ಸಂಸದನಾಗಿ ಮೆಡಿಕಲ್ ಕಾಲೇಜು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ನನ್ನ ಆದ್ಯತೆ – ಜೆಪಿ ಹೆಗ್ಡೆ

Spread the love

ಸಂಸದನಾಗಿ ಮೆಡಿಕಲ್ ಕಾಲೇಜು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ನನ್ನ ಆದ್ಯತೆ – ಜೆಪಿ ಹೆಗ್ಡೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಬಿರುಸಿನ ಮತಪ್ರಚಾರ ಮುಂದುವರೆಸಿದ್ದು ಬುಧವಾರ ಉಡುಪಿಯ ಆಭರಣ ಡೈಮಂಡ್ಸ್, ಮಲಬಾರ್ ಗೋಲ್ಡ್, ಸಾಯಿರಾಧಾ ಟಿವಿಎಸ್ ಮೋಟಾರ್ಸ್, ಬಾಳಿಗಾ ಫಿಷ್ ನೆಟ್ಟ್ ಇತ್ಯಾದಿ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರುಜನರನ್ನು ಬೇಟಿಯಾದಷ್ಟು ಗೆಲುವಿನ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತಿವೆ. ಪ್ರಚಾರ ಆರಂಭದ ದಿನಗಳಲ್ಲಿ 60-40 ಎಂಬ ಅಭಿಪ್ರಾಯ ಇತ್ತು ಆದರೆ ಈಗ ಜನರು ಸಮಬಲದ ಭರವಸೆ ನೀಡಿದ್ದಾರೆ ಜನರ ಪ್ರತಿಕ್ರಿಯೆ ನೋಡುವಾಗ ಖುಷಿಯಾಗುತ್ತಿದೆ ಜನರ ಅಭಿಪ್ರಾಯ ಮತಕ್ಕೆ ಪರಿವರ್ತನೆ ಆಗಿ ಗೆಲ್ಲಲಿದ್ದೇನೆ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಭರವಸೆ ಮೂಡುತ್ತಿದೆ ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಗ್ಯಾರಂಟಿಗಳ ಬಗ್ಗೆ ಹೇಳಿದ್ದೇವು ಆದರೆ ಕೊಟ್ಟಿರಲಿಲ್ಲ ಹಾಗಾಗಿ ಈ ಭಾಗದ ಜನ ಅದನ್ನು ನಂಬಿರಲಿಲ್ಲ ಈಗ ಸೌಲಭ್ಯಗಳು ಸಿಕ್ಕಿವೆ ಹಾಗಾಗಿ ಮತ ಹಾಕುವ ಭರವಸೆ ನೀಡಿದ್ದಾರೆ ಎಂದರು.

ಉಡುಪಿ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು, ಗಾರ್ಮೆಂಟ್ ಇಂಡಸ್ಟ್ರಿ, ಮೆಡಿಕಲ್ ಕಾಲೇಜು, ಉದ್ಯೋಗ ನಿರ್ಮಾಣ ಮಾಡುವ ಕೈಗಾರಿಕೆಗಳು ಬೇಕು ಜಿಲ್ಲೆಯಲ್ಲಿ ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರ ಅಭವೃದ್ಧಿಯಾಗಬೇಕು. ಕರಾವಳಿಯಲ್ಲಿ ಹುಟ್ಟಿದ ಬ್ಯಾಂಕುಗಳು ಮರ್ಜ್ ಮಾಡಿದ್ದಾರೆ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕಾಗಿದ್ದು ಇವೆಲ್ಲಾ ಸಂಸದನಾಗಿ ತಮ್ಮ ಆದ್ಯತೆಗಳಾಗಿವೆ ಎಂದರು.

ಅಡಿಕೆಗೆ ರೋಗ ಬಂದಾಗ ಧಾರಣೆ 10000 ಇಳಿದಿತ್ತು ಈ ಬಗ್ಗೆ ನಾನು ಅಧಿಕಾರಿ, ಸಚಿವರ ಜೊತೆ ಮಾತನಾಡಿ ದರ ರೂ 70-80 ಸಾವಿರದವರೆಗೆ ಹೋಗಿತ್ತು ಇದಕ್ಕೆ ನನ್ನಲ್ಲಿ ದಾಖಲೆ ಇದೆ. ಆದರೆ ನೀವು ಮಾಡಿದ್ದಲ್ಲ ಬಿಜೆಪಿ ಸರಕಾರ ಮಾಡಿದ್ದು ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಅಡಕೆ ಕ್ಯಾನ್ಸರ್ ಕಾರಕ ಎಂದು ಕಾಂಗ್ರೆಸ್ ಸರ್ಕಾರ ಇದ್ದಾಗ ಹೇಳಿದ್ದು ಎಂದೂ ಸುದ್ದಿ ಹಬ್ಬಿಸಲಾಗುತ್ತಿದೆ ಆದರೆ ವಾಜಪೇಯಿ ಸರಕಾರ ಇದ್ದಾಗ ಆಗಿನ ಅಧಿಕಾರಿಗಳೇ ಹಾಗೆ ಬರೆದಿದ್ದರು. ಅಡಕೆಯ ಬಗ್ಗೆ ನಾನು ಮರು ಅಧ್ಯಯನಕ್ಕೆ ಪ್ರಯತ್ನಿಸಿದ್ದೆ ಈ ಎಲ್ಲಾ ವಿಚಾರಗಳು ಶೃಂಗೇರಿ ಕಡೆಯ ಅಡಿಕೆ ಬೆಳೆಗಾರರಿಗೆ ಚೆನ್ನಾಗಿ ಗೊತ್ತಿದೆ ಎಂದು ಸುಳ್ಳು ಸುದ್ದಿಗೆ ಪ್ರತಿಕ್ರಿಯಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಾಯಕರಾದ ಕೃಷ್ಣಮೂರ್ತಿ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.


Spread the love