗುತ್ತಿದೆ. ವೈರಲ್ ಆಗುತ್ತಿರುವ ಈ ವೀಡಿಯೋ ಇಲ್ಲಿನ ಬಡಕಬೈಲ್ನಲ್ಲಿ ಚಿತ್ರೀಕರಿಸಿದ್ದೆನ್ನಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

“ಮಿಥುನ್ ರೈ ಬಜರಂಗ ದಳದ ತಂಟೆಗೆ ಬಂದರೆ ಕೈ, ಕಾಲನ್ನು ತೆಗೆಯುತ್ತೇವೆ. ಅಗತ್ಯವಿದ್ದರೆ ತಲೆಯನ್ನು ತೆಗೆಯುತ್ತೇವೆ” ಎಂಬ ಕೊಲೆ ಎಚ್ಚರಿಕೆಯ ಸಂದೇಶವೊಂದನ್ನು ಕಾರ್ಯಕರ್ತನೋರ್ವ ಕೈಯಲ್ಲಿ ಕೇಸರಿ ಬಾವುಟ ಹಿಡಿದು, ತಲೆಗೆ ಕೇಸರಿಪಟ್ಟಿ ಕಟ್ಟಿ ಬೊಬ್ಬೆಹಾಕುತ್ತಿದ್ದು, ಇದನ್ನು ಉಳಿದ ಕಾರ್ಯಕರ್ತರೂ ಕೂಡಾ ಹೇಳುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತದೆ.

ಬೆದರಿಕೆ ವೀಡಿಯೋ ವೈರಲ್ ಆದ ಬಗ್ಗೆ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.


Spread the love