ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ- ಜಿಯಾವುಲ್ಲಾ

Spread the love

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ- ಜಿಯಾವುಲ್ಲಾ

ಉಡುಪಿ : ರಾಜ್ಯಾದ್ಯಂತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ , ಎಲ್ಲಾ ಜಿಲ್ಲೆಗಳಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಂದ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯ ಎಂಎಸ್ಎಂಇ ನಿರ್ದೇಶಕ ಎಸ್.ಜಿಯಾವುಲ್ಲಾ ತಿಳಿಸಿದ್ದಾರೆ.

ಅವರು ಗುರುವಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ಮತ್ತು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದೊಂದಿಗೆ ಶಿವಳ್ಳಿ ಕೈಗಾರಿಕಾ ವಲಯದ ಡಿಎಸ್ಐಎ ಸಭಾಂಗಣದಲ್ಲಿ ನಡೆದ , ಆಹಾರ ಉತ್ಪಾದನೆ, ಕೃಷಿ ನೀತಿ-2015 ಮತ್ತು ಕಾರ್ಮಿಕ ವೇತನ ಸಂಹಿತೆ-2019 ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಂಎಸ್ಎಂಇ ನಿರ್ದೇಶನಾಲಯವು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಸಮಸ್ಯೆಗಳ್ನು ಅರಿತು, ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಉದ್ದಿಮೆದಾರರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು, ಬಜೆಟ್ ನಲ್ಲಿ ಈ ಬಗ್ಗೆ ಸೂಕ್ತ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ , ಉದ್ದಿಮೆಗಳು ಬ್ಯಾಂಕ್ ಗಳಿಂದ ಸಾಲ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳು, ಸಾಲಗಳಿಗೆ ನೀಡಬೇಕಾದ ಭದ್ರತೆ ಸಮಸ್ಯೆ, ಬಡ್ಡಿ ಪ್ರಮಾಣ ಹೆಚ್ಚಳ, ಗೇರುಬೀಜ ಉದ್ದಿಮೆಗಳು ಮಂಗಳೂರು ಬಂದರು ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳು , ಕಂಪೆನಿ ಸೆಕ್ರಟರಿ ನೇಮಕದಲ್ಲಿ ವಿಧಿಸಿರುವ ಷರತ್ತುಗಳ ಪಾಲನೆಯಲ್ಲಿನ ಸಮಸ್ಯೆಗಳು, ಕಾರ್ಮಿಕ ವೇತನ ಸಂಹಿತೆಯಲ್ಲಿನ ಸಮಸ್ಯೆಗಳು , ಪ್ಲಾಸ್ಟಿಕ್ ಉದ್ದಿಮೆದಾರರ ಸಮಸ್ಯೆಗಳು, ಎಪಿಎಂಸಿ ಮತ್ತು ಕೆ.ಎಸ್.ಎಫ್.ಸಿ ಯಲ್ಲಿನ ಸಮಸ್ಯೆಗಳ ಬಗ್ಗೆ , ಉದ್ದಿಮೆದಾರರರು ನೀಡಿದ ದೂರು ಮನವಿಗಳನ್ನು ಆಲಿಸಿದ ಎಸ್.ಜಿಯಾವುಲ್ಲಾ , ಈ ಎಲ್ಲಾ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಬಂದಪಟ್ಟ ಇಲಾಖೆಗಳ ಗಮನಕ್ಕೆ ತಂದು , ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬರ ಸಮಸ್ಯೆಯನ್ನೂ ಆಲಿಸಿ, ಅದಕ್ಕನುಗುಣವಾಗಿ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು, ಇದರಿಂದ ಸರಕಾರಕ್ಕೆ ಉದ್ಯಮ ಸ್ನೇಹಿ ಕಾರ್ಯ ನೀತಿಗಳನ್ನು ರೂಪಿಸಲು ಸಹಾಯವಾಗುವುದು ಎಂದು ಜಿಯಾವುಲ್ಲಾ ಹೇಳಿದರು.

ಕಾರ್ಯಕ್ರಮದಲ್ಲಿ ಕಾಸಿಯಾ ಅಧ್ಯಕ್ಷ ಆರ್. ರಾಜು, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮಾನಂದ್ ನಾಯಕ್, ಎಂಎಸ್ಎಂಇ ನಿರ್ದೇಶನಾಲಯದ ಅಪರ ನಿರ್ದೇಶಕ ಹೆಚ್.ಎಂ. ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತೋಟಗಾರಿಕೆ, ಕರ್ನಾಟಕ ಕೃಷಿ ವ್ಯವಹಾರ ಅಭಿವೃದ್ದಿ ನಿಗಮದ ಜಂಟಿ ನಿರ್ದೇಶಕಿ ಎನ್.ಅಂಬಿಕಾ ಕೃಷಿ ಯೋಜನೆಗಳ ಕುರಿತು ಹಾಗೂ ಸಿ.ಎಫ್.ಟಿ.ಆರ್.ಐ ಹಿರಿಯ ವಿಜ್ಞಾನಿ ಡಾ. ಕುಡಚಿಕರ್ ಆಹಾರ ಉತ್ಪಾದನೆ ಕುರಿತು , ಕಾರ್ಮಿಕ ವೇತನ ಸಂಹಿತೆ -2019 ಕುರಿತು ಹೇಮಚಂದ್ರ ಪ್ರಸ್ತುತಿ ನೀಡಿದರು.

ಜಿಲ್ಲೆಯ ವಿವಿಧ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಉದ್ದಿಮೆದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್.ಫೆನಾರ್ಂಡಿಸ್ ಸ್ವಾಗತಿಸಿದರು.


Spread the love