ಶವಾಗಾರದಲ್ಲಿ ಕೊಳೆತ ಶವ – ರೂ. 25 ಲಕ್ಷ ಪರಿಹಾರ ನೀಡುವಂತೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಆಗ್ರಹ

Spread the love

ಶವಾಗಾರದಲ್ಲಿ ಕೊಳೆತ ಶವ – ರೂ. 25 ಲಕ್ಷ ಪರಿಹಾರ ನೀಡುವಂತೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಆಗ್ರಹ

ಮಂಗಳೂರು: ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವಿದ್ಯುತ್ ಅವಘಡದಲ್ಲಿ ಮೃತಪಟ್ಟು ಶವಾಗಾರದಲ್ಲಿರಿಸಲಾದ ವಿಲ್ಸನ್ ಫೆರ್ನಾಂಡಿಸ್ ಮೃತದೇಹ ಸಂಪೂರ್ಣ ಕೊಳೆತು ಹೋದ ಹಿನ್ನೆಲೆಯಲ್ಲೆ, ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಮೃತ ಯುವಕನ ಕುಟುಂಬಕ್ಕೆ ಆಸ್ಪತ್ರೆ ವತಿಯಿಂದ ರೂ. 25 ಲಕ್ಷ ಪರಿಹಾರ ನೀಡುವಂತೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ರೋಲ್ಫೀ ಡಿಕೋಸ್ತಾ ಅವರು ಜಿಲ್ಲಾಧಿಕಾರಿಯವರನ್ನು ಮನವಿ ಮಾಡಿದ್ದಾರೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ಪೆರ್ಮನ್ನೂರು-ನಿತ್ಯಾರ್ ನಗರದ ದಾರಂದ ಬಾಗಿಲು ನಿವಾಸಿ ಅಬ್ರಾಹಾಂ ಪೀಟರ್ ಫೆರ್ನಾಂಡಿ್ ಅವರ ಮಗ ವಿಲ್ಸನ್ ಫೆರ್ನಾಂಡಿಸ್ (26) ವಿದ್ಯುತ್ ಅಪಘಾತಕ್ಕೆ ಒಳಪಟ್ಟು ಮೃತಪಟ್ಟಿದ್ದು ಇವರ ಸಹೋದರ ಹಾಗೂ ಸಂಬಂಧಿಕರು ಹೊರದೇಶದಲ್ಲಿದ್ದು ಅವರು ಊರಿಗೆ ಬಂದ ನಂತರ ಅಕ್ಟೋಬರ್ 27ರಂದು ಸಾಯಂಕಾಲ 4 ಗಂಟೆಗೆ ಕ್ರೈಸ್ತ ಧರ್ಮದ ವಿಧಿ ವಿಧಾನದೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿತ್ತು. ಈ ಕಾರಣದಿಂದ ಮೃತದೇಹವನ್ನು ಶೀತಲಿಕರಣ ವ್ಯವಸ್ಥೆಯನ್ನು ಹೊಂದಿರುವಂತಹ ಹತ್ತಿರದ ಯೆನೆಪೋಯ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು.

ಮೃತದೇಹವನ್ನು ಅಂತಿಮ ವಿಧಿ ವಿಧಾನಗಳೊಂದಿಗೆ ದಫನ ಮಾಡುವ ಉದ್ದೇಶದಿಂದ ಆದಿತ್ಯವಾರದಂದು 1 ಗಂಟೆಗೆ ಆಸ್ಪತ್ರೆಯ ಶವಗಾರದ ಬಳಿ ತೆರಳಿದಾಗ ದುರ್ವಾಸನೆಯಿಂದ ಯಾರಿಗೂ ಕೂಡ ಒಳಗೆ ಹೋಗಲು ಸಾಧ್ಯವಾಗಿಲ್ಲ. ಬಹಳ ಪ್ರಯತ್ನಪಟ್ಟು ಒಳ ಹೋದಾಗ ಮೃತ ದೇಹವು ಸಂಪೂರ್ಣ ಕೊಳೆತು ಹೋಗಿದ್ದು ಕಂಡು ಬಂದಿದ್ದು ಆಸ್ಪತ್ರೆಯವರ ನಿರ್ಲಕ್ಷ್ಯದಿಂದಾಗಿ ಈ ಮೃತದೇಹವನ್ನು ಶವಾಗಾರದಲ್ಲಿ ಶೀತಲಿಕರಣಗೊಳಸದಿರುವುದು ಕಂಡುಬಂದಿದೆ.

ಈ ಬಗ್ಗೆ ಸ್ಥಳೀಯ ಶಾಸಕರಾದ ಯು ಟಿ ಖಾದರ್ ಅವರ ಸಮ್ಮುಖದಲ್ಲಿ ಆಸ್ಪತ್ರೆಯನ್ನು ಸ್ಪಂದಿಸಿದಾಗ ಅವರು ತಪ್ಪೊಪ್ಪಿಗೆ ಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ದ ದೂರನ್ನು ದಾಖಲಿಸಿದ್ದೇವೆ.

ಈ ಘಟನೆಯಿಂದ ಮೃತರ ಹೆತ್ತವರಿಗೆ ಸಹೋದರ – ಸಹೋದರರಿಗೆ ಸಂಬಂಧಿಕರಿಗೆ ಸೇರಿಸಿ ಸಾವಿರಾರರು ಗ್ರಾಮಸ್ಥರಿಗೆ ಮೃತದೇಹವನ್ನು ನೋಡುವಲ್ಲಿ ವಂಚಿತರಾಗಿರುತ್ತಾರೆ. ಶಾಂತಿಯನ್ನೇ ಬಯಸುವ ಸಮಸ್ತ ಕ್ರೈಸ್ತ ಸಮುದಾಯದವರಿಗೆ ಈ ಘಟನೆಯಿಂದ ತುಂಬಲಾರದ ನೋವುಂಟಾಗಿರುತ್ತದೆ. ಆದರುದರಿಂದ ಜಿಲ್ಲಾಧಿಕಾರಿಗಳು ದುಃಖಭರಿತವಾದ ಕುಟುಂಬಕ್ಕೆ ನಷ್ಟದ ರೂಪದಲ್ಲಿ ರೂ 25 ಲಕ್ಷ ಪರಿಹಾರ ನೀಡಲು ಯೆನಪೋಯ ಆಸ್ಪತ್ರೆಯ ಆಡಳಿತ ಮಂಡಳಿಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


Spread the love