ವಿದ್ಯುತ್ ಆಘಾತದಿಂದ ಮೃತರ ಮನೆಗೆ ಸಚಿವೆ ಜಯಮಾಲಾ ಭೇಟಿ: ಕುಟುಂಬಕ್ಕೆ ಸಾಂತ್ವನ

Spread the love

ವಿದ್ಯುತ್ ಆಘಾತದಿಂದ ಮೃತರ ಮನೆಗೆ ಸಚಿವೆ ಜಯಮಾಲಾ ಭೇಟಿ: ಕುಟುಂಬಕ್ಕೆ ಸಾಂತ್ವನ

ಉಡುಪಿ: ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ, ಕೀರ್ತನ್ ಪುತ್ರನ್ ಹಾಗೂ ರಾಕೇಶ್ ಬೆಳ್ಚಡ ಅವರ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಗುರುವಾರ ಭೇಟಿ ಮಾಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮೊದಲು ಕೀರ್ತನ್ ಅವರ ಮನೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲಾ ಅವರು ಮೃತ ಕೀರ್ತನ್ ಅವರ ತಂದೆ , ತಾಯಿ ಹಾಗೂ ಅವರ ಬಂಧುಗಳಿಗೆ ಸಾಂತ್ವನ ಹೇಳಿದರು. ಬಳಿಕ ರಾಕೇಶ್ ಬೆಳ್ಚಡ ಅವರ ಮನೆಗೆ ಭೇಟಿ ನೀಡಿದ ಸಚಿವರು ಮೃತರ ತಂದೆ ಹಾಗೂ ತಾಯಿ ಮತ್ತು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಮೃತ ಇಬ್ಬರೂ ಯುವಕರಾಗಿದ್ದು, ಇನ್ನೂ ಸಾಕಷ್ಟು ಬಾಳಿ ಬದುಕಬೇಕಾಗಿದ್ದವರು, ಆದರೆ ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿ, ಮೃತರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಯಾವ ರೀತಿಯಲ್ಲೂ ಹೋದ ಜೀವವನ್ನು ಮರಳಿ ತರಲಾಗದು, ಕುಟುಂಣಬಕ್ಕೆ ಆಧಾರವಾಗಬೇಕಿದ್ದ ಈ ಯುವಕರ ಸಾವು ಇವರ ಕುಟುಂಬದ ಆಧಾರ ಸ್ಥಂಬವನ್ನೇ ಕಳಚಿದಂತೆ ಮಾಡಿದೆ.

ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮೆಸ್ಕಾಂ ಇಲಖೆಯ ವತಿಯಿಂದ ತಕ್ಷಣ 5 ಲಕ್ಷ ರೂಪಾಯಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಕುಟುಂಬಿಕರ ಭೇಟಿಯ ನಂತರ ತಿಳಿಸಿದರು.

ಮೃತರ ಮನೆ ಭೇಟಿ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಜನವಸತಿ ಪ್ರದೇಶದಲ್ಲಿ ಕಡಿದು ಬಿದ್ದಿರುವ ವಿದ್ಯುತ್ ತಂತಿಗಳನ್ನು ಹಾಗೂ ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವುಗೊಳಿಸುವಂತೆ ಸಚಿವರು ಸ್ಥಳದಲ್ಲಿಯೇ ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


Spread the love