ರಾಜ್ಯಕ್ಕೆ ಪ್ರತ್ಯೇಕ ಧ್ವಜ, ಸಿದ್ಧರಾಮಯ್ಯನವರಿಂದ ತುಘಲಕ್ ದರ್ಬಾರ್ : ಮಟ್ಟಾರ್ ರತ್ನಾಕರ ಹೆಗ್ಡೆ

Spread the love

ರಾಜ್ಯಕ್ಕೆ ಪ್ರತ್ಯೇಕ ಧ್ವಜ, ಸಿದ್ಧರಾಮಯ್ಯನವರಿಂದ ತುಘಲಕ್ ದರ್ಬಾರ್ : ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ: ತನ್ನ ದುರಾಂಹಂಕಾರ ಸ್ವೇಚ್ಚಾಚಾರದ ಮೂಲಕ ಜನತೆಯ ಗಮನ ಸೆಳೆದಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾನು ಮಾಡಿದ್ದೇ ಆಗುತ್ತದೆ ಎಂಬಂತೆ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಒಕ್ಕೂಟದ ವ್ಯವಸ್ಥೆಗೆ ಭಂಗ ಬರುವಂತೆ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ರೂಪಿಸಿಕೊಳ್ಳುವ ಬಗ್ಗೆ ಸಮಿತಿಯನ್ನು ರಚಿಸಿರುವುದು ರಾಜ್ಯ ಸರಕಾರದ ಅತ್ಯಂತ ಗಂಭೀರ ಲೋಪವಾಗಿದೆ. ಮತ್ತು ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯನ್ನೇ ತರಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಮಟ್ಟಾರ್ ರತ್ನಾಕರ ಹೆಗ್ಡೆಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂವಿಧಾನದಲ್ಲಿ ಪ್ರತ್ಯೇಕ ಧ್ವಜಕ್ಕೆ ಅವಕಾಶ ಇಲ್ಲ. ರಾಷ್ಟ್ರಧ್ವಜದ ಹಿಂದೆ ಸಂವಿಧಾನ ಒಕ್ಕೂಟ ವ್ಯವಸ್ಥೆಯ ಬದ್ಧತೆ ಇದ್ದು ಪ್ರತ್ಯೇಕ ಧ್ವಜದಿಂದ ಅದಕ್ಕೆ ಧಕ್ಕೆ ಬರಲಿದೆ ಮಾತ್ರವಲ್ಲ ಭಾರತೀಯತೆ ನಾಶವಾಗಬಹುದು. ಒಂದು ದೇಶ ಒಂದು ಧ್ವಜ ಒಂದು ಸಂವಿಧಾನ ಎಂಬುವುದಕ್ಕಾಗಿ ಜನ ಸಂಘದ ಕಾಲದಿಂದಲೂ ಡಾ. ಶ್ಯಾಮ್‍ಪ್ರಸಾದ್ ಮುಖರ್ಜಿಯಂತವರು ಹೋರಾಟ ನಡೆಸಿ ಬಲಿದಾನವಾಗಿರುವುದು ಇತಿಹಾಸ. ಆ ಕಾರಣದಿಂದ ಇವತ್ತು ಜಮ್ಮು-ಕಾಶ್ಮೀರ ರಾಜ್ಯ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಉಳಿದುಕೊಂಡಿದೆ. ಪ್ರತ್ಯೇಕ ಧ್ವಜದ ವಿಚಾರವು ಅತ್ಯಂತ ಗಂಭೀರವಾಗಿದ್ದು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಅಭಿವೃದ್ಧಿ ಸಾಧಿಸಿ ದೇಶದಲ್ಲಿ ಪ್ರಥಮ ರಾಜ್ಯ ಎಂಬ ಹೆಸರನ್ನು ಗಳಿಸಬೇಕೆ ವಿನಹ ಈ ತರದ ಹುಚ್ಚಾಟದ ನಿರ್ಧಾರಗಳು ದೇಶಕ್ಕೆ ಕೆಡುಕನ್ನು ತರುತ್ತದೆ ಎಂದಿರುವ ಮಟ್ಟಾರ್ ರಾಜ್ಯ ಸರಕಾರ ಪ್ರತ್ಯೇಕ ಧ್ವಜಕ್ಕೆ ಸಂಬಂಧಿಸಿದ ತನ್ನ ನಿಲುವನ್ನು ಬದಲಾಯಿಸಬೇಕು ಮತ್ತು ಈ ತರಹದ ಯಾವುದೇ ಕ್ರಮಕ್ಕೆ ಮುಂದಾಗಬಾರದು. ಒಕ್ಕೂಟ ವ್ಯವಸ್ಥೆಯಲ್ಲಿದ್ದುಕೊಂಡು ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.


Spread the love