ವೆನ್ಲಾಕ್ ಪ್ಯಾರಮೆಡಿಕಲ್ ತರಗತಿ ಆರಂಭಿಸಲು ಒತ್ತಾಯಿಸಿ ಎಸ್‍ಎಫ್‍ಐ ಪ್ರತಿಭಟನೆ

Spread the love

ವೆನ್ಲಾಕ್ ಪ್ಯಾರಮೆಡಿಕಲ್ ತರಗತಿ ಆರಂಭಿಸಲು ಒತ್ತಾಯಿಸಿ ಎಸ್‍ಎಫ್‍ಐ ಪ್ರತಿಭಟನೆ

ಮಂಗಳೂರು: ವೆನ್ಲಾಕ್‍ನ ಪ್ಯಾರಮೇಡಿಕಲ್ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿ ಎರಡು ತಿಂಗಳು ಕಳೆದರೂ ಇನ್ನೂ ಪಠ್ಯ ಚಟುವಟಿಕೆಗಳು ಆರಂಭವಾಗದಿರುವುದನ್ನು ಖಂಡಿಸಿ ಪಠ್ಯಕ್ರಮಗಳನ್ನು ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಪೆಡರೇಷನ್ (ಎಸ್‍ಎಫ್‍ಐ) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಎಪ್‍ಐ ಜಿಲ್ಲಾಧ್ಯಕ್ಷ ಚರಣ್ ಶೆಟ್ಟಿ ಮಾತನಾಡಿ, ವೆನ್ಲಾಕ್ ಪ್ಯಾರಮೆಡಿಕಲ್ ವಿದ್ಯಾರ್ಥಿಗಳು ಗಂಭಿರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ತರಗರತಿಗಳನ್ನು ನಡೆಸದೆ ಪೋಸ್ಟಿಂಗ್ ಹೆಸರಿನಲ್ಲಿ ಆಸ್ಪತ್ರೆಯಲ್ಲಿ ದುಡಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಆಹವಾಲು ಸಲ್ಲಿಸಿದರೂ ಕೂಡ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸುತ್ತೇವೆ. ಬಡ ಹಿನ್ನಲೆಯಿಂದ ಬಂದಿರುವ ಸರಕಾರಿ ಸೀಟು ಪಡೆದು ಸಂಸ್ಥೆಗೆ ಸೇರಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಹರಿಸಲು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪದೇ ಪದೇ ಸಂಸ್ಥೆಗಳನ್ನು ಬದಲಾಯಿಸುತ್ತಾ, ಬಸ್ಸಿನಲ್ಲಿ ಕ್ರೋಸ್ಸಿಂಗ್ ಕೊಡುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಅಲೆದಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ತಮ್ಮ ಸಮಸ್ಯೆಗಳನ್ನು ಸಂಸ್ಥೆಯ ಡಿಎಮ್‍ಓ ನ ಮುಂದಿಟ್ಟಾಗ ಆಂತರಿಕ ಪರೀಕ್ಷೆಯ ಅಂಕಪಟ್ಟಿಯ ಆಧಾರದಲ್ಲಿ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ, ಈಗಾಗಲೆ ಉಳೀದ ಕಾಲೇಜುಗಳಲ್ಲಿ ಆಂತರಿಕ ಪರೀಕ್ಷೆಗಳು ಮುಕ್ತಾಯದ ಹಂತ ತಲುಪಿದ್ದು, ವೆನ್ಲಾಕ್ ಸಂಸ್ಥೆಯ ಪ್ಯಾರಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಿನ್ನೂ ತರಗತಿ ಆರಂಭವಾಗಿಲ್ಲಾ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಹೇಳಿದರು.

ಪ್ರತಿಭಟನೆಯನ್ನು ಬೆಂಬಲಿಸಿ ಎಸ್‍ಎಫ್‍ಐ ಮಾಜಿ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಮಾಡಿ ಅವರು ಮಾಡುತ್ತಿದ್ದ ಕೆಲಸಗಳನ್ನು ಪ್ಯಾರಮೆಡಿಕಲ್ ವಿದ್ಯಾರ್ಥಿಗಳಿಂದ ಮಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ಕಾಲೇಜು ಆರಂಭಿಸಿ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಪ್ಯಾರಮೆಡಿಕಲ್ ದ್ವಿತೀಯ ವರ್ಷದ ವಿದ್ಯಾರ್ಥಿನಿ ರೇಶ್ಮಾ ಮಾತನಾಡಿ, ಅಗತ್ಯ ಮುನ್ನೆಚ್ಚರಿಕೆಯ ಸಲಕರಣೆಗಳನ್ನು ಹಾಗೂ ತರಬೇತಿಯನ್ನು ನೀಡದೆ ಪೋಸ್ಟಿಂಗ್ ಹೆಸರಿನಲ್ಲಿ ದುಡಿಸುತ್ತಿದ್ದಾರೆ, ಈ ಬಗ್ಗೆ ಡಿಎಮ್‍ಓ ಅವರಲ್ಲಿ ಪ್ರಶ್ನಿಸಿದರೆ ಅವಾಚ್ಯವಾಗಿ ನಿಂಧಿಸುತ್ತಾರೆ ಎಂದು ದೂರಿದರು.

ಕಾರ್ಯಕ್ರಮವನ್ನು ಮಂಗಳೂರು ನಗರ ಕಾರ್ಯದರ್ಶಿ ಮಯೂರಿ ಬೋಳಾರ್ ಸ್ವಾಗತಿಸಿ ನಿರೂಪಿಸಿದರು, ಉಳ್ಳಾಲ ವಲಯ ಕಾರ್ಯದರ್ಶಿ ವಿಕಾಸ್ ಕುತ್ತಾರ್ ವಂದಿಸಿದರು.

ಪ್ರತಿಭಟನೆಯಲ್ಲಿ ಎಸ್‍ಎಫ್‍ಐನ ಜಿಲ್ಲಾ ಪಧಾದಿಕಾರಿ ಅಮಲ್ ಜೋರ್ಜ್, ಸದಸ್ಯರಾದ ಅಕ್ಷಯ್, ವಿದ್ಯಾರ್ಥಿಗಳಾದ ನಿಕ್ಷಿತ್, ಧನುಶ್, ಸುಶ್ಮಾ, ಜಿತೇಶ್ ಮತ್ತಿತರರು ಉಪಸ್ಥಿತರಿದ್ದರು.


Spread the love