ಸಂಘ ಪರಿವಾರದ ಕಾರ್ಯಕರ್ತರು ರಾಷ್ಟ್ರಸೇವೆಗೆ ಸದಾ ಸಿದ್ದ – ಶರಣ್ ಪಂಪ್ ವೆಲ್

Spread the love

ಸಂಘ ಪರಿವಾರದ ಕಾರ್ಯಕರ್ತರು ರಾಷ್ಟ್ರಸೇವೆಗೆ ಸದಾ ಸಿದ್ದ – ಶರಣ್ ಪಂಪ್ ವೆಲ್

ಕುಂದಾಪುರ: ಕೊರೊನಾ ನಿಯಂತ್ರಣದ ಕಾರ್ಯದಲ್ಲಿ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ.ಇಂತಹ ಮಹಾತ್ಕಾರ್ಯ ಮಾಡಿದ ಕೊರೊನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಬೇಕು ಎಂದು ವಿಹಿಂಪ ಮುಖಂಡ ಶರಣ್ ಪಂಪವೆಲ್ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಕಂಡ್ಲೂರಿನಲ್ಲಿ ವಿಹಿಂಪ, ಭಜರಂಗದಳ, ರೆಡ್ ಕ್ರಾಸ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಂದರ್ಭದಲ್ಲಿ ಭಜರಂಗದಳದ ಕಾರ್ಯಕರ್ತರು ರಕ್ತದಾನ ಮಾಡಲು ಸಿದ್ದರಿದ್ದಾರೆ. ಮಂಗಳೂರು ವಿಭಾಗದಲ್ಲಿ 2 ತಿಂಗಳಲ್ಲಿ 8 ಸಾವಿರಕ್ಕೂ ಅಧಿಕ ಯೂನಿಟ್ ರಕ್ತದಾನ ಮಾಡಲಾಗಿದೆ. ಸಂಘ ಪರಿವಾರದ ಕಾರ್ಯಕರ್ತರು ದೇಶ ಪ್ರೇಮದೊಂದಿಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಉತ್ತಮ ಚಿಂತನೆಯಲ್ಲಿ ಬದುಕುತ್ತಿದ್ದಾರೆ. ಪರಿವಾರದ ಕಾರ್ಯಕರ್ತರು ರಾಷ್ಟ್ರಸೇವೆಗೆ ಸದಾ ಸಿದ್ದರಿದ್ದಾರೆ ಎಂದು ತಿಳಿಸಿದರು.

ರಕ್ತದಾನ ಶಿಬಿರದಲ್ಲಿ ಸ್ಥಳೀಯ ಸಂಘಟನೆಯ ಯುವಕರಿಂದ 78 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕೊರೊನಾ ವಾರಿಯರ್ಸ್ ಆಗಿ ದುಡಿದ 10 ಆಶಾ ಕಾರ್ಯಕರ್ತೆಯರನ್ನ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ 9 ಸಿಬ್ಬಂದಿಗಳನ್ನು ಹಾಗೂ ವೈದ್ಯೆ ಡಾ. ಲತಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಭಜರಂಗದಳ ಪ್ರಾಂತ್ಯ ಸಂಚಾಲಕ ಸುನೀಲ್ ಕೆ.ಆರ್, ಪತ್ರಕರ್ತ ವಸಂತ ಗಿಳಿಯಾರ, ಕುಂದಾಪುರ ರೆಡ್ ಕ್ರಾಸ್ ಘಟಕದ ಸಭಾಪತಿ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಕುಂದಾಪುರ, ತಾಲ್ಲೂಕು ಭಜರಂಗದಳ ಸಂಚಾಲಕ ಸುಧೀರ್ ಮೇರ್ಡಿ, ದಿನೇಶ್ ಮೆಂಡನ್, ವಸಂತ್ ಸಂಗಮ್ ಇದ್ದರು.

ಸಾಮ್ರಾಟ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ದಿನೇಶ್ ಆಚಾರ್ ವಂದಿಸಿದರು. ಸಂಪತ್ ನಿರೂಪಿಸಿದರು.


Spread the love