ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇದೆ – ಕೆ. ಜಯಪ್ರಕಾಶ್ ಹೆಗ್ಡೆ

Spread the love

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇದೆ – ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ರಾಜಕಾರಣದಲ್ಲಿ ನಿವೃತ್ತಿ ಪಡೆಯುವ ಆಸೆ ನನಗಿಲ್ಲ. ನಿರಂತರವಾಗಿ ಜನರ ಕೆಲಸ ಮಾಡಿಸಿಕೊಡುತ್ತೇನೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇದೆ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಗುರುವಾರ ಬೆಳಗ್ಗೆ ಕುಂದಾಪುರದ ಶರೋನ್ ಹೋಟೇಲ್ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.

ಚುನಾವಣೆಯಲ್ಲಿ ಆಯ್ಕೆಯಾದವರು ಚುನಾಯಿತ ಪ್ರತಿನಿಧಿಗಳಾದರೇ, ಜನರೊಂದಿಗೆ ಇದ್ದು ಜನರ ಸಮಸ್ಯೆ ಹಾಗೂ ಭಾವನೆಗಳಿಗೆ ಸ್ಪಂದಿಸುವವರು ನಿಜವಾದ ಜನಪ್ರತಿನಿಧಿಗಳಾಗುತ್ತಾರೆ. ಅಧಿಕಾರ ಇದ್ದಾಗ ಯಾವ ರೀತಿ ಕೆಲಸ ಮಾಡಿದ್ದೆನೋ, ಈಗಲೂ ಹಾಗೆ ಕೆಲಸ ಮಾಡುತ್ತಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸಲು ಅಧಿಕಾರ ಬೇಕಂತಿಲ್ಲ. ನಾನು ಮಾಡಿದ ಕೆಲಸ, ಜನಾಭಿಪ್ರಾಯ ಅದು ಮತಗಳಾಗಿ ಪರಿವರ್ತನೆ ಆಗುತ್ತಿಲ್ಲ. ಈಗಲೂ ಕೆಲವರು ಜನರು ತಿರಸ್ಕರಿಸಿದ ಮೇಲೆ ನೀವ್ಯಾಕೆ ಅವರ ಕೆಲಸ ಮಾಡುತ್ತೀರಿ ಎಂದು ಕೇಳಿದ್ದುಂಟು. ನನ್ನಿಂದ ಆದ ಕೆಲಸಕ್ಕೆ ತೃಪ್ತಿ ಇದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ. ಜನರು ತಿರಸ್ಕರಿಸಿದ್ದಾರೆಂದು ಮನೇಲೆ ಕೂತರೆ ಬೇಗ ಮುದುಕನಾಗಿ ಬಿಡುತ್ತೇನೆ. ರಾಜಕಾರಣದಲ್ಲಿ ನಿವೃತ್ತಿ ಪಡೆಯುವ ಆಸೆ ನನಗಿಲ್ಲ. ನಿರಂತರವಾಗಿ ಜನರ ಕೆಲಸ ಮಾಡಿಸಿಕೊಡುತ್ತೇನೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇದೆ ಎಂದರು.

ಪಕ್ಷೇತರ ಶಾಸಕನಾಗಿದ್ದ ವೇಳೆಯಲ್ಲಿ ವೀರೋಧಪಕ್ಷದ ಸ್ಥಾನದಲ್ಲಿ ನನ್ನನ್ನು ಮೊದಲ ಬೆಂಚಿನಲ್ಲಿ ಕೂರಿಸಿ ಎಲ್ಲಾ ವಿಷಯದಲ್ಲೂ ಮಾತನಾಡಲು ಅವಕಾಶ ನೀಡಿದ್ದರು. ಜಯಪ್ರಕಾಶ್ ಹೆಗ್ಡೆ ಹೆಸರು ಇಡೀ ರಾಜ್ಯಕ್ಕೆ ಪರಿಚಯವಾಗಿದ್ದು ಆ ದಿನಗಳಲ್ಲಿ. 2 ಬಾರಿ ಪಕ್ಷೇತರ ಶಾಸಕನಾಗಿ ಸೇವೆ ಸಲ್ಲಿಸಿದ್ದ ದಿನಗಳೇ ರಾಜಕೀಯದಲ್ಲಿ ನನಗೆ ತುಂಬಾ ಖುಷಿ ಕೊಟ್ಟ ದಿನಗಳಾಗಿದ್ದವು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಲೋಕಸಭಾ ಸದಸ್ಯನಾಗಿದ್ದಾಗ ದೇಶದ ಯಾವುದೇ ಪ್ರದೇಶದಲ್ಲಿ ಇದ್ದು ಮತದಾನ ಮಾಡುವ ಕುರಿತು, ಶಿಕ್ಷಕರ ಕ್ಷೇತ್ರದಲ್ಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಕರಿಗೆ ಮತದಾನ ಹಕ್ಕು ನೀಡುವ ಕುರಿತು ಮಂಡಿಸಿದ ಖಾಸಗಿ ಮಸೂದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾದ ಸಂವಿಧಾನ 371(ಜೆ) ಹಾಗೂ ರಸ್ತೆ ಬದಿಯ ಗೂಡಂಗಡಿಯವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಮಾತನಾಡಲು ಅವಕಾಶ ದೊರಕಿರುವ ಕುರಿತು ತೃಪ್ತಿ ಇದೆ ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗುವ ಕೆಲಸಗಳಿಗಾಗಿ ಸಂಬಂಧಿಸಿದ ಕೇಂದ್ರ ಭಾಗಕ್ಕೆ ಹೋಗಿ ಮನವರಿಕೆ ಮಾಡುವ ವೇಳೆಯಲ್ಲಿ ಒಳ್ಳೆಯ ಮನಸ್ಸಿನ ಅಧಿಕಾರಿಗಳು ಇದ್ದಲ್ಲಿ ಬೇಡಿಕೆಗಳಿಗೆ ಶೀಘ್ರ ಸ್ಪಂದನ ದೊರಕುತ್ತದೆ. ಈ ಭಾಗದ ಪ್ರಮುಖ ಸಮಸ್ಯೆಗಳಾದ ಮರಳು ಹಾಗೂ ಡೀಮ್ಡ್ಫಾರೆಸ್ಟ್ ಸಮಸ್ಯೆಯ ಕುರಿತು ಶಾಶ್ವತವಾದ ಪರಿಹಾರ ಕಾಣಬೇಕಾದ ಅನಿವಾರ್ಯತೆ ಇದೆ. ಒಂದು ಸರ್ವೇ ನಂಬರ್ನ ಕೆಲ ಭಾಗಗಳು ಡೀಮ್ಡ್ಫಾರೆಸ್ಟ್ನಲ್ಲಿ ಬಂದರೇ, ಆ ಸರ್ವೇ ನಂಬರ್ನಲ್ಲಿ ಎಲ್ಲ ಜಾಗವೂ ಡೀಮ್ಡ್ಫಾರೆಸ್ಟ್ ವ್ಯಾಪ್ತಿಗೆ ಒಳಪಡುವ ಅವೈಜ್ಞಾನಿಕ ಕ್ರಮಗಳಿವೆ. ಮೂಕಾಂಬಿಕಾ ಅಭಯಾರಣ್ಯವನ್ನು ಈಗಾಗಲೇ ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸಲಾಗಿದೆ. ಕುದುರೆಮುಖ ಹಾಗೂ ಸೋಮೇಶ್ವರ ಅರಣ್ಯ ಪ್ರದೇಶಗಳಿಗೂ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ಆಕ್ಷೇಪಗಳಿಗೆ ಅವಕಾಶ ನೀಡಲಾಗಿದೆ ಎಂದರು.

ಜಿಲ್ಲೆಯ ಪ್ರಮುಖ ಯೋಜನೆಗಳಾದ ವರಾಹಿ, ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಹಾಗೂ ಒಳಚರಂಡಿ ಯೋಜನೆಯ ಸಮಸ್ಯೆ ಬಗೆಹರಿಸಲು ಸಮಗ್ರ ಚರ್ಚೆಯ ಅವಶ್ಯಕತೆ ಇದೆ. ಚತುಷ್ಟಥ ಕಾಮಗಾರಿಯ ಟೆಂಡರ್ ಅನ್ನು ರದ್ದುಪಡಿಸಿ ಹೊಸ ಟೆಂಡರ್ ಪ್ರಕ್ರಿಯೆಗೆ ಹೋದರೆ ಅನಗತ್ಯ ಕಾನೂನು ಸಮಸ್ಯೆಗಳು ಉದ್ಭವಿಸಲಿದೆ. ಸಾಂಪ್ರದಾಯಿಕ ಮರಳುಗಾರಿಕೆಯ ವೇಳೆಯಲ್ಲಿ ಗಲಾಟೆಯುಂಟಾಗಿ ಸರ್ಕಾರದ ಮಧ್ಯಪ್ರವೇಶಕ್ಕೆ ಅವಕಾಶ ಆಗಿರುವುದೇ ಮರಳು ಸಮಸ್ಯೆಗೆ ಮೂಲ ಕಾರಣ. ಬೈಂದೂರಿನ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಮಾಡುವುದರಿಂದ ಉಡುಪಿ ಹಾಗೂ ಉತ್ತರ ಕನ್ನಡದ ಜಿಲ್ಲೆಗೆ ಉಪಯೋಗವಾಗಲಿದೆ. ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಬೇಕು. ರಾಷ್ಟ್ರೀಯ ಹೆದ್ದಾರಿಯ ಒತ್ತಡ ಕಡಿಮೆ ಮಾಡಲು ಕರಾವಳಿ ಭಾಗದಲ್ಲಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದ ಅವರು ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಸ್ಪಂದನ ನೀಡಲು ಜಿಲ್ಲೆಯವರಿಗೆ ಉಸ್ತುವಾರಿ ಸಚಿವರಾಗಿ ಅವಕಾಶ ನೀಡುವುದು ಒಳಿತು ಎಂದು ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಂದಾಪುರಕ್ಕೆ ಫ್ಲೈಓವರ್ ಅಗತ್ಯವಿದೆಯಾ ಎನ್ನುವ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಉತ್ತರಿಸಿದ ಜೆ.ಪಿ ಹೆಗ್ಡೆ, ಇಡೀ ಉಡುಪಿ ಜಿಲ್ಲೆಯಲ್ಲಿರುವುದು ಒಂದೇ ಫ್ಲೈಓವರ್. ಶಾಸ್ತ್ರೀ ವೃತ್ತದಲ್ಲಿರುವ ಫ್ಲೈಓವರ್ ಅನ್ನು ಬಸ್ರೂರು ಮೂರುಕೈ ತನಕವೂ ವಿಸ್ತರಿಸಲು ಶ್ರಮ ವಹಿಸಿದ್ದೆ. ಆದರೆ ಆ ದಿನಗಳಲ್ಲಿ ಅದು ಸಾಧ್ಯವಾಗಿಲ್ಲ. ಶಾಸ್ತ್ರಿ ಸರ್ಕಲ್ನಲ್ಲಿ ನಿಗದಿತ ಅವಧಿಯ ಒಳಗೆ ಫ್ಲೈ ಓವರ್ ಕಾಮಗಾರಿ ಪೂರ್ತಿಗೊಂಡಿದ್ದರೆ ಯಾರೂ ಈ ಕುರಿತು ಮಾತನಾಡುತ್ತಿರಲಿಲ್ಲ. ಇದೀಗ ಫ್ಲೈ ಓವರ್ ಬೇಕಿತ್ತೇ ಎನ್ನುವ ಜಿಜ್ಞಾಸೆಗಳನ್ನು ಅನಗತ್ಯವಾಗಿ ಹುಟ್ಟಿ ಹಾಕಲಾಗುತ್ತಿದೆ. ಕುಂದಾಪುರ ನಗರದ ಮುಂದಿನ 50 ವರ್ಷಗಳ ಬೆಳವಣಿಗೆ ಹಾಗೂ ಹೆಚ್ಚಾಗುವ ವಾಹನ ಸಾಂದ್ರತೆಗೆ ಅನುಗುಣವಾಗಿ ಪ್ಲೈ ಓವರ್ ಅಗತ್ಯ ಇಲ್ಲಿಗೆ ಇದೆ. ನಾನು ಸಂಸದನಾಗಿದ್ದ ವೇಳೆ ಪಡುಬಿದ್ರೆಯಿಂದ ಕುಂದಾಪುರದವರೆಗಿನ ಚತುಷ್ಫಥ ಕಾಮಗಾರಿಗೆ ಸಂಬಂಧಿಸಿದ ಹೆಚ್ಚುವರಿ ಪ್ರಾಸ್ತಾಪಗಳನ್ನು ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಶ್ರಮ ವಹಿಸಿರುವುದು ನಿಜ. ಸ್ಥಳೀಯ ಜನರ ಅಪೇಕ್ಷೆಗೆ ಅನುಗುಣವಾಗಿ ಸ್ಪಂದಿಸಿದ್ದೇನೆ ಎನ್ನುವ ತೃಪ್ತಿ ಇದೆ. ಬದಲಾಗಿರುವ ಕಾಲಘಟ್ಟದಲ್ಲಿ ಪ್ರಾಸ್ತಾವಿತ ಯೋಜನೆಗಳನ್ನು ಪೂರ್ತಿಗೊಳಿಸುವ ಹೊಣೆಗಾರಿಗೆ ಎಲ್ಲರಿಗೂ ಇದೆ ಎಂದು ಜೆ.ಪಿ ಹೆಗ್ಡೆ ಹೇಳಿದರು.

ಕೇಂದ್ರದ ಅನುದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅಂದಾಜು 40 ಕೋಟಿ ರೂ. ವೆಚ್ಚದಲ್ಲಿ 5 ಜಿಲ್ಲೆಗಳಿಗೆ ಒಂದರಂತೆ ಪ್ರಾರಂಭವಾಗಲಿರುವ ವಸತಿ ಶಾಲೆಯೊಂದನ್ನು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಸುವ ಕುರಿತು ಮನವಿ ಮಾಡಲಾಗಿದ್ದು, ಉತ್ತಮ ಸ್ಪಂದನೆ ದೊರೆಕಿದೆ. ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಇದರಿಂದ ಅನೂಕೂಲವಾಗಲಿದೆ. ಸಿಇಟಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿಯೇ ತರಬೇತಿ ನೀಡುವ ಅವಕಾಶಗಳು ಎಂದು ಅವರು ತಿಳಿಸಿದರು.

ಮರಳು ಖರೀದಿಗೆ ಬರುವ ಎಲ್ಲರೂ ಸರದಿ ಸಾಲಿನಲ್ಲಿಯೇ ಬರುವ ಒಂದೆ ಮಾನದಂಡವಿರಬೇಕು. ವೇಬ್ರಿಡ್ಜ್ ನಿರ್ಮಾಣ ಮಾಡುವುದರಿಂದ ತೂಕ ಹಾಗೂ ವಾಹನದ ಸಂಖ್ಯೆಯ ಕರಾರುವಕ್ಕಾದ ಲೆಕ್ಕ ದೊರಕುವ ನಿರೀಕ್ಷೆ ಇದೆ.

ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹಾಗೂ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ಇದ್ದರು.


Spread the love