ವಡ್ಡರ್ಸೆ ಪ್ರಶಸ್ತಿ ಪ್ರದಾನ; ಪತ್ರಕರ್ತರಲ್ಲಿ ಸಮಾಜದ ಬಗ್ಗೆ ಚಿಂತನೆ ಇರಲಿ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ

Spread the love

ವಡ್ಡರ್ಸೆ ಪ್ರಶಸ್ತಿ ಪ್ರದಾನ; ಪತ್ರಕರ್ತರಲ್ಲಿ ಸಮಾಜದ ಬಗ್ಗೆ ಚಿಂತನೆ ಇರಲಿ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ

ಬ್ರಹ್ಮಾವರ :ಸಮಾಜ, ಕೋರ್ಟ್, ಅಸೆಂಬ್ಲಿಗಳು ಮಾಧ್ಯಮದವರನ್ನು ರಕ್ಷಿಸುವಾಗ, ಜನಸಾಮಾನ್ಯರ ಹಕ್ಕನ್ನು ರಕ್ಷಿಸುವ ಹೊಣೆ ಮಾಧ್ಯಮದ್ದು. ಸಮಾಜದ ಬಗ್ಗೆ ಚಿಂತನೆ ಮಾಧ್ಯಮದವರಿಗೆ ಇರಬೇಕು ಎಂದು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಹೇಳಿದರು.

ಬ್ರಹ್ಮಾವರ ಬಂಟರ ಭವನದಲ್ಲಿ ಭಾನುವಾರ ಹಿರಿಯ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹೆಸರಿನಲ್ಲಿ ಬ್ರಹ್ಮಾವರ ಪ್ರೆಸ್ ಕ್ಲಬ್ ಕೊಡಮಾಡುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ಮೂರು ಅಂಗಗಳ ಜತೆಗೆ ಮಾಧ್ಯಮ ಕ್ಷೇತ್ರವೂ ಸಹ ಸಮಾನವಾಗಿ ಬೆಳೆದಿದೆ. ಪತ್ರಿಕೆ ಒಳ್ಳೆಯ ವಿಚಾರಗಳನ್ನು ಪ್ರಕಟಿಸಿದಲ್ಲಿ ಸಮಾಜದಲ್ಲಿ ಸ್ಥಾನಮಾನ, ಗೌರವ ಸಿಗುತ್ತಿದೆ. ಕೆಟ್ಟದ್ದನ್ನು ಬರೆದಲ್ಲಿ ಸಮಾಜದ ಜನತೆಯೇ ಶಿಕ್ಷೆ ನೀಡುವುದನ್ನು ನಾವು ನೋಡುತ್ತಾ ಇದ್ದೇವೆ. ಮಾಧ್ಯಮದವರ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಬೇಕು ಎಂದ ಅವರು ಒಳ್ಳೆಯ ಲೇಖನದೊಂದಿಗೆ ಜನಮನ ಗೆದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಕೊಡುಗೆ ಮಾಧ್ಯಮ ಕ್ಷೇತ್ರಕ್ಕೆ ಅಪಾರ ಎಂದು ಹೇಳಿದರು.

ಸಮಾರಂಭದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಅವರ ಪರವಾಗಿ ಹಾಯ್ ಬೆಂಗಳೂರು ಆಡಳಿತ ಮಂಡಳಿಯ ಆಡಳಿತಾಧಿಕಾರಿ ಉಮೇಶ್ ಹೆಗ್ಡೆ ಅವರಿಗೆ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಪತ್ರಿಕಾ ಕ್ಷೇತ್ರದಲ್ಲಿಯೂ ಜವಾಬ್ದಾರಿ ಇದೆ. ಆತ್ಮಸಾಕ್ಷಿ ಶುದ್ಧವಾಗಿದಲ್ಲಿ ಯಾವ ಕ್ಷೇತ್ರದಲ್ಲಿಯೂ ಭಯವಿಲ್ಲ ಎಂದು ಹೇಳಿದರು.

ಬ್ರಹ್ಮಾವರ ಪ್ರೆಸ್ ಕ್ಲಬ್ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿಗಳಾದ ಆನಂದ ಸಿ.ಕುಂದರ್, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಚಿತ್ತೂರು ಪ್ರಭಾಕರ ಆಚಾರ್ಯ ವಹಿಸಲಿದ್ದಾರೆ. ಪ್ರಶಸ್ತಿ ಸಮಾಜಸೇವಕ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಉಪಸ್ಥಿತರಿದ್ದರು.

ಕ್ಲಬ್‍ನ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಕಿರಣ್ ತುಂಗ ವಂದಿಸಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮ: ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಲಾದ ಪತ್ರಿಕೋದ್ಯಮ ರಾಜಕೀಯ ಕಾನೂನು ವಿಷಯಾಧಾರಿತ ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ರಾಜಕಾರಣದಲ್ಲಿರುವವರು ದಿನ ನಿತ್ಯ ಹಣ ನೀಡುತ್ತಾರೆ ಎಂದರೆ ಆ ಹಣದ ಮೂಲ ಯಾವುದು ಎನ್ನುವ ಪ್ರಶ್ನೆ ಮಾಡುವ ಮನೋಭಾವವನ್ನು ಜನತೆ ಮಾಡದಿದ್ದರೆ ಆಗ ಉತ್ತಮ ಜನಪ್ರತಿನಿಧಿಯ ಆಯ್ಕೆ ಸಾಧ್ಯವಿಲ್ಲ. ನೇರ ನಿಷ್ಠುರವಾಗಿ ಬರೆಯುವ ಪತ್ರಕರ್ತರು ಇದ್ದರು ಕೂಡ ಇಂದು ಜನಪರ ಸುದ್ದಿ ಕಳುಹಿಸಿದರು ಕೂಡ ಡೆಸ್ಕ್‍ನಲ್ಲಿ ಬದಲಾವಣೆಯಾಗಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಪತ್ರಕರ್ತರ ಜೊತೆಗೆ ಜನತೆಯು ಕೂಡ ಬದಲಾವಣೆ ಬಯಸಿದ್ದಲ್ಲಿ ಮಾತ್ರ ವ್ಯವಸ್ಥೆ ಸರಿಯಾಗಲಿದೆ

ನ್ಯಾಯವಾದಿ, ರೈತಪರ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಬ್ರಹ್ಮಾವರ ಪ್ರೆಸ್ ಕ್ಲಬ್ ಸದಸ್ಯರು ರಾಜ್ಯ ಕಂಡ ಅಪ್ರತಿಮ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರನ್ನು ನೆನಪಿಸುವ ನಿಟ್ಟಿನಲ್ಲಿ ಆಯೋಜಿಸಿರುವುದ ಶ್ಗಾಘನಾರ್ಹ. ಇಂದು ನಿಷ್ಟೂರವಾಗಿ ವರದಿಗಳನ್ನು ಮಾಡುತ್ತಿರುವುದು ನಗರದ ಏಸಿ ಕೋಣೆಯಲ್ಲಿ ಕುಳಿತುಕೊಂಡಿರುವ ವರದಿಗಾರರಲ್ಲ, ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ವರದಿಗಾರಿಕೆಯನ್ನು ಮಾಡಿಕೊಂಡಿರುವ ಗ್ರಾಮೀಣ ಪತ್ರಕರ್ತರು ಎನ್ನಬಹುದು. ರಾಜಕಾರಣಿಗಳು ಎಂದರೆ ಒಂದು ರೀತಿಯಲ್ಲಿ ನೋಡುವ ಈ ಕಾಲದಲ್ಲಿ ಕಾನೂನು ಕಾಯಿದೆಯನ್ನು ಸುವ್ಯವಸ್ಥೆಯಲ್ಲಿರಿಸಿರುವುದು ರಾಜಕಾರಣಿಗಳು ಎನ್ನುವುದನ್ನು ನಾವು ಮರೆಯಬಾರದು. ಸದ್ಯ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ರಾಜಕೀಯ ಮತ್ತು ಕಾನೂನು ಸಮತೋಲನ ಕಾಪಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಬ್ರಹ್ಮಾವರ ಪ್ರೆಸ್ ಕ್ಲಬ್ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ಚಿಂತಕ ಜ್ಞಾನ ವಸಂತ್ ಶೆಟ್ಟಿ ಪ್ರಸ್ತಾವಿಸಿದರು. ಕ್ಲಬ್‍ನ ಶೇಷಗಿರಿ ಭಟ್ ಕಾರ್ಯಕ್ರಮ ನಿರೂಪಿಸಿದರು.


Spread the love