“ಮೆಡಿ ಕ್ವಿಜ್ : ಸುಧಾಂಶು ಕಶ್ಯಾಪ್ ಮತ್ತು ಕು| ಅವೀನಾ ಕಲಾಲ್ ಜೋಡಿ ತಂಡಕ್ಕೆ ಪ್ರಶಸ್ತಿ

Spread the love

“ಮೆಡಿ ಕ್ವಿಜ್ : ಸುಧಾಂಶು ಕಶ್ಯಾಪ್ ಮತ್ತು ಕು| ಅವೀನಾ ಕಲಾಲ್ ಜೋಡಿ ತಂಡಕ್ಕೆ ಪ್ರಶಸ್ತಿ

ಮಂಗಳೂರು:ಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಶಾಸ್ತ್ರದ ಬಗ್ಗೆ 7ನೇ ವಾರ್ಷಿಕ“ಮೆಡಿ ಕ್ವಿಜ್” ರಸ ಪ್ರಶ್ನಾ ಸ್ಪರ್ಧಾಕೂಟವು ಕಾಲೇಜಿನ ಸಭಾಂಗಣದಲಿ ಜರಗಿತು.

ಕಾಲೇಜಿನ ಪ್ರಾಂಶುಪಾಲ ಡಾ| ಅಶೋಕ್ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ನಿಯತಕಾಲಿಕವಾಗಿ ಸ್ಪರ್ಧಾಕೂಟದಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿದರೆ ವೈದ್ಯಕೀಯ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು. ಸ್ಪರ್ಧಾಕೂಟದ ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದ 8 ತಂಡಗಳನ್ನು ಅಭಿನಂದಿಸಿ, ಸ್ಪರ್ಧಾಕೂಟದ ಪ್ರಥಮ ಸ್ಥಾನ ವಿಜೇತರಾದ ಸುಧಾಂಶು ಕಶ್ಯಾಪ್ ಮತ್ತು ಕು| ಅವೀನಾ ಕಲಾಲ್ ಜೋಡಿ ತಂಡದವರಿಗೆ ಮತ್ತು ದ್ವಿತೀಯ ಸ್ಥಾನ ಪಡೆದ ಕು| ಪ್ರಥ್ವಿ ಶೆಟ್ಟಿ ಮತ್ತು ಕು| ಪೂರ್ಣ ಪ್ರಸಾದ್ ತಂಡಕ್ಕೆ ಪ್ರಶಸ್ತಿ, ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಪ್ರಧಾನ ಮಾಡಿ ವಿಜೇತರ ಗಮನಾರ್ಹ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ಮಾಜಿ ಪ್ರಾಂಶುಪಾಲ ಡಾ| ರಮೇಶ್ ಪೈ, ಹಿರಿಯ ಪ್ರಾಧ್ಯಾಪ ಕಡಾ| ಪ್ರಭಾಕರ್ ರಾವ್ ಮತ್ತು ವೈದ್ಯಕೀಯ ಶಾಸ್ತ್ರದ ವಿಭಾಗೀಯ ಮುಖ್ಯಸ್ಥ ಡಾ.ಇ.ವಿ.ಎಸ್. ಮೆಬನ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಡಾ.ದೇವದಾಸ್‍ರೈ ಅವರು ಸ್ಪರ್ಧಾಕೂಟವನ್ನು ನಿರೂಪಿಸಿ 29.09.2018ರಂದು ಅಂತರ್ ವೈದ್ಯಕೀಯ ಕಾಲೇಜಿನ ರಸಪ್ರಶ್ನಾ ಸ್ಪರ್ಧಾಕೂಟವನ್ನು ಆಯೋಜಿಸಲಾಗುವುದು ಈ ಸ್ಪರ್ಧಾಕೂಟದ ವಿಜೇತರು ಅದರಲ್ಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸ್ಪರ್ಧಾಕೂಟದಲ್ಲಿ ಕಾಲೇಜಿನ 18ಜೋಡಿ ತಂಡಗಳು ಪ್ರಾಥಮಿಕ ಹಂತದಲ್ಲಿ ಭಾಗವಹಿಸಿದ್ದವು. 8ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು. ಡಾ| ಅಂಡ್ರೋಅಲೆಕ್ಸ್ ವರ್ಗೀಸ್ ಮತ್ತು ಡಾ| ವಲ್ಲೀಶ್ ಶೆಣೈ ಅಂಕಗಾರಗಿ ಸ್ಪರ್ಧಾಕೂಟಕ್ಕೆ ಸಹಕರಿಸಿದ್ದರು. ಡಾ| ಕು| ನೆಹಾಲ್ ಸ್ವಾಗತಿಸಿದರು. ಡಾ| ಕು| ನೈದಿಲಾ ಜೈನ್ ವಂದಿಸಿದರು.


Spread the love