ಶರತ್ ಸಾವಿಗೆ ಡಿವೈಎಫ್ಐ ಸಂತಾಪ, ಹಂತಕರ ಬಂಧನಕ್ಕೆ ಒತ್ತಾಯ

Spread the love

ಶರತ್ ಸಾವಿಗೆ ಡಿವೈಎಫ್ಐ ಸಂತಾಪ, ಹಂತಕರ ಬಂಧನಕ್ಕೆ ಒತ್ತಾಯ

ಮಂಗಳೂರು: ಬಿ ಸಿ ರೋಡಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಶರತ್ ಮಡಿವಾಳ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿರುವುದು ವಿಷಾದನೀಯ. ಶರತ್ ಸಾವಿಗೆ ಡಿವೈಎಫ್ಐ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಹಾಗೂ ಶರತ್ ಕೊಲೆಗೈದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಬಂಟ್ವಾಳವನ್ನು ಕೇಂದ್ರೀಕರಿಸಿಕೊಂಡು ಕೋಮುಗಲಭೆಯನ್ನು ಹುಟ್ಟು ಹಾಕುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ವ್ಯವಸ್ಥಿತವಾದ ಕಾರ್ಯಾಚರಣೆಯ ಮೂಲಕ ಸಣ್ಣಪುಟ್ಟ ಘಟನೆಗಳನ್ನೂ ಕೋಮು ಸಂಘರ್ಷವನ್ನಾಗಿ ಬದಲಾಯಿಸಿದ ಸಂಘಟಿತ ಕೃತ್ಯಗಳಿಂದಾಗಿ ಇಂದು ಪರಿಸ್ಥಿತಿ ಹತೋಟಿ ಮೀರಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ವೈಫಲ್ಯವೂ ಇಂದಿನ ಸ್ಥಿತಿಗೆ ಕಾರಣವಾಗಿದೆ. ಇದರಿಂದ ಈಗಾಗಲೆ ಎರಡು ಅಮೂಲ್ಯ ಜೀವಗಳು ಬಲಿಯಾಗಿವೆ. ಆಶ್ರಫ್ ಕಲಾಯಿ ಕೊಲೆ ಪ್ರಕರಣ ನಡೆದಾಗಲೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿತ್ತು. ಮತೀಯ ಸಂಘಟನೆಗಳ ಪ್ರಮುಖರೇ ಆ ಕೊಲೆಯ ಆರೋಪಿ ಸ್ಥಾನದಲ್ಲಿ ಗುರುತಿಸಿಕೊಂಡದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು. ಈಗ ಶರತ್ ಮಡಿವಾಳ ಕೊಲೆ ನಡೆದಿದ್ದು ಇಡೀ ಜಿಲ್ಲೆಯಲ್ಲಿ ಭೀತಿಯ ವಾತಾವರಣ ನೆಲೆಸಿದೆ. ಈ ಕೊಲೆಗಳನ್ನು ಸಂಘಪರಿವಾರ ಸಹಿತ ಮತೀಯ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದ್ದು, ಶವಯಾತ್ರೆಯ ಸಂದರ್ಭದ ಬೆಳವಣಿಗೆಗಳು ಇದನ್ನು ಪುಷ್ಟೀಕರಿಸುತ್ತಿದೆ. ಈ ಎಲ್ಲಾ ಅನುಭವದ ಆಧಾರದಲ್ಲಿ ಜಿಲ್ಲಾಡಳಿತ ಕೋಮುಶಕ್ತಿಗಳ ವಿರುಧ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಶಾಂತಿ ನೆಲೆಸಲು ಧೃಡವಾದ ಕಾರ್ಯಾಚರಣೆ ನಡೆಸಬೇಕು ಎಂದು ಡಿವೈಎಫ್ಐ ಒತ್ತಾಯಿಸುತ್ತದೆ.

ಹಾಗೆಯೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿದ್ದ ಶರತ್ ಮಡಿವಾಳ ಕೊಲೆಯ ಹಿಂದೆ ಬಹು ದೊಡ್ಡ ಸಂಚು ನಡೆದಿರುವ ಸಾಧ್ಯತೆ ಇದ್ದು, ದಾಳಿ ನಡೆದು ನಾಲ್ಕು ದಿನಕಳೆದರೂ ಕೊಲೆಗಡುಕರ ಸುಳಿವು ದೊರಕದಿರುವುದು ಆತಂಕಕಾರಿ. ಪೊಲೀಸ್ ಇಲಾಖೆ ತಕ್ಷಣ ನೈಜ ದಾಳಿಕೋರರನ್ಜು ಬಂಧಿಸಬೇಕು, ಕೊಲೆಯ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿರುವ ಮುನೀರ್ ಕಾಟಿಪಳ್ಳ ಯಾವುದೇ ಕಾರಣಕ್ಕೂ ಬೆಂಜನ ಪದವು ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಆದಂತೆ ಅಮಾಯಕರು ಪ್ರಕರಣದಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತವನ್ಜು ಆಗ್ರಹಿಸಿದ್ದಾರೆ.


Spread the love