ಸರಣಿ ಶೂಟೌಟ್ ಪ್ರಕರಣ: ಕಲಿ ಯೋಗೀಶನ ಇನ್ನೋರ್ವ ಸಹಚರನ ಸೆರೆ

Spread the love

ಸರಣಿ ಶೂಟೌಟ್ ಪ್ರಕರಣ: ಕಲಿ ಯೋಗೀಶನ ಇನ್ನೋರ್ವ ಸಹಚರನ ಸೆರೆ

ಮಂಗಳೂರು : ಮಂಗಳೂರು ನಗರದಲ್ಲಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಂದ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಹಳೆಯಂಗಡಿ ನಿವಾಸಿ ದಿನೇಶ್ (35) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದಲ್ಲಿ ಇತ್ತೀಚೆಗೆ ಭೂಗತ ಪಾತಕಿ ಕಲಿ ಯೋಗೀಶ ಎಂಬಾತನು ತನ್ನ ಸಹಚರರಿಂದ ನಡೆಸಿದ ಸರಣಿ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತರಾಮ್ ರವರ ನೇತ್ರತ್ವದ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿ ದಿನೇಶ್         ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ 2 ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಯು ಕಲಿ ಯೋಗೀಶನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾಹಿತಿಯನ್ನು ನೀಡುತ್ತಿದ್ದನು.

ಮಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಸರಣಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಮನೋಜ್ ಕುಮಾರ್, ಚಂದ್ರಶೇಖರ ಎಂಬವರನ್ನು ದಿನಾಂಕ: 28-12-2017 ರಂದು  ವಶಕ್ಕೆ ಪಡೆದುಕೊಂಡು 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳನ್ನು ವಶಪಡಿಸಕೊಳ್ಳಲಾಗಿತ್ತು. ಅಲ್ಲದೇ ನಗರದ ಉದ್ಯಮಿಗಳ ಮಾಹಿತಿಯನ್ನು ಕಲಿ ಯೋಗೀಶನಿಗೆ ಒದಗಿಸುತ್ತಿದ್ದ ತೇಜ್ ಪಾಲ್ ಎಂಬಾತನನ್ನು ದಿನಾಂಕ: 14-02-2018 ರಂದು ದಸ್ತಗಿರಿ ಮಾಡಲಾಗಿತ್ತು. ಕಲಿ ಯೋಗೀಶನೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಮಾಹಿತಿಯನ್ನು ಕಲೆ ಹಾಕಿದ ಸಿಸಿಬಿ ಪೊಲೀಸರು ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್‌ ಶಾಂತಾರಾಮ್, ಪಿಎಸ್ಐ ಶ್ಯಾಮ್ ಸುಂದರ್,  ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love