ಶಾರ್ಜಾದಲ್ಲಿ ನವೆಂಬರ್ 19 ಮತ್ತು 20 ರಂದು 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ

Spread the love

ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯ ವಾಹಿನಿ. ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ 2015 ನವೆಂಬರ್ 19 ಮತ್ತು 20 ರಂದು ಶಾರ್ಜಾದಲ್ಲಿ ಅದ್ದೂರಿಯಾಗಿ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಬಳಿಯಿರುವ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಆವರಣದಲ್ಲಿರುವ ಬೃಹತ್ ಸುಸಜ್ಜಿತ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಸಮಾವೇಶ ಗೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿ ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದ ಲಾಂಛನ ಬಿಡುಗಡೆ

ಸೆಪ್ಟೆಂಬರ್ 8ನೇ ತಾರೀಕಿನಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಶಾರ್ಜಾ, ಲಾಂಛನ ಬಿಡುಗಡೆ ಮಾಡಲಾಗಿದೆ.

ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನ ಸಮಿತಿ ಅಧ್ಯಕ್ಷರು ಶ್ರೀ ಕೆ. ಪಿ. ಮಂಜುನಾಥ್, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಶ್ರೀ ಸತೀಶ್ ವೆಂಕಟರಮಣ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಸುಬ್ರಮಣಿ ಎಂ. ಬಂಗಾರಪೇಟೆ, ಡಾ. ಮುನೀರ್ ಹಾಜಿ ಮಂಗಳೂರು, ಉಪಾಧ್ಯಖ್ಷಾರಾದ ಪ್ರೋ. ಎಂ. ಬಿ. ಕುದರಿ ಗೋಕಾಕ್ ಮತ್ತು ಕಾರ್ಯದರ್ಶಿ ಶ್ರೀ ಜಯಪ್ರಕಾಶ್ ರಾವ್ ಉಪಸ್ಥಿತರಿದ್ದರು.

ಕರ್ನಾಟಕದಿಂದ ಕಲಾವಿದರು, ಸಂಗೀತಗಾರರು, ಸಾಹಿತಿಗಳು, ಗಣ್ಯರ ತಂಡ ಶಾರ್ಜಾದಲ್ಲಿ ನಡೆಯುವ ಸಮ್ಮೇಳನ್ದಲ್ಲಿ ಭಾಗವಹಿಸಲಿದ್ದಾರೆ. ಹೃದಯವಾಹಿನಿ ಕರ್ನಾಟಕ ಮುಖ್ಯಸ್ಥರಾದ ಶ್ರೀ ಕೆ. ಪಿ. ಮಂಜುನಾಥ್ ಸಾಗರ್ ತಂಡದ ಸಾರಥ್ಯ ವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ, ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಮುಂತಾದ ಕಲೆಗಳು ಪ್ರದರ್ಶನಗೊಳ್ಳಲಿದೆ. ಸಮ್ಮೇಳನ ನಡೆಯುವ ಸಭಾಂಗಣದ ಹೊರವಲಯದಲ್ಲಿ ವಸ್ತುಪ್ರದರ್ಶನ, ಪುಸ್ತಕ ಮೇಳ, ಮಾರಾಟ ಮಳಿಗೆಯ ವ್ಯವಸ್ಥೆ ಇದೆ.

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ

ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ ಪ್ರಶಸ್ತಿ ಸಮಾರಂಭ” ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರಂಭದಲ್ಲಿ ನಡೆಯಲಿದ್ದು ಹೆಚ್ಚಿನ ಶೋಭೆ ತರಲಿದೆ. ಹಲವಾರು ಅತ್ಯುತ್ತಮ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿರುವ ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ನಡೆಯಲಿರುವ ಕನ್ನಡಿಗರ ಸಮಾವೇಶ ದಾಖಲೆಯಾಗಲಿದೆ ಎಂದು ಕಾರ್ಯಕಾರಿ ಸಮಿತಿಯ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಗಣ್ಯಾತಿಗಣ್ಯರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ

VKSS Guests

ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಸಮಾರಂಭದ ಉದ್ಘಾಟನೆಯಲ್ಲಿ  ಗಣ್ಯರಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಹಾಗೂ ಪ್ರವಾಸೋದ್ಯಮ ಸಚಿವರಾದ ಮಾನ್ಯ ಶ್ರೀ ಆರ್. ವಿ. ದೇಶಪಾಂಡೆ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವೆ ಮಾನ್ಯ ಶ್ರೀಮತಿ ಉಮಾಶ್ರೀ, ಖ್ಯಾತ ಅನಿವಾಸಿ ಉದ್ಯಮಿ ಡಾ. ಬಿ. ಆರ್. ಶೆಟ್ಟಿಯವರು, ಶಾಸಕರಾದ ಮಾನ್ಯ ಬಿ. ಎ. ಮೊಯಿದ್ದೀನ್ ಬಾವ, ಮಾನ್ಯ ಜೆ. ಆರ್. ಲೋಬೊ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ  ನಗರಾಭಿವೃದ್ದಿ ಸಚಿವರಾದ ಮಾನ್ಯ ಶ್ರೀ ವಿನಯಕುಮಾರ್ ಸೊರಕೆ, ಸಮಾಜ ಕಲ್ಯಾಣ ಸಚಿವ ಮಾನ್ಯ ಶ್ರೀ ಹೆಚ್. ಆಂಜನೇಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಲ್. ಹನುಮಂತಯ್ಯ, ಮೈಸೂರು ವಿ.ವಿ. ಕುಲಪತಿ ಡಾ. ಹೆಚ್ ರಂಗಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೊ: ಎಸ್. ಜಿ. ಸಿದ್ದರಾಮಯ್ಯ ನವರು ಭಾಗವಹಿಸಲಿದ್ದಾರೆ.

ಸಂಭ್ರಮದ ಆಚರಣೆಗೆ ಶಾರ್ಜಾ ಕರ್ನಾಟಕ ಸಂಘ ಸಕಲ ಸಿದ್ದತೆಯೊಂದಿಗೆ ಪೂರ್ವತಯಾರಿ ನಡೆಸುತಿದೆ.

ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ವೆಂಕಟರಮಣ ರವರು ತಮ್ಮ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಯೊಜನೆಯನ್ನು ರೂಪಿಸಿ ಪೂರ್ವತಯಾರಿ ನಡೆಸುತ್ತಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಈ ಮೊದಲು ಅಬುಧಾಬಿ ಕರ್ನಾಟಕ ಸಂಘ ಮತ್ತು ದುಬಾಯಿ ಕರ್ನಾಟಕ ಸಂಘದಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಅದ್ದೂರಿಯಾಗಿ ನಡೆದಿದೆ. ಈ ಬಾರಿಯೂ ಶಾರ್ಜಾದಲ್ಲಿ ಯಶಸ್ವಿಯಾಗಿ ನಡೆಸಲು ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಬೆಂಬಲ, ಪ್ರಾಯೋಜಕರ ಪೂರ್ಣ ಸಹಕಾರದೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ. ಯು.ಎ.ಇ. ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸಮ್ಮೇಳನದಲ್ಲಿ ಭಾಗಿಯಾಗಿ ಸಂಭ್ರಮದ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.


Spread the love