ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ 

Spread the love

ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿ ಹಾಗೂ ನದಿ ಕಿನಾರೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರವಾಸೋದ್ಯಮ ತಾಣವಾಗಿ ಆಕರ್ಷಿಸಲು ರಿವರ್ ಫೆಸ್ಟಿವಲ್ ನಡೆಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನದಿ ಉತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನವರಿ 12 ಮತ್ತು 13ರಂದು ಉತ್ಸವ ಮೂರು ಕಿನಾರೆಗಳಲ್ಲಿ ನಡೆಯಲಿದೆ.  ನದಿ ತೀರಗಳನ್ನು, ದ್ವೀಪಗಳನ್ನು ಹೊಂದಿರುವ ತಾಲೂಕು ಮಟ್ಟದಲ್ಲೂ ಉತ್ಸವಗಳನ್ನು ಮಾಡಲು ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾದರಿಯಾಗಿರಲಿ ಎಂದು ಸಚಿವರು ಸಲಹೆ ನೀಡಿದರು.

ಬಂಗ್ರಕೂಳೂರಿನಲ್ಲಿರುವ 20 ಎಕರೆ ಸರಕಾರಿ ಭೂಮಿಯನ್ನು ನದಿ ಉತ್ಸವಕ್ಕಾಗಿ ಗುರುತಿಸಲಾಗಿದೆ. ಅಲ್ಲಿಗೆ ಸುಲ್ತಾನ್ ಬತ್ತೇರಿ, ತಣ್ಣೀರು ಬಾವಿ ಮತ್ತು ಕೂಳೂರಿನಿಂದ ಜೆಟ್ಟಿ ಮತ್ತು ದೋಣಿಗಳ ಮೂಲಕ ಸಂಪರ್ಕ ಕಲ್ಪಿಸಲಾಗುವುದು. ಜೆಟ್ಟಿಗಳಿಗಾಗಿ ಪ್ರವಾಸೋದ್ಯಮ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್ ತಿಳಿಸಿದರು.

ಉತ್ಸವದ ಸ್ಥಳಕ್ಕೆ ಒಂದು ಕಡೆಯಿಂದ ರಸ್ತೆ ಸಂಪರ್ಕ ಇದೆಯಾದರೂ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗುವುದು. ಒಂದು ಬಸ್ಸನ್ನು ಜಿಲ್ಲಾಡಳಿತದ ವತಿಯಿಂದ ಓಡಾಟಕ್ಕೆ  ನಿಯೋಜಿಸಲಾಗುವುದು. ಜತೆಗೆ ಪಿಲಿಕುಳದ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಿಕೊಳ್ಳಲಾಗುವುದು. ವಾಕಿಂಗ್ ಇಲ್ಲವೇ ಸೈಕಲ್ ಮೂಲಕವೂ ಸಾರ್ವಜನಿಕರು ಉತ್ಸವದ ಸ್ಥಳಕ್ಕೆ ತಲುಪಬಹುದು ಎಂದು ಜಿಲ್ಲಾಧಿಕಾರಿ ನುಡಿದರು.

ಉತ್ಸವದಲ್ಲಿ ಜಲ ಸಾಹಸ ಕ್ರೀಡೆಗಳು, ವಿವಿಧ ಮಳಿಗೆಗಳಿರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜತೆಗೆ ನದಿಗಳ ಕುರಿತಾಗಿ ಚಿತ್ರೋತ್ಸವ ಇರುತ್ತದೆ. ಸರಕಾರ ರೂ.೨೫ ಲಕ್ಷವನ್ನು ‘ನದಿ ಉತ್ಸವ’ಕ್ಕೆ ಒದಗಿಸಿದೆ. ಒಂದಷ್ಟು ಪ್ರಾಯೋಜಕರ ಬೆಂಬಲವನ್ನು ಕೂಡಾ ಪಡೆಯಲಾಗುತ್ತಿದೆ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದರು.

ಜಿಲ್ಲಾ ಪರಿಷತ್ ಸಿಇಒ ಡಾ|ಆರ್.ಸೆಲ್ವಮಣಿ, ಅಪರ  ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ ಮೊಹಮ್ಮದ್ ನಝೀರ್, ಪೊಲೀಸ್ ಉಪ ಆಯುಕ್ತೆ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.


Spread the love