ರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಮರಣ

Spread the love

ರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಮರಣ

ಬೆಂಗಳೂರು, ಮೇ 28: ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ (70)ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬಾಗಲಕೋಟೆಯ ತುಳಸಿಗೇರಿಯಲ್ಲಿ ನಡೆದ ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರು ಮೃತಪಟ್ಟಿದ್ದಾರೆ.

ಗೋವಾದಿಂದ ಊರಿಗೆ ಮರಳುತ್ತಿದ್ದಾಗ ನಡೆದ ಕಾರು ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರ ಎದೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರು, ಕಾಂಗ್ರೆಸ್ ಉನ್ನತ ನಾಯಕರೊಂದಿಗೆ ನಂಟು ಹೊಂದಿದ್ದರು.

ಅಪಘಾತದಲ್ಲಿ ಕಾರಿನ ಮುಂಭಾಗದ ಜಖಂಗೊಂಡಿದೆ. ಟೈರ್ ಸ್ಫೋಟಗೊಂಡು ಕಾರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರ್‌ನಲ್ಲಿದ್ದ ಉಳಿದವರು ಪಾರಾಗಿದ್ದಾರೆ.1991-96ರ ಅವಧಿಯಲ್ಲಿ ಬಾಗಲಕೋಟೆ ಕ್ಷೇತ್ರದ ಸಂಸದರಾಗಿದ್ದ ಸಿದ್ದು ನ್ಯಾಮಗೌಡ ಅವರು, ಕೇಂದ್ರದಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು.

1991ರಲ್ಲಿ ಅವರು ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು. ಒಂದು ಬಾರಿ ಸಂಸದರಾಗಿದ್ದ ಅವರು, ಎರಡು ಬಾರಿ ಶಾಸಕರಾಗಿದ್ದರು. ವಿಧಾನ ಪರಿಷತ್‌ಗೆ ಕೂಡ ಆಯ್ಕೆಯಾಗಿದ್ದರು.

ಸಿದ್ದು ನ್ಯಾಮಗೌಡ ಅವರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ.


Spread the love