‘ವಿಜಯವಾಣಿ’ ಪತ್ರಿಕೆಯ ಪ್ರಶಾಂತ್ ಸುವರ್ಣರಿಗೆ ಪ.ಗೋ ಪ್ರಶಸ್ತಿ

Spread the love

‘ವಿಜಯವಾಣಿ’ ಪತ್ರಿಕೆಯ ಪ್ರಶಾಂತ್ ಸುವರ್ಣರಿಗೆ ಪ.ಗೋ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗೆ ನೀಡಲಾಗುವ 2017ನೇ ಸಾಲಿನ ಪ.ಗೋ. ಪ್ರಶಸ್ತಿಯನ್ನು ವಿಜಯವಾಣಿ ಉಪ ಸಂಪಾದಕ ಪ್ರಶಾಂತ್ ಎಸ್. ಸುವರ್ಣ ಅವರಿಗೆ   ಗುರುವಾರ, 22 ಮಾರ್ಚ್2018ರಂದು  ಪೂರ್ವಾಹ್ನ  ಮಂಗಳೂರಿನ ಪತ್ರಿಕಾ ಭವನದಲ್ಲಿನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

2017ರ ಜೂನ್ 03ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ “ಕೇಳಿಸದೆ ನಮ್ಮ ಕರುಳಿನ ಕೂಗು?’’ ಅವರ ಈ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ.10,001/ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಪತ್ರಕರ್ತೆ ಅನಿತಾ ಪಿಂಟೊ ಮಾತನಾಡಿ, ಸಮಾಜಮುಖಿಯಾದ ಹಾಗೂ ಪರಸ್ಪರ ಸಂಬಂಧ ಬೆಸೆಯುವ ವರದಿಗಳನ್ನು ನೀಡಲು ಪತ್ರಕರ್ತರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಮಹತ್ತರ ಪಾತ್ರವಿದೆ. ಮೌಲಿಕ ವರದಿಗಳು ಸಮಾಜಕ್ಕೆ ಬೆಳಕು ನೀಡಬಲ್ಲವು ಎಂದು ತಿಳಿಸಿದರು . ಚಿಕ್ಕವಯಸ್ಸಿನಲ್ಲಿ ಸಮಾಜವನ್ನು ತಿದ್ದುವ ಕೆಲಸ ಬಹಳ ದೊಡ್ಡದಾಗಿರುತ್ತದೆ. ಅಂತಹ ಕೆಲಸವನನು ಕಿರಿಯ ಪತ್ರಕರ್ತ ಪ್ರಶಾಂತ್  ಅವರು ಮಾಡಿದ್ದಾರೆ ಎಂದು ಹೇಳಿದರು.

ಸಮಾಜದಲ್ಲಿ ಪತ್ರಕರ್ತರು ತುರ್ತು ಸಂದರ್ಭಗಳಲ್ಲಿ ಸೈನಿಕರಂತೆ, ಕೆಲವೊಮ್ಮೆ ಅವರಿಗೂ ಮುಂಚಿತವಾಗಿ ಸ್ಥಳಕ್ಕೆ ತಲುಪಿ ಕಾರ್ಯ ನಿರ್ವಹಿಸಿರುವುದನ್ನು ಗಮನಿಸಿರುವುದಾಗಿ ಪತ್ರಕರ್ತೆ ಅನಿತಾ ಪಿಂಟೋ ಅವರು  ದೇಶದ ಗುಜರಾತ್ ನಲ್ಲಿ   ಸಂಭವಿಸಿದ ಭೀಕರ ಭೂಕಂಪ ಮತ್ತು  ದಕ್ಷಿಣ ಭಾರತದಲ್ಲಿ ಸಂಭವಿಸಿದ ಸುನಾಮಿಯ ಸಂದರ್ಭದಲ್ಲಿ ಗುಜರಾತ್, ನಾಗಪಟ್ಟಣಂ ಪ್ರದೇಶ ಗಳಿಗೆ ಭೇಟಿ ನೀಡಿದಾಗ ತುರ್ತು ಕಾರ್ಯಾಚರಣೆ ನಡೆಸಲು ಸರಕಾರಿ ಯಂತ್ರಗಳು ಆಗಮಿಸುವ ಮೊದಲೆ ಯಾವೂದೆ  ಅಪಾಯವನ್ನು ಲೆಕ್ಕಿಸದೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ತಿಳಿಸಿದರು

ಸೈನಿಕರು ಪ್ರವೇಶ ಮಾಡದೆ ಇರುವ ಪ್ರದೇಶಕ್ಕೆ ಅಪಾಯವನ್ನು ಲೆಕ್ಕಿಸದೆ ಪತ್ರಕರ್ತರು ಹೋಗಿ ವರದಿ ಮಾಡಿದ್ದಾರೆ. ಈ ರೀತಿಯ ಪತ್ರಕರ್ತರ ಧೈರ್ಯ, ಸ್ಥಿತ ಪ್ರಜ್ಞತೆಯಿಂದ ಸಾಮಾಜಿಕ ಪರಿವರ್ತನೆಗೆ ಕಾರಣವಾಗಬಹುದು ಈ ನಿಟ್ಟಿ ನಲ್ಲಿ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದು ಪತ್ರಕರ್ತೆ ಅನಿತಾ ಪಿಂಟೋ ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಸುವರ್ಣ, ಪ.ಗೋ  ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ತಿಳಿಸಿ ,ಪ್ರಶಸ್ತಿಗೆ ಆಯ್ಕೆ ಮಾಡಿದ ಸಂಘಟಕರು , ಆಯ್ಕೆಗಾರರು ಮತ್ತು ಪ.ಗೋ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಪ್ರಶಸ್ತಿಯ ತೀರ್ಪುಗಾರರಾದ ಮೌಲ್ಯಾ ಜೀವನ್, ಹಿರಿಯ ಪ್ರತಕರ್ತ ಚಿದಂಬರ ಬೈಕಂಪಾಡಿ, ಪ.ಗೋ. ಪುತ್ರ ವಿಶ್ವೇಶ್ವರ ಪದ್ಯಾಣ, ಶಕುಂತಳಾ ಪದ್ಯಾಣ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷ ಪಿ.ಬಿ .ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಭವನ ಟ್ರಸ್ಟ್ ನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿದರು, ಪ್ರೆಸ್ ಕ್ಲಬ್ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಸ್ಮರಣಿಕೆ ವಿತರಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.


Spread the love