ವಿದ್ಯಾರ್ಥಿಗಳು ಅಸಾಧ್ಯವೆನಿಸಿದ್ದನ್ನು ಸಾಧಿಸಿ ಜೀವನ ಯಶಸ್ಸುಗೊಳಿಸಿ – ಬಿಷಪ್ ಜೆರಾಲ್ಡ್ ಲೋಬೊ

Spread the love

ವಿದ್ಯಾರ್ಥಿಗಳು ಅಸಾಧ್ಯವೆನಿಸಿದ್ದನ್ನು ಸಾಧಿಸಿ ಜೀವನ ಯಶಸ್ಸುಗೊಳಿಸಿ – ಬಿಷಪ್ ಜೆರಾಲ್ಡ್ ಲೋಬೊ

ಕುಂದಾಪುರ: ವಿದ್ಯಾರ್ಥಿಗಳು ಅಸಾಧ್ಯವೆನಿಸಿದ್ದನ್ನು ಸಾಧ್ಯವೆನಿಸಿದಾಗ ಜೀವನದಲ್ಲಿ ಯಶಸ್ಸುಗೊಳಿಸಲು ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಭಾನುವಾರ ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಜಾನ್ ಡಿಸಿಲ್ವಾ ಫೌಂಡೇಶನ್ ಮುಂಬೈ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಣದ ಕೊರತೆಯಿಂದ ಶಿಕ್ಷಣ ಪಡೆಯದೆ ಇರಬೇಕಾಗಿಲ್ಲ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಧನಸಹಾಯ ನೀಡಿ ಸಹಕರಿಸುವವರು ಹಲವು ಉದಾರ ಮನಸ್ಸಿನ ದಾನಿಗಳಿದ್ದಾರೆ. ಇಂದು ಸಮಾಜದಲ್ಲಿ ಅವಕಾಶಗಳಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕಾಗಿದೆ.

ಧರ್ಮಪ್ರಾಂತ್ಯದಲ್ಲಿ 2025 ರ ಹೊತ್ತಿಗೆ ಕನಿಷ್ಠ 25 ಮಂದಿ ಕ್ರೈಸ್ತ ವಿದ್ಯಾರ್ಥಿಗಳು ಸರಕಾರಿ ಸೇವೆಯಲ್ಲಿ ಇರಬೇಕೆಂಬ ಕನಸು ಸಾಕಾರಗೊಳ್ಳುತ್ತಿದೆ ಈಗಾಗಲೇ 5 ಮಂದಿ ಸರಕಾರದ ಉನ್ನತ ಹುದ್ದೇಗಳಲ್ಲಿ ಸೇವೆ ನೀಡುತ್ತಿದ್ದಾರೆ. ಪರಸ್ಪರ ಸಹಕಾರದೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರ ನೀಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಮಾನ್ ಕ್ಯಾಸ್ತಲಿನೊ, ಕ್ರೈಸ್ತ ಸಮುದಾಯದಲ್ಲಿ ಸರಕಾರಿ ಸೇವೆಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಿದ್ದು ಯುವಜನತೆ ಹೆಚ್ಚು ಸರಕಾರಿ ಹುದ್ದೆಗಳತ್ತ ಆಸಕ್ತಿ ಹೊಂದಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಹಂತದಲ್ಲಿಯೇ ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಮಹತ್ವದ ಯೋಜನೆಯಾದ ಮಣಿಪಾಲ ಆರೋಗ್ಯ ಕಾರ್ಡ್ ಇದರ ಉದ್ಘಾಟನೆಯನ್ನು ಶಮಾನ್ ಕ್ಯಾಸ್ತಲಿನೊ ನೆರವೇರಿಸಿದರು.

ಕಳೆದ ಸಾಲಿನಲ್ಲಿ ಉಡುಪಿ ಧರ್ಮಪ್ರಾಂತ್ಯದ 13453 ಕುಟುಂಬಗಳು ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿದ್ದು ಸುಮಾರು 4 ಕೋಟಿ ರೂಪಾಯಿ ಪ್ರಯೋಜನ ಪಡೆದಿರುತ್ತಾರೆ. ಈ ಬಾರಿ 12724 ಕುಟುಂಬಗಳು ಮಣಿಪಾಲ ಆರೋಗ್ಯ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸಂಚಾಲಕಿ ವೆರೋನಿಕಾ ವಿವಿಯನ್ ಕರ್ನೆಲಿಯೊ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಾನ್ ಡಿಸಿಲ್ವಾ ಫೌಂಡೇಶನ್ ಮುಂಬೈ ಪ್ರಾಯೋಜಕತ್ವದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೆಥೊಲಿಕ್ ಸಭಾ ಪ್ರಾಯೋಜಕತ್ವದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮುಂಬೈ ಜಾನ್ ಡಿಸಿಲ್ವಾ ಫೌಂಡೇಶನ್ ಇದರ ಅಧ್ಯಕ್ಷರಾದ ಜಾನ್ ಡಿಸಿಲ್ವಾ, ಗ್ಲ್ಯಾಡಿಸ್ ಡಿಸಿಲ್ವಾ ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಕಾರ್ಯಕ್ರಮದ ಸಂಯೋಜಕ ಡಾ|ಜೆರಾಲ್ಡ್ ಪಿಂಟೊ, ಕುಂದಾಪುರ ವಲಯ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್, ಆರೋಗ್ಯ ಕಾರ್ಡ್ ಸಂಚಾಲಕ ವಿವಿಯನ್ ವೆರೋನಿಕಾ ಕರ್ನೆಲಿಯೊ, ಕುಂದಾಪುರ ಘಟಕ ಅಧ್ಯಕ್ಷ ವಾಲ್ಟರ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.

ಕುಂದಾಪುರ ವಲಯ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಸ್ವಾಗತಿಸಿ, ಕೇಂದ್ರಿಯ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು. ಫ್ಲೈವನ್ ಡಿಸೋಜಾ ಮತ್ತು ಪ್ರಮೀಲಾ ಡೆಸಾ ಕಾರ್ಯಕ್ರಮ ನಿರೂಪಿಸಿದರು.
,


Spread the love