ಲೋಕಸಭೆ ಭದ್ರತಾ ಲೋಪ : ಸಂಸದ ಪ್ರತಾಪ್ ಸಿಂಹರನ್ನು ವಜಾಗೊಳಿಸಿ – ವೆರೋನಿಕಾ ಕರ್ನೆಲಿಯೊ

Spread the love

ಲೋಕಸಭೆ ಭದ್ರತಾ ಲೋಪ : ಸಂಸದ ಪ್ರತಾಪ್ ಸಿಂಹರನ್ನು ವಜಾಗೊಳಿಸಿ – ವೆರೋನಿಕಾ ಕರ್ನೆಲಿಯೊ

ಉಡುಪಿ: ಲೋಕಸಭೆ ಭದ್ರತಾ ಲೋಪ ವಿಚಾರದಲ್ಲಿ ಆರೋಪಿಗಳು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿದ್ದರು ಎನ್ನುವ ವಿಚಾರ ಬಹಿರಂಗವಾಗಿದ್ದು ಇದರಲ್ಲಿ ಪರೋಕ್ಷವಾಗಿ ಪ್ರತಾಪ್ ಸಿಂಹ ಅವರು ಭಾಗಿಯಾಗಿದ್ದು ಅವರನ್ನು ತನಿಖೆ ಮುಗಿಯುವವರೆಗೂ ಸಂಸತ್ ಸ್ಥಾನದಿಂದ ವಜಾ ಮಾಡುವಂತೆ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಆಗ್ರಹಿಸಿದ್ದಾರೆ.

ಒಂದು ವೇಳೆ ಕಾಂಗ್ರೆಸ್ ಸಂಸದರು ಪಾಸ್ಗಳನ್ನು ನೀಡಿದ್ದರೆ ಬಿಜೆಪಿಯವರು ನಮಗೆ ದೇಶವಿರೋಧಿ ಟ್ಯಾಗ್ ನೀಡಿ ರಾತ್ರೋರಾತ್ರಿ ನಮ್ಮನ್ನು ಗಲ್ಲಿಗೇರಿಸುತ್ತಿದ್ದರು. ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರು ಈ ವರೆಗೆ ಒಂದು ಹೇಳಿಕೆ ಕೂಡ ನೀಡದೆ ಬೆಜವಾಬ್ದಾರಿ ಮೆರೆದಿದ್ದಾರೆ. ತಮ್ಮ ಪಕ್ಷದ ಸಂಸದ ಎಂಬ ಕಾರಣಕ್ಕೆ ಬಿಜೆಪಿ ಕೂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಸಂಸತ್ ದಾಳಿಯ ಹಿಂದೆ ಪ್ರತಾಪ್ ಸಿಂಹ ಅವರ ಪ್ರಮುಖ ಪಾತ್ರವಿದೆ ಹಾಗಾಗಿ ತನಿಖೆ ಮುಗಿಯುವವರೆಗೂ ಪ್ರತಾಪ್ ಸಿಂಹ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾ ಮಾಡುವ ಕೆಲಸವನ್ನು ಲೋಕಸಭಾ ಸ್ಪೀಕರ್ ಮಾಡಬೇಕು

‘300 ಕೆಜಿ RDX ಯಾವುದೇ ಅಡೆತಡೆ ಇಲ್ಲದೆ ಕಾಶ್ಮೀರದೊಳಗೆ ಬರುತ್ತದೆ. ಸ್ಪೋಟಕ ವಸ್ತು ಯಾವುದೇ ಅಡೆತಡೆ ಇಲ್ಲದೆ ಸಂಸತ್ತಿನೊಳಗೆ ಬರುತ್ತದೆ. ಸಂಸತ್ತನ್ನೇ ಕಾಯಲಾಗದ ಚೌಕಿದಾರ್ ನಿಗೆ ದೇಶ ಕಾಯಲು ಸಾಧ್ಯವೇ? ಈ ಮಟ್ಟಿಗೆ ಭದ್ರತಾ ಲೋಪವಾಗಿದ್ದು ಹೇಗೆ? ಯಾಕೆ? ಹಿಂದೆ 2001ರಲ್ಲಿ ಇದೇ ದಿನ ಸಂಸತ್ ಭವನದ ಮೇಲೆ ಉಗ್ರರ ದಾಳಿಯಾಗಿತ್ತು, ಆಗಲೂ ಬಿಜೆಪಿ ಆಡಳಿತವಿತ್ತು. ಈಗ ಸಂಸತ್ ಭವನದ ಒಳಗೆಯೇ ಭದ್ರತಾ ಲೋಪವಾಗಿದೆ. ಪುಲ್ವಾಮದಲ್ಲಿ ಯೋಧರನ್ನು ರಕ್ಷಿಸಲಾಗಲಿಲ್ಲ, ಸಂಸತ್ತಿನಲ್ಲಿ ಸಂಸದರನ್ನೂ ರಕ್ಷಿಸಲು ವಿಫಲವಾಗಿದೆ. ಘಟನೆಯ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಆಶ್ಚರ್ಯಕರವಾಗಿದೆ

ಸಂಸತ್ತಿನ ಮೇಲೆ ನಡೆದಿರುವ ದಾಳಿ ಭಾರತದ ಅಂತಃಸತ್ವವನ್ನೇ ಕೆಣಕುವಂತದ್ದು. ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಅತ್ಯಂತ ಮುಜುಗರ ಎದುರಿಸುವ ಸನ್ನಿವೇಶವಿದು. ಸಂಸತ್ ಭಾರತದ ಆತ್ಮವಿದ್ದಂತೆ. ಆದರೆ ಈ ಘಟನೆಯಿಂದ ಸಂಸತ್ತಿನ ಒಳಗೆ ಯಾರು ಬೇಕಾದರೂ ಪ್ರವೇಶಿಸಬಹುದು ಎಂಬ ಭಾವನೆ ಹುಟ್ಟು ಹಾಕಿದೆ. ಸಂಸತ್ತಿಗೆ ರಕ್ಷಣೆ ಕೊಡಲಾಗದವರು, ದೇಶ ರಕ್ಷಣೆ ಮಾಡುತ್ತಾರೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಈ ಪ್ರಶ್ನೆಗಳಿಗೆ ಸ್ವಯಂಘೋಷಿತ ‘ಚೌಕಿದಾರ’ ಪ್ರಧಾನಿಯವರೇ ಉತ್ತರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love