ಲೋಕಸಭಾ ಚುನಾವಣೆಗೆ ಪಂಚ ನ್ಯಾಯ ಮತ್ತು 25 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್

Spread the love

ಲೋಕಸಭಾ ಚುನಾವಣೆಗೆ ಪಂಚ ನ್ಯಾಯ ಮತ್ತು 25 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್

ನವದೆಹಲಿ: ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಲೋಕಸಭೆ ಚುನಾವಣೆಯ ರಣಕಹಳೆ ಮೊಳಗುತ್ತಿದ್ದಂತೆಯೇ ಎಲ್ಲ ಪಕ್ಷಗಳು ಜನತೆಗೆ ಭರವಸೆಗಳ ಸರಮಾಲೆಯನ್ನೇ ನೀಡಲಾರಂಭಿಸಿವೆ. ಕಾಂಗ್ರೆಸ್ ಕೂಡ ಚುನಾವಣಾ ರ್ಯಾಲಿಗಳಲ್ಲಿ ಜನರಿಗೆ ಹಲವು ಭರವಸೆಗಳನ್ನು ನೀಡಿದೆ. ಈ ನಡುವೆ ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳೇನು? ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ಪಕ್ಷವು ಪಂಚ ನ್ಯಾಯ ಮತ್ತು 25 ಭರವಸೆಗಳನ್ನು ಭರವಸೆ ನೀಡಿದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ಶ್ರಮಿಕ್ ನ್ಯಾಯ’ಮತ್ತು ‘ಹಿಸ್ಸೆದಾರಿ ನ್ಯಾಯ’ಹಾಗೂ ಖಾತರಿಗಳು ಸೇರಿದಂತೆ ಪಂಚ ನ್ಯಾಯ ಅಥವಾ ನ್ಯಾಯದ ಐದು ಸ್ತಂಭಗಳಿಗೆ ಒತ್ತು ನೀಡಿದೆ.

ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸುವುದಾಗಿ ಭರವಸೆ ನೀಡಿದೆ. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷ ಲಕ್ಷ ರೂ.ಗಳ ನೆರವು ನೀಡುವುದಾಗಿ ತಿಳಿಸಿದ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು.

ಯುವ ನ್ಯಾಯ ಅಡಿಯಲ್ಲಿ ಪಕ್ಷವು ಮಾತನಾಡಿರುವ ಐದು ಖಾತರಿಗಳಲ್ಲಿ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಭರವಸೆ ಮತ್ತು ಒಂದು ವರ್ಷದವರೆಗೆ ಅಪ್ರೆಂಟಿಸ್ಶಿಪ್ ಕಾರ್ಯಕ್ರಮದಡಿಯಲ್ಲಿ ಯುವಕರಿಗೆ 1 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ.

ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಎಂಎಸ್ಪಿ ಘೋಷಿಸುವ ಕಾನೂನು ಖಾತರಿ ನೀಡುವುದಾಗಿ ಘೋಷಿಸಿದೆ.

ಕಾರ್ಮಿಕ ನ್ಯಾಯ ಅಡಿಯಲ್ಲಿ, ಕಾರ್ಮಿಕರಿಗೆ ಆರೋಗ್ಯದ ಹಕ್ಕನ್ನು ಒದಗಿಸುವುದು, ದಿನಕ್ಕೆ ಕನಿಷ್ಠ 400 ರೂ. ವೇತನ ಮತ್ತು ನಗರ ಉದ್ಯೋಗ ಖಾತರಿಯನ್ನು ಖಚಿತಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಪ್ರಣಾಳಿಕೆಯಲ್ಲಿ 25 ಬಗೆಯ ಭರವಸೆಗಳನ್ನು ನೀಡಲಾಗಿದೆ. ನಮ್ಮ ಪ್ರಣಾಳಿಕೆ ಬಡವರಿಗೆ ಮೀಸಲಾಗಿದೆ ಎಂದು ಖರ್ಗೆ ಹೇಳಿದರು.


Spread the love