ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಚರ್ಚಿಸಿ; ಪೂಜಾರಿಗೆ ಸೋನಿಯಾ ಗಾಂಧಿ ಸೂಚನೆ

Spread the love

ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಚರ್ಚಿಸಿ; ಪೂಜಾರಿಗೆ ಸೋನಿಯಾ ಗಾಂಧಿ ಸೂಚನೆ

ಬೆಂಗಳೂರು: ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಹಾಗೂ ಯಾವುದೇ ಸಮಸ್ಯೆ ಇದ್ದರೂ ಹೈಕಮಾಂಡ್ ಜೊತೆ ಮಾತನಾಡಿ ಬಗೆಹರಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೊನೀಯಾ ಗಾಂಧಿ ಅವರು ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಹಿರಿಯ ನಾಯಕರಾದ ಜನಾರ್ದನ ಪೂಜಾರಿ, ಜಾಫರ್ ಶರೀಫ್ ಹಾಗೂ ಎಚ್ ವಿಶ್ವನಾಥ್ ಸಹಿತ ಕೆಲವರು ಕಾಂಗ್ರೆಸ್ ಸರಕಾರದ ವಿರುದ್ದ ಅತೃಪ್ತಿಯ ಹೇಳಿಕೆ ನೀಡಿ ಮುಜುಗುರ ಉಂಟು ಮಾಡುತ್ತಿರುವ ಬಗ್ಗೆ ಕೆಪಿಸಿಸಿ ಹೈಕಮಾಂಡ್ ಗಮನ ಸೆಳೆದು ಕ್ರಮಕೈಗೊಳ್ಳುವಂತೆ ಮಾಡಿದ ವಿನಂತಿಯ ಮೇರೆಗೆ ಸ್ವತಃ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ದೆಹಲಿಗೆ ಕರೆಸಿಕೊಂಡು ವೈಯುಕ್ತಿಕವಾಗಿ ಮಾತನಾಡಿ ಏನೇ ಅಸಮಾಧಾನ ಇದ್ದರೂ ಹೈಕಮಾಂಡ್ ಜತೆ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇದ್ದು ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ವಿಪಕ್ಷಗಳಿಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ. ಹೀಗಾಗಿ ಹಿರಿಯರಾಗಿ ನೀವು ಸಲಹೆ-ಸೂಚನೆ ಕೊಟ್ಟು ಬೇರೆ ರೀತಿಯ ಅಸಮಾಧಾನ ಇದ್ದರೆ ಹೈಕಮಾಂಡ್ ಜೊತೆ ಮುಕ್ತವಾಗಿ ಚರ್ಚಿಸಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸೋನಿಯಾ ಗಾಂಧಿ ಭೇಟಿಯ ವೇಳೆ ಪೂಜಾರಿ ಅವರು ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದ್ದು ಅವರ ನಡವಳಿಕೆ ಬದಲಾಯಿಸಿಕೊಳ್ಳಲು ಸೂಚಿಸಬೇಕೆಂದು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.


Spread the love

1 Comment

  1. Man, have some sense of shame. Do you want to be told by this Italian? Come out of that corrupt set up man. Enough is enough.

Comments are closed.