ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಆಗ್ರಹ : ಡಿ. ವೇದವ್ಯಾಸ ಕಾಮತ್

Spread the love

ಸಚಿವ  ತನ್ವೀರ್ ಸೇಠ್ ರಾಜೀನಾಮೆಗೆ ಆಗ್ರಹ : ಡಿ. ವೇದವ್ಯಾಸ ಕಾಮತ್

ರಾಜ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಗುರುವಾರ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ  ಯುವತಿಯೋರ್ವಳ ಅರೆ ನಗ್ನ (ನೀಲಿ) ಚಿತ್ರಗಳನ್ನು  ಮೊಬೈಲ್‍ನಲ್ಲಿ  ವೀಕ್ಷಿಸುತ್ತಿದ್ದ  ದೃಶ್ಯವು ಮಾಧ್ಯಮಗಳಲ್ಲಿ  ಪ್ರಸಾರವಾಗುತ್ತಿದೆ. ನೈತಿಕ ಮೌಲ್ಯಗಳನ್ನು  ಎತ್ತಿ ಹಿಡಿದು ಈ ರಾಜ್ಯದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದ್ದ  ವ್ಯಕ್ತಿ ಈ ರೀತಿ ವಿಕೃತ ಮನಸ್ಸಿನವರಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ  ವ್ಯವಹರಿಸಿದ್ದು ತೀರಾ ಗಂಭೀರ ಹಾಗೂ ನಾಚಿಕೆಗೇಡಿನ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಅವರ  ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.

tanvir-shet

ಮುಖ್ಯಮಂತ್ರಿ  ಸಿದ್ದರಾಮಯ್ಯ ತಮ್ಮ ಪಕ್ಷದ ಸಚಿವರ ಈ ಘನ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿರುವುದು ಕಾಂಗ್ರೆಸಿನ ಮಾನಸಿಕತೆ ಎತ್ತಿ ತೋರಿಸುತ್ತದೆ. ಇದರ ಬಗ್ಗೆ ಸ್ಪಷ್ಟವಾದ ದಾಖಲೆಗಳು ದೂರದರ್ಶನದ  ಅನೇಕ ವಾಹಿನಿಗಳ ಮುಖೇನ ಜನರಿಗೆ ಲಭ್ಯವಾಗಿದ್ದು, ಸಚಿವರು ಯಾವುದೇ  ಸುಳ್ಳು ಹೇಳಿ ತಪ್ಪಿಸಿಕೊಳ್ಳಲು  ಸಾಧ್ಯವಿಲ್ಲ.

ರಾಜ್ಯದ  ಸಮಸ್ತ  ವಿದ್ಯಾರ್ಥಿ ಸಮೂಹಕ್ಕೆ ಮಾದರಿಯಾಗಬೇಕಿರುವ ಶಿಕ್ಷಣ ಸಚಿವರೊಬ್ಬರು  ಇಂತಹ  ಹೀನ ಕೃತ್ಯ ಎಸಗಿರುವುದರಿಂದ  ವಿದ್ಯಾರ್ಥಿಗಳು ಮಾತ್ರವಲ್ಲದೇ ಸಮಗ್ರ  ಕರ್ನಾಟಕ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ. ರಾಜ್ಯದ ಹಿತದೃಷ್ಟಿಯಿಂದ ಇಂತಹ ಶಿಕ್ಷಣ ಸಚಿವ  ಸರಕಾರದಲ್ಲಿ ಮುಂದುವರಿಯುವುದು  ನಾಗರಿಕ ಸಮಾಜಕ್ಕೆ ಅಗೌರವ  ಎಂದು  ತಿಳಿಸಿದ  ವೇದವ್ಯಾಸ ಕಾಮತ್‍ರು, ತಕ್ಷಣ ಸಚಿವ ತನ್ವೀರ್ ಸೇಠ್ ರಾಜಿನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿಯು ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.


Spread the love