ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

  • ಕೋಟ-ಸಾೈಬ್ರಕಟ್ಟೆ ಜಿಲ್ಲಾ ಮುಖ್ಯ ರಸ್ತೆಗೆ ವಡ್ಡರ್ಸೆ ರಘುರಾಮ್ ಶೆಟ್ಟರ ಹೆಸರಿಡಲು ಬೇಡಿಕೆ

ಕೋಟ: ವಡ್ಡರ್ಸೆ ರಘುರಾಮ ಶೆಟ್ಟಿಯವರು ಈ ನಾಡು ಕಂಡ ಹೆಮ್ಮೆಯ ಸಮಾಜವಾದಿ ನಿಲುವಿನ ಪತ್ರಕರ್ತರಾಗಿದ್ದು ಅವನರನ್ನು ಇಡೀ ರಾಜ್ಯವೇ ಗೌರವಿಸುತ್ತದೆ. ಹೀಗಾಗಿ ಹುಟ್ಟೂರಿನಲ್ಲಿ ಅವರ ನೆನಪುಗಳು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಕೋಟ- ಸಾೈಬ್ರಕಟ್ಟೆ ಜಿಲ್ಲಾ ಮುಖ್ಯ ರಸ್ತೆಗೆ ಅವರ ಹೆಸರಿಡಬೇಕು ಎನ್ನುವ ಬೇಡಿಕೆಯನ್ನು ಬ್ರಹ್ಮಾವರ ಪತ್ರಕರ್ತರ ಸಂಘದವರು ಮುಂದಿರಿಸಿದ್ದು ಇದು ಅತ್ಯಂತ ಸಮಂಜಸವಾಗಿದೆ. ಈ ಕುರಿತು ತಾ.ಪಂ. ವತಿಯಿಂದ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಬ್ರಹ್ಮಾವರ ತಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದರು.

ಅವರು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ `ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಅ.3ರಂದು ವಡ್ಡರ್ಸೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿ, ವಡ್ಡರ್ಸೆಯವರ ಹೆಸರಿನಲ್ಲಿ ಒಂದು ಅದ್ಬುತವಾದ ಶಕ್ತಿ ಇದೆ. ಆದರೆ ನಮ್ಮ ಸಮಾಜ ಅವರಿಗೆ ತಕ್ಕುದಾದ ಗೌರವಗಳನ್ನು ನೀಡಿಲ್ಲ. ಆದರೆ ಬ್ರಹ್ಮಾವರ ಪತ್ರಕರ್ತರ ಸಂಘ ಅವರ ಹೆಸರಲ್ಲಿ ಪ್ರಸಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಡ್ಡರ್ಸೆಯವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ ಎಂದರು.

ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಅ.11ರಂದು ಸಂಜೆ 4.30ಕ್ಕೆ ಬ್ರಹ್ಮಾವರ ಬಂಟರ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ತಿಳಿಸಿದರು.

ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಲೇಖಕ ಪ್ರವೀಣ್ ಯಕ್ಷಿಮಠ, ಕಾರ್ಯದರ್ಶಿ ನಾಗರಾಜ್ ರಾಯಪ್ಪನಮಠ, ಗ್ರಾ.ಪಂ. ಮಾಜಿ ಸದಸ್ಯ ಕುಶ ಆಚಾರ್ಯ, ಉದಯ ಪೂಜಾರಿ, ಮುಖ್ಯ ಶಿಕ್ಷಕ ಕೊತ್ತಾಡಿ ಸಂತೋಷ ಶೆಟ್ಟಿ, ಪತ್ರಕರ್ತರ ಸಂಘದ ಪದಾಧಿಕಾರಿ ರವೀಂದ್ರ ಕುಮಾರ್ ಕೋಟ, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ವಸಂತ್ ಗಿಳಿಯಾರು ಸ್ವಾಗತಿಸಿ, ಉಪಾಧ್ಯಕ್ಷ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಪ್ರತಕರ್ತರ ಸಂಘದ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ವಂದಿಸಿದರು.


Spread the love